ಶಿಕ್ಷಕರಿಗೆ ಪರೀಕ್ಷೆ: ರೋಹಿಣಿ ಸಿಂಧೂರಿ ಕ್ರಮಕ್ಕೆ ಸರ್ಕಾರದ ಅಡ್ಡಗಾಲು
ಬೆಂಗಳೂರು, ಜು.13: ಒಂದಲ್ಲಾ ಒಂದು ಕಾರಣದಿಂದ ಸದಾ ಸುದ್ದಿಯಲ್ಲಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ ಆದರೆ ಈ ಬಾರಿ ಅವರಿಗೆ ಸರ್ಕಾರದ ಕ್ರಮದಿಂದ ಹಿನ್ನಡೆ ಉಂಟಾಗಿದೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸದ್ಯ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಾರೆ. ಹಾಸನ ಜಿಲ್ಲೆಯ ಎಸ್ಎಸ್ಎಲ್ಸಿ ಫಲಿತಾಂಶ ತೀವ್ರವಾಗಿ ಕುಸಿದಿರುವುದನ್ನು ಗಮನಿಸಿರುವ ಅವರು ಅದರ ಸುಧಾರಣೆಗೆ ಏನು ಮಾಡಬೇಕೆಂದು ಯೋಚಿಸಿ ಯೋಜನೆಯೊಂದನ್ನು ರೂಪಿಸಿದ್ದರು.
ಹಾಸನದ ಸರ್ಕಾರಿ ಶಿಕ್ಷಕರಿಗೆ ಪರೀಕ್ಷೆ ಹಮ್ಮಿಕೊಂಡ ರೋಹಿಣಿ ಸಿಂಧೂರಿ
ಹಾಸನ ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರ ಬೋಧನಾ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಅವರಿಗೆ ಪರೀಕ್ಷೆ ಒಂದನ್ನು ಏರ್ಪಡಿಸಿದ್ದರು. ಶಿಕ್ಷಕರಿಗೇ ಪರೀಕ್ಷೆ ಏರ್ಪಡಿಸಿದ ಈ ಕ್ರಮ ಶಿಕ್ಷಕರ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಮೂಲಕ ಸರ್ಕಾರದ ಗಮನಕ್ಕೆ ತಂದು ಜಿಲ್ಲಾಧಿಕಾರಿಗಳ ಈ ಕ್ರಮದಿಂದ ತಮ್ಮ ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ದೂರಿದ್ದರು.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರೋಹಿಣಿ ಸಿಂಧೂರಿ ಏರ್ಪಡಿಸಿದ್ದ ಶಿಕ್ಷಕರ ಪರೀಕ್ಷೆಗೆ ತಡೆ ನೀಡಿದೆ. ವಿಧಾನ ಪರಿಷತ್ನಲ್ಲಿ ಗುರುವಾರ ಶಿಕ್ಷಣ ಸಚಿವ ಎನ್ ಮಹೇಶ್ ಸ್ವತಃ ಈ ವಿಷಯ ಸ್ಪಷ್ಟಪಡಿಸಿದ್ದಾರೆ. ಡಿಸಿ ರೋಹಿಣಿ ಸಿಂಧೂರಿ ನಿರ್ಧಾರಕ್ಕೆ ಸರ್ಕಾರದಿಂದ ಬ್ರೇಕ್ ಬಿದ್ದಿದ್ದು, ಪರೀಕ್ಷೆ ನಡೆಸದಂತೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.