ಜನತಾ ಕರ್ಫ್ಯೂ: ಭಾನುವಾರ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್
ಬೆಂಗಳೂರು, ಮಾರ್ಚ್ 21: ಕೊರೊನಾ ವೈರಸ್ ನಿಯಂತ್ರಿಸಲು ಮತ್ತು ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಮಾರ್ಚ್ 22 ರಂದು ಜನತಾ ಕರ್ಫ್ಯೂ ಆಚರಣೆ ಮಾಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಮೋದಿ ಅವರ ಸೂಚನೆಯಂತೆ ದೇಶಾದ್ಯಂತ ಜನತಾ ಕರ್ಫ್ಯೂಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ.
ಜನತಾ ಕರ್ಫ್ಯೂ ಹಿನ್ನೆಲೆ ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್ ಮಾಡಲು ನಿರ್ಧರಿಸಿದೆ ಎಂಬ ಮಾಹಿತಿ ಸಿಕ್ಕಿದೆ. ಸುಮಾರು 177 ಆಸ್ಪತ್ರೆಯ ಒಪಿಡಿಯನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಆದರೆ, ತುರ್ತುಸೇವೆ ಎಂದಿನಂತೆ ಇರಲಿದೆ. ಸರ್ಕಾರಿ ಆಸ್ಪತ್ರೆಗಳ ಜೊತೆಗೆ ಖಾಸಗಿ ಆಸ್ಪತ್ರೆಗಳು ಕೂಡ ಬಂದ್ ಮಾಡಲು ನಿರ್ಧರಿಸಿದೆ.
ಭಾನುವಾರ ಜನತಾ ಕರ್ಫ್ಯೂ; ಏನಿರುತ್ತೆ?, ಏನಿರಲ್ಲ?
ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಮನೆಯಿಂದ ಹೊರಬರಬೇಡಿ ಎಂದು ನರೇಂದ್ರ ಮೋದಿ ಸೂಚಿಸಿದ್ದಾರೆ. ಮನೆಯಲ್ಲಿರುವವರು ಸಂಜೆ 5 ಗಂಟೆ 5 ನಿಮಿಷಕ್ಕೆ ಕಿಟಕಿ ಮತ್ತು ಬಾಗಿಲು ಅಥವಾ ಮಹಡಿ ಮೇಲೆ ಬಂದು ಚಪ್ಪಾಳೆ ಅಥವಾ ಗಂಟೆ ಹೊಡೆಯುವ ಮೂಲಕ ವೈದ್ಯರಿಗೆ, ಕೊರೊನಾ ವಿರುದ್ಧ ಹೋರಾಡಲು ಸಹಕರಿಸುತ್ತಿರುವವರಿಗೆ ಅಭಿನಂದನೆ ಸಲ್ಲಿಸಿ ಎಂದು ಕರೆ ನೀಡಿದ್ದಾರೆ.
ಜನತಾ ಕರ್ಫ್ಯೂ ಹಿನ್ನೆಲೆ ಭಾರತೀಯ ರೈಲ್ವೆ ಬಂದ್ ಆಗಲಿದೆ ಎಂದು ಈಗಾಗಲೇ ರೈಲ್ವೆ ಇಲಾಖೆ ತಿಳಿಸಿದೆ. ಇನ್ನು ದೆಹಲಿ ಮತ್ತು ಬೆಂಗಳೂರಿನಲ್ಲಿ ಮೆಟ್ರೋ ಸ್ಥಗಿತವಾಗಲಿದೆ. ಕರ್ನಾಟಕದಲ್ಲಿ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳ ಪ್ರಯಾಣದಲ್ಲಿ ವ್ಯತ್ಯಾಯ ಉಂಟಾಗಬಹುದು.
ಮಾರುಕಟ್ಟೆ, ಪೆಟ್ರೊಲ್ ಬಂಕ್, ಸರಕು ಸಾಗಣೆ ವಾಹನಗಳು ಭಾನುವಾರ ಸಂಚಾರ ಮಾಡುವುದಿಲ್ಲ. ಓಲಾ, ಉಬರ್ ಮಾಲೀಕರು ಮತ್ತು ಚಾಲಕರು ಜನತಾ ಕರ್ಫ್ಯೂಗೆ ಬೆಂಬಲ ನೀಡಿದ್ದಾರೆ. ಹೋಟೆಲ್ಗಳು ತೆರೆಯುವುದಿಲ್ಲ.