ಬಡ್ತಿ ಮೀಸಲಾತಿ: ಮತ್ತೆ 3 ತಿಂಗಳ ಸಮಯ ಕೇಳಿದ ಸರ್ಕಾರ
ಬೆಂಗಳೂರು, ಜನವರಿ 16: ಎಸ್ಸಿ ಎಸ್ಟಿ ಬಡ್ತಿ ಮೀಸಲಾತಿ ಬಗ್ಗೆ ಎಲ್ಲಾ ಇಲಾಖೆಗಳಲ್ಲಿ ಜೇಷ್ಠತಾ ಪಟ್ಟಿ ಸಿದ್ಧವಾಗಿದೆ. ಶೀಘ್ರದಲ್ಲೇ ಜೇಷ್ಠತಾ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಆ ಪಟ್ಟಿಯನ್ನು ಸುಪ್ರೀಂಕೋರ್ಟ್ಗೆ ಕಳುಹಿಸಲಾಗಿದೆ. ಹೀಗಾಗಿ ವಕೀಲರ ಮೂಲಕ ನಾವು ಕಾಲಾವಕಾಶ ಕೋರಿದ್ದೇವೆ. ಶೀಘ್ರದಲ್ಲೇ ಜೇಷ್ಠತಾ ಪಟ್ಟಿ ಸಲ್ಲಿಕೆ ಮಾಡಲಿದದ್ಏವೆ. ಪಟ್ಟಿ ಸಲ್ಲಿಸಲು ಸೋಮವಾರ ಕೊನೆಯ ದಿನಾಂಕವಾಗಿತ್ತು ಎಂದರು.
ಪ್ರಧಾನಿ ಮೆಚ್ಚುಗೆಗೆ ಪಾತ್ರರಾದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ
ರಾಜ್ಯ ಸರ್ಕಾರದ ಪರಿಶಿಷ್ಟ ನೌಕಕರಿಗೆ ನೀಡಿರುವ ಬಡ್ತಿ ಮೀಸಲಾತಿಯನ್ನು ರದ್ದುಪಡಿಸಿ ಮರು ಜೇಷ್ಠತಾ ಪಟ್ಟಿ ಸಿದ್ಧಪಡಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಗಡುವು ಸೋಮವಾರಕ್ಕೆ ಅಂತ್ಯವಾಗಿದೆ. ನ್ಯಾಯಾಲಯದ ಎದುರು ಪ್ರಮಾಣ ಪತ್ರ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕರ್ನಾಟಕ ಸರ್ಕಾರದಲ್ಲಿ 22 ಸಾವಿರಕ್ಕೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನೌಕರರು ಕೆಲಸ ನಿರ್ವಹಿಸುತ್ತಿದ್ದು, ಮತ್ತು ಬಿ ದರ್ಜೆ ಹುದ್ದೆಗಳಲ್ಲಿ ಬಡ್ತಿ ನೀಡುವ ಕುರಿತಂತೆ ಕಳೆದ 20 ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿರುವ ನಿಯಮವನ್ನು ಸುಪ್ರೀಂಕೋರ್ಟ್ ಕಳೆದ ಫೆಬ್ರವರಿಯಲ್ಲಿ ರದ್ದುಪಡಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆಯೊಂದನ್ನು ಅಂಗೀಕರಿಸಿದ್ದು, ರಾಷ್ಟ್ರಪತಿಗಳ ಬಳಿ ಕಳಿಸಿದೆ.
ರಾಷ್ಟ್ರಪತಿಗಳ ಅಂಕಿತ ಆಗುವವರೆಗೆ ವಿವಾದ ಇತ್ಯರ್ಥ ಆಗುವುದು ಕಾನೂನಿನ ತೊಡಕಿಗೆ ಕಾರಣವಾಗಲಿದೆ. ಹೀಗಾಗಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮುಂದೆ ಮೂರು ತಿಂಗಳು ಕಾಲಾವಕಾಶ ಕೇಳಿದೆ. ಈ ಮಧಗಯೆ ೨೦ಕ್ಕೂ ಹೆಚ್ಚು ಇಲಾಖೆಗಳ ಬಡ್ತಿ ಪುನರ್ ಪರಿಶೀಲನಾ ಪಟ್ಟಿಯನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದ್ದರೂ ಇನ್ನು ಸುಮಾರು 60 ಇಲಾಖೆಗಳ ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಿಲ್ಲ.
ಹೀಗಾಗಿ ರಾಷ್ಟ್ರಪತಿಗಳ ಮುಂದಿರುವ ಮಸೂದೆ ಬಾಕಿ ಇರುವ ನೆಪ ಇಟ್ಟುಕೊಂಡು ರಾಜ್ಯ ಸರ್ಕಾರ ಮತ್ತೆ ಮೂರು ತಿಂಗಳ ಕಾಲಾವಕಾಶ ಕೇಳಿದೆ, ಹೀಗಾಗಿ ರಾಜ್ಯ ಸರ್ಕಾರದ ಬಡ್ತಿ ಮೀಸಲಾತಿ ವಿವಾದ ಮತ್ತಷ್ಟು ಕಗ್ಗಂಟಾಗಿ ಮುಂದುವರೆದಿದೆ.