SSLC ಪರೀಕ್ಷೆಗಳನ್ನು ಮುಂದೂಡುವ ಚಿಂತನೆ ಇಲ್ಲ: ಸಚಿವ ಸುರೇಶ್ ಕುಮಾರ್
ಬೆಂಗಳೂರು, ಮಾರ್ಚ್ 20: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಕಾಡುತ್ತಿದೆ. ಪರಿಸ್ಥಿತಿ ಹೀಗೆ ಇದ್ದರೆ ಬಹುಶಃ 10ನೇ ತರಗತಿ ಪರೀಕ್ಷೆಗಳು ಮುಂದಕ್ಕೆ ಹೋಗಬಹುದಾ ಎಂಬ ಗೊಂದಲ ಎದುರಾಗಿದೆ.
ಈ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ 'SSLC ಪರೀಕ್ಷೆಗಳನ್ನು ಮುಂದೂಡುವ ಯಾವುದೇ ಚಿಂತನೆ ಇಲ್ಲ' ಎಂದಿದ್ದಾರೆ.
ಕೊರೊನಾ ಎಫೆಕ್ಟ್: ಶಾಲೆಗಳಿಗೆ ಬೇಸಿಗೆ ರಜೆ ಘೋಷಿಸಿದ ಸರ್ಕಾರ
'ಕಳೆದ ರಾತ್ರಿ ತಾವು ರಾಜಾಜಿನಗರ ಕ್ಷೇತ್ರದಲ್ಲಿ 190ಕ್ಕೂ ಹೆಚ್ಚು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಅವರ ಅಭಿಪ್ರಾಯ ಸಂಗ್ರಹಿಸಿದ್ದು, ಯಾವುದೇ ವಿದ್ಯಾರ್ಥಿ ಪರೀಕ್ಷೆ ಮುಂದೂಡುವ ಬಗ್ಗೆ ಒಲವು ತೋರಿಸಿಲ್ಲ. ಅಲ್ಲದೆ ತಮಗೆ ಈಗ ನಿಗದಿ ಪಡಿಸಿದಂತೆ ಮಾರ್ಚ್ 27ರಿಂದಲೇ ಪರೀಕ್ಷೆಗಳು ಆಗಬೇಕು' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.
'ಆರನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾಡಿದಂತೆ ಪರೀಕ್ಷೆಯನ್ನೇ ರದ್ದು ಮಾಡುವುದಾಗಲಿ, ಏಪ್ರಿಲ್ 9ರ ನಂತರ ಪರೀಕ್ಷೆ ನಡೆಸುವುದಾಗಲಿ ಬೇಡ. ನಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಲು ನಾವು ಸಜ್ಜಾಗಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ' ಎಂದು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ನಿಗದಿಯಂತೆ ಎಸ್ಎಸ್ಎಲ್ಸಿ ಪರೀಕ್ಷೆ
ಆದರೂ ಶಿಕ್ಷಣ ಇಲಾಖೆ ಹಾಗೂ ವೈದ್ಯಕೀಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಸೋಮವಾರದಂದು ಸರ್ಕಾರದ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಹಿಂದೆ ನಿಗದಿಯಾಗಿರುವಂತೆ ಮಾರ್ಚ್ 27 ರಂದು ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಬೇಕಿದೆ. ಈ ಕಡೆ ಕೊರೊನಾ ಭೀತಿ ಅಧಿಕವಾಗುತ್ತಲೇ ಇದೆ. ಸದ್ಯ ಕರ್ನಾಟಕದಲ್ಲಿ ಇದುವರೆಗೂ ಒಟ್ಟು 15 ಜನರಲ್ಲಿ ಸೋಂಕು ಪತ್ತೆಯಾಗಿದೆ. ಒಬ್ಬರು ಮೃತಪಟ್ಟಿದ್ದಾರೆ.