ಬುಡಕಟ್ಟು ನಿವಾಸಿಗಳ ಮನೆ ಬಾಗಿಲಿಗೆ ಸಂಚಾರಿ ಆರೋಗ್ಯ ಘಟಕ
ಬೆಂಗಳೂರು, ಆಗಸ್ಟ್ 1: ಅರಣ್ಯ ಅವಲಂಬಿತ ಬುಡಕಟ್ಟು ಜನಾಂಗದವರಿಗೆ ಆರೋಗ್ಯ ಸೇವೆ ಒದಗಿಸುವ ಕಾರ್ಯಕ್ರಮ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ವಿಧಾನಸೌಧದೆದುರು ಬುಧವಾರ ಚಾಲನೆ ನೀಡಿದರು.
ಅರಣ್ಯದಲ್ಲಿ ವಾಸಿಸುವ ಅನೇಕ ಕುಟುಂಬಗಳು ಇದುವರೆಗೂ ಆಸ್ಪತ್ರೆ ಮೆಟ್ಟಿಲುಗಳನ್ನೇ ಹತ್ತಿಲ್ಲ, ಕಾಯಿಲೆಗಳು ಬಂದರೂ ಕೂಡ ಅವರು ಅಲ್ಲಿಯೇ ಸಾಯಬೇಕಿತ್ತು, ಹೊರತು ಆಸ್ಪತ್ರೆಗಳಿಗೆ ಕೊಂಡೊಯ್ಯಲು ಸಾಧ್ಯವಾಗುತ್ತಿರಲಿಲ್ಲ ಹಾಗಾಗಿ ಅಂತಹ ಕುಟುಂಬಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ರಾಜ್ಯ ಸರ್ಕಾರ ಸಂಚಾರಿ ಆರೋಗ್ಯ ಘಟಕ ಸೇವೆ ಒದಗಿಸುವ ವಾಹನಗಳಿಗೆ ಚಾಲನೆ ನೀಡಲಾಗಿದೆ.
108 ಆಂಬ್ಯಲೆನ್ಸ್ ಸೇವೆಗೆ 400 ಹೊಸ ವಾಹನ ಸೇರ್ಪಡೆ
ಅರಣ್ಯ ಅವಲಂಬಿತ ಕುಟುಂಬಗಳಿಗೆ ಉಚಿತ ಆರೋಗ್ಯ ಸೇವೆ ಒದಗಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಬೆಳಗಾವಿಯ ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆಯ ಸಹಯೋದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಆರೋಗ್ಯ ಸೇವೆ ಕಾರ್ಯಕ್ಮ ಅನುಷ್ಠಾನಗೊಂಡಿದೆ.
ಒಟ್ಟು 8 ಕೋಟಿ ವೆಚ್ಚದಲ್ಲಿ 16 ವಾಹನಗಳು ಕಾರ್ಯ ನಿರ್ವಹಿಸಲಿವೆ, ಆದಿವಾಸಿಗಳ ಮನೆ ಬಾಗಿಲಿಗೆ ಹೋಗಿ ಆರೋಗ್ಯ ಸೇವೆ ಲಭ್ಯವಾಗಲಿದೆ. ಒಟ್ಟು 8 ಜಿಲ್ಲೆಗಳಲ್ಲಿ ಸೇವೆ ದೊರೆಯಲಿದೆ, ಮೊದಲ ಹಂತದಲ್ಲಿ ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಆರಂಭವಾಗಲಿದೆ. ಪ್ರತಿದಿನ 2 ಗ್ರಾಮಗಳಿಗೆ ಆರೋಗ್ಯ ಘಟಕಗಳು ಭೇಟಿ ನೀಡಲಿವೆ.
ಎರಡನೇ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಭಂಟ್ವಾಳ ಹಾಗೂ ಪುತ್ತೂರು ತಾಲ್ಲೂಕುಗಳು, ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಉಡುಪಿ ತಾಲ್ಲೂಕುಗಳು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮತ್ತು ತರಿಕೆರೆ ತಾಲ್ಲೂಕುಗಳು, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕು ಮತ್ತು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕುಗಳಲ್ಲಿ ಉಳಿದ ಎಂಟು ಸಂಚಾರಿ ಘಟಕಗಳು ಕಾರ್ಯಾರಂಭಿಸಲಿವೆ.
ಸಾಮಾನ್ಯವಾಗಿ ಜನನಿಬಿಡ ಪ್ರದೇಶಗಳಿಂದ ದೂರವಿದ್ದು ತುರ್ತು ಚಿಕಿತ್ಸೆಗಳಿಂದ ವಂಚಿತರಾಗಿರುವ ಅರಣ್ಯ ಅವಲಂಬಿತ ಬುಡಕಟ್ಟು ಮೂಲ ನಿವಾಸಿಗಳ ಮನೆ ಬಾಗಿಲಿನಲ್ಲೇ ಆರೋಗ್ಯ ಚಿಕಿತ್ಸೆ ನೀಡುವ ಈ ಯೋಜನೆ ದುರ್ಬಲವರ್ಗದವರ ಬಗೆಗೆ ನಮ್ಮ ಸರ್ಕಾರಕ್ಕಿರುವ ಬದ್ಧತೆಯನ್ನು ಬಿಂಬಿಸುತ್ತದೆ ಎಂದು ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಇಂತಹ ಹೊಸ ಯೋಜನೆಗಳನ್ನು ರೂಪಿಸುವ ಮೂಲಕ ಸಮಾಜದ ಸೌಲಭ್ಯವಂಚಿತ ಕುಟುಂಬಗಳಿಗೆ ಪೂರಕವಾಗುವ ಹಾದಿಯಲ್ಲಿ ಸಾಗಲಾರಂಭಿಸಿದೆ ಎಂದೂ ಮಾನ್ಯ ಉಪ ಮುಖ್ಯಮಂತ್ರಿಗಳು ಹೇಳಿದ್ದಾರೆ.
ಈ ಸಂಚಾರಿ ಘಟಕಗಳು ಜಿ.ಪಿ.ಎಸ್. ಹಾಗೂ ಡಿಜಿಟಲ್ ಪೇಷಂಟ್ ರೆಕಾರ್ಡ್ ಸಿಸ್ಟಮ್ ಒಳಗೊಂಡಿರುತ್ತದೆ. ರೋಗಿಗಳ ಆರೋಗ್ಯ ತಪಾಸಣೆ ಮಾಡಿ ಸ್ಥಳದಲ್ಲಿಯೇ ಔಷೋಧೋಪಚಾರ ಮಾಡಲಾಗುವುದು. ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಅವಶ್ಯವಿರುವ ರೋಗಿಗಳನ್ನು ಸಮೀಪದ ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಗುವುದು.