ಇಸ್ಕಾನ್ನಿಂದ ಸರ್ಕಾರಿ ಭೂಮಿ ಒತ್ತುವರಿ: ಹೈಕೋರ್ಟ್ ಮಹತ್ವದ ಸೂಚನೆ
ಬೆಂಗಳೂರು. ಜೂನ್.16. ಪ್ರತಿಷ್ಠಿತ ಇಸ್ಕಾನ್ ಸಂಸ್ಥೆಯ ವಿರುದ್ಧ ಮತ್ತೆ ಸರ್ಕಾರಿ ಭೂ ಕಬಳಿಕೆ ಆರೋಪ ಎದುರಾಗಿದೆ. ಈ ಹಿಂದೆಯೂ ಹಲವು ಕಾರಣಗಳಿಂದಾಗಿ ಸುದ್ದಿಯಲ್ಲಿದ್ದ ಸಂಸ್ಥೆ, ಇದೀಗ ಭೂ ಕಬಳಿಕೆಯಂತಹ ಗಂಭೀರ ಆರೋಪ ಎದುರಿಸುತ್ತಿದ್ದು, ಆ ಭೂಮಿ ಒತ್ತುವರಿ ತೆರವು ಕುರಿತು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಇಸ್ಕಾನ್ ಸಂಸ್ಥೆ ಒತ್ತುವರಿ ಮಾಡಿದೆ ಎನ್ನಲಾದ 33.17 ಎಕರೆ ಸರ್ಕಾರಿ ಭೂಮಿ ತೆರವು ಕೋರಿ ಸಲ್ಲಿಕೆಯಾಗಿರುವ ಅರ್ಜಿ ಕುರಿತು ನ್ಯಾಯಾಲಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಅಲ್ಲದೆ ತೆರವು ಕುರಿತು ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಮಹದೇವಪುರ ಗ್ರಾಮದ ನಾಗೇಂದ್ರ ಮತ್ತು ಎಂ.ಎಸ್. ಶಿವಕುಮಾರ್ ಸಲ್ಲಿಸಿದ್ದ ಪಿಐಎಲ್ ಆಲಿಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಅರ್ಜಿದಾರರು ಇಸ್ಕಾನ್ ಸಂಸ್ಥೆ ಒತ್ತುವರಿ ಮಾಡಿರುವ ಜಮೀನು ಗೋಮಾಳ ಜಮೀನು ಆಗಿದೆ. ಇದು ಸ್ಥಳೀಯ ಗ್ರಾಮಸ್ಥರಿಗೆ ಮೀಸಲಿಡಲಾಗಿದೆ. ಮಹದೇವಪುರ ಹೊರವಲಯದಲ್ಲಿದ್ದು, ಇಲ್ಲಿರುವ ಶಾಲೆಗಳಿಗೆ ಮೂಲ ಸೌಕರ್ಯವಿಲ್ಲ. ಮುಂದೆ ಮೂಲ ಸೌಕರ್ಯ ಕಲ್ಪಿಸಲು ಈ ಜಾಗಬೇಕಾಗುತ್ತದೆ. ಆದರೆ, ಒತ್ತುವರಿ ತೆರವುಗೊಳಿಸುವ ಬದಲು ಕಾನೂನು ಬಾಹಿರ ಮಾರ್ಗಗಳ ಮೂಲಕ ಸಕ್ರಮಗೊಳಿಸಲು ಪ್ರಯತ್ನ ನಡೆಯುತ್ತಿದೆ. ಆದ್ದರಿಂದ ಇಸ್ಕಾನ್ಯಿಂದ ಒತ್ತುವರಿಯಾಗಿರುವ 33 ಎಕರೆ ಜಮೀನು ವಶಕ್ಕೆ ಪಡೆಯುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?
Recommended Video
ಮಹದೇವಪುರ ಗ್ರಾಮದ ಸರ್ವೇ 114ರಲ್ಲಿ ಒಟ್ಟು 77 ಎಕರೆ ಭೂಮಿಯನ್ನು ಇಸ್ಕಾನ್ ಸಂಸ್ಥೆ ಹರಾಜಿನಲ್ಲಿ ಖರೀದಿಸಿದೆ. ಜೊತೆಗೆ ಅದೇ ಸರ್ವೇ ನಂಬರ್ನಲ್ಲಿರುವ ಇತರೆ 33.17ಎಕರೆ ಸರ್ಕಾರಿ ಭೂಮಿಯನ್ನು ಇಸ್ಕಾನ್ ಒತ್ತುವರಿ ಮಾಡಿದೆ ಎಂದು ಆರೋಪಿಸಲಾಗಿದೆ, ಈಗಾಗಲೇ ಸರ್ಕಾರಿ ಅಧಿಕಾರಿಗಳು ಒತ್ತುವರಿ ತೆರವುಗೊಳಿಸುವಂತೆ ನೋಟಿಸ್ ಸಹ ನೀಡಿದ್ದಾರೆ.