ಕೊರೊನಾ ಎಫೆಕ್ಟ್: ಶಾಲೆಗಳಿಗೆ ಬೇಸಿಗೆ ರಜೆ ಘೋಷಿಸಿದ ಸರ್ಕಾರ
ಬೆಂಗಳೂರು, ಮಾರ್ಚ್ 12: ಬೆಂಗಳೂರಿನಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾಗಿದ್ದು, ಇಂದಿನಿಂದಲೇ ಶಾಲೆಗಳಿಗೆ ಬೇಸಿಗೆ ರಜೆ ಘೋಷಿಸುವಂತೆ ಸರ್ಕಾರ ಆದೇಶ ನೀಡಿದೆ. ಈ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
'ಕೊರೊನಾ ವೈಸರ್ ಸೋಂಕು ಹರಡುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ 1ನೇ ತರಗತಿಯಿಂದ 6ನೇ ತರಗತಿ ಮಕ್ಕಳಿಗೆ ಬೇಸಿಗೆ ರಜೆ ನೀಡುತ್ತಿದ್ದೇವೆ. ಬೆಂಗಳೂರು ನಗರ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ಶಿಕ್ಷಣ ಕ್ಷೇತ್ರಗಳಲ್ಲಿ ರಜೆ ಘೋಷಿಸಲಾಗಿದೆ' ಎಂದು ತಿಳಿಸಿದ್ದಾರೆ.
ಕೊರೊನಾ ಎಫೆಕ್ಟ್: ಪರೀಕ್ಷೆ ಇಲ್ಲದೆ ಮಕ್ಕಳನ್ನು ಪಾಸ್ ಮಾಡಲು ನಿರ್ಧಾರ
'ಈ ಹಿಂದೆ ನಡೆದಿರುವ ಪರೀಕ್ಷೆಗಳನ್ನು ಪರಿಶೀಲಿಸಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಬಡ್ತಿ ನೀಡಬೇಕು ಎಂದು ಆದೇಶ ನೀಡಿದೆ. ಇನ್ನು 7 ರಿಂದ 9 ನೇ ತರಗತಿ ಮಕ್ಕಳಿಗೆ ಸ್ಟಡಿ ಹಾಲಿಡೇ ಘೋಷಣೆ ಮಾಡಲಾಗಿದೆ. ಪರೀಕ್ಷೆ ಸಮಯಕ್ಕೆ ಶಾಲೆಗೆ ಬರಲಿ' ಎಂದು ತಿಳಿಸಿದ್ದಾರೆ.
7ರಿಂದ 9ನೇ ತರಗತಿ ಮಕ್ಕಳಿಗೆ ಮಾರ್ಚ್ 23ರೊಳಗೆ ಪರೀಕ್ಷೆ ಪೂರ್ಣಗೊಳಿಸುವಂತೆ ಶಾಲೆಗಳಿಗೆ ಆದೇಶ ನೀಡಲಾಗಿದೆ. ಇನ್ನು ಎಸ್ಎಸ್ಎಲ್ಸಿ ಪರೀಕ್ಷೆ ಈ ಹಿಂದೆ ನಿಗದಿಯಾಗಿರುವಂತೆ ಮಾರ್ಚ್ 27ರಿಂದ ಪರೀಕ್ಷೆ ನಡೆಯಲಿದೆ. ಮಾಸ್ಕ್ ಹಾಕಿಕೊಂಡು ಬಂದು ಮಕ್ಕಳು ಪರೀಕ್ಷೆ ಬರೆಯಲಿ. ಜೂನ್ 1 ರಿಂದ ಮತ್ತೆ ಶಾಲೆಗಳು ಪುನಾರಂಭ ಆಗಲಿದೆ' ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ.