ಸಿಎಎ ಬಗ್ಗೆ ಸೊಲ್ಲೆತ್ತದ ರಾಜ್ಯಪಾಲ, ಕಾಂಗ್ರೆಸ್ ಗೆ ನಿರಾಸೆ, ಬಿಜೆಪಿಗೆ ಅನುಮಾನ
ಬೆಂಗಳೂರು, ಫೆಬ್ರವರಿ 18: ನಿನ್ನೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ್ದಾರೆ. ಭಾಷಣದ ವೇಳೆ ಪ್ರತಿಭಟನೆ ಮಾಡಲೆಂದು ಸಜ್ಜಾಗಿ ಬಂದಿದ್ದ ವಿಪಕ್ಷಗಳು ಪ್ರತಿಭಟನೆ ಸಂದರ್ಭವೇ ಬರದೆ ನಿರಾಶರಾಗಿದ್ದಾರೆ.
ಹೌದು, ರಾಜ್ಯಪಾಲ ವಜುಭಾಯಿ ವಾಲಾ ಅವರು ತಮ್ಮ ಭಾಷಣದಲ್ಲಿ ಸಿಎಎ-ಎನ್ಆರ್ಸಿ ಕುರಿತು ಉಲ್ಲೇಖ ಮಾಡುತ್ತಾರೆ, ಆಗ ಪ್ರತಿಭಟನೆ ಮಾಡಬೇಕು ಎಂದು ವಿಪಕ್ಷಗಳು ವಿಶೇಷವಾಗಿ ಕಾಂಗ್ರೆಸ್ ಶಾಸಕರು ತಯಾರಾಗಿದ್ದರು. ಆದರೆ ಹಾಗೆ ಆಗಲೇ ಇಲ್ಲ.
ಅಷ್ಟುದ್ದದ ಭಾಷಣ ಮಾಡಿದ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಸಿಎಎ ಹಾಗೂ ಎನ್ಆರ್ಸಿ ಬಗ್ಗೆ ಸೊಲ್ಲೆತ್ತಲಿಲ್ಲ. ಪ್ರತಿಭಟನೆ ಮಾಡುವ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್ ಶಾಸಕರಿಗೆ ಇದು ಭಾರಿ ನಿರಾಸೆ ತಂದಿದೆ.
ಪರಿಷತ್ ಸದಸ್ಯ ಐವಾಸ್ ಡಿಸೋಜಾ ಅವರು ಸದನದ ಒಳಕ್ಕೆ ಭಿತ್ತಿ ಪತ್ರಗಳನ್ನು ಸಹ ಕೊಂಡೊಯ್ದಿದ್ದರು. ಆದರೆ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಸಿಎಎ-ಎನ್ಆರ್ಸಿ ಬಗ್ಗೆ ಉಲ್ಲೇಖವನ್ನೇ ಮಾಡಲಿಲ್ಲ.
ಆದರೆ ರಾಜ್ಯಪಾಲರ ಭಾಷಣದ ನಂತರ ಬಿಜೆಪಿಯವರಿಗೆ ಸಣ್ಣ ಅನುಮಾನವೂ ಉಂಟಾಗಿದೆ. ವಜುಭಾಯಿ ವಾಲಾ ಅವರು ಸಿಎಎ-ಎನ್ಆರ್ಸಿ ಜಾರಿ ಬಗ್ಗೆ ವಿರೋಧ ಹೊಂದಿದ್ದಾರೆಯೇ ಎಂಬ ಅನುಮಾನ ಬಿಜೆಪಿ ಶಾಸಕರಿಗೆ ಕಾಡಲಾರಂಭಿಸಿದೆ.
ಬಿಜೆಪಿಯ ಬಹುತೇಕ ರಾಜ್ಯಪಾಲರುಗಳು ಸಿಎಎ-ಎನ್ಆರ್ಸಿ ಬಗ್ಗೆ ಸಮಯ ಸಿಕ್ಕಾಗೆಲ್ಲಾ ಮಾತನಾಡುತ್ತಿದ್ದಾರೆ. ಅಂತಹುದರಲ್ಲಿ ತಮ್ಮ ಪಕ್ಷದ ಸರ್ಕಾರ ಅಧಿಕಾರದಲ್ಲಿರುವ ರಾಜ್ಯದ ಅಧಿವೇಶನದ ಸಮಯದಲ್ಲಿ ವಜುಭಾಯಿ ವಾಲಾ ಅವರು ಸಿಎಎ-ಎನ್ಆರ್ಸಿ ಬಗ್ಗೆ ಮಾತನಾಡದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ.