ಮೀಸಲಾತಿಯನ್ನು ಶೇ.50ರಷ್ಟು ಹೆಚ್ಚಿಸ್ತಾರಂತೆ ಸಿದ್ದರಾಮಯ್ಯ!
ಬೆಂಗಳೂರು, ಅಕ್ಟೋಬರ್, 15: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗದಲ್ಲಿ ಮೀಸಲು ಒದಗಿಸಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಶಾಸಕರ ಭವನ ಸಮೀಪದಲ್ಲಿರುವ ರಾಕ್ ಗಾರ್ಡನ್ ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. [ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಚೂಡಿದಾರ್ ಭಾಗ್ಯ]
"ಈಗಿರುವ ಮೀಸಲು ಪ್ರಮಾಣವನ್ನು ಶೇ 50ಕ್ಕಿಂತ ಹೆಚ್ಚಳ ಮಾಡುವ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.
ಪರಿಶಿಷ್ಟರ ಕಲ್ಯಾಣಕ್ಕೆ ನಿಗದಿಪಡಿಸಿರುವ ಅನುದಾನ ಸದ್ಬಳಕೆ ಆಗಬೇಕಾದರೆ ತಾಲೂಕು ಮಟ್ಟದಲ್ಲಿ ಕಚೇರಿ ಮತ್ತು ಅಧಿಕಾರಿಗಳು ನಿಯೋಜನೆ ಆಗಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.
ವಾಲ್ಮೀಕಿ ಸಮುದಾಯದ ಮಠ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ 5 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಸಮಾಜದಲ್ಲಿ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿಬಿಟ್ಟಿದೆ, ಆ ವ್ಯವಸ್ಥೆಯನ್ನು ಗೊಬ್ಬರ ಹಾಕಿ ಬಲವಾಗಿ ಬೆಳೆಸಲಾಗಿದೆ, ಆ ವ್ಯವಸ್ಥೆಯ ಬೇರುಗಳನ್ನು ಸಡಿಲ ಮಾಡಬೇಕಿದೆ ಎಂದು ಅವರು ಹೇಳಿದರು.
ಜಾತಿ ವ್ಯವಸ್ಥೆಯಲ್ಲಿ ಅಧಿಕಾರ ಎಂಬುದು ಮಾಸ್ಟರ್ ಕೀ, ಹೀಗಾಗಿ, ಅಧಿಕಾರ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು. ಅಧಿಕಾರ ಮತ್ತು ಸಂಪತ್ತು ಸಮಾನವಾಗಿ ಹಂಚಿಕೆ ಆದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿರು.
ಪ್ರಸ್ತುತ ಇರುವ ಮೀಸಲಾತಿ ಪ್ರಮಾಣ
ಪರಿಶಿಷ್ಟ ಜಾತಿ -18%
ಪರಿಶಿಷ್ಟ ಪಂಗಡ -7%
ಒಕ್ಕಲಿಗ -8.16%
ಲಿಂಗಾಯಿತ -9.8%
ಕುರುಬ -7.1%
ಬ್ರಾಹ್ಮಣ -2.1
ಇಸ್ಲಾಂ -12.5%