ಬಸ್ ಪ್ರಯಾಣಿಕರಿಗೆ ಸರ್ಕಾರದ ಸಿಹಿ ಸುದ್ದಿ: ದರ ಇಳಿಕೆಗೆ ಚಿಂತನೆ
ಬೆಂಗಳೂರು, ನವೆಂಬರ್ 6: ಸಾರ್ವಜನಿಕ ಸಾರಿಗೆ ವಾಹನಗಳನ್ನು ಬಳಸುವ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಸಂತಸದ ಸುದ್ದಿ ನೀಡಿದೆ. ಶೀಘ್ರದಲ್ಲಿಯೇ ಬಿಎಂಟಿಸಿ ಬಸ್ ಪ್ರಯಾಣದಲ್ಲಿ ದರದಲ್ಲಿ ಇಳಿಕೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಎಷ್ಟು ದರ ಇಳಿಕೆ ಮಾಡಬೇಕು ಎಂಬುದನ್ನು ಚರ್ಚಿಸಿ ನಿರ್ಧರಿಸುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದರು.
ನಗರದಲ್ಲಿ ಬುಧವಾರ ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಯಡಿಯೂರಪ್ಪ, ಜನಸಾಮಾನ್ಯರು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುವಂತೆ ಉತ್ತೇಜಿಸಲು ಮತ್ತು ಇದರಿಂದ ಸಂಚಾರ ದಟ್ಟಣೆ ಮತ್ತು ವಾಯುಮಾಲಿನ್ಯದ ಪ್ರಮಾಣ ತಗ್ಗಿಸಲು ಬಸ್ ದರ ಇಳಿಕೆಗೆ ಉದ್ದೇಶಿಸಲಾಗಿದೆ ಎಂದರು.
ಬಿಎಂಟಿಸಿ ಪ್ರತ್ಯೇಕ ಬಸ್ ಪಥ ವಿಳಂಬ, 15ರಿಂದ ಪ್ರಾಯೋಗಿಕ ಸಂಚಾರ
ಬೆಂಗಳೂರಿನಲ್ಲಿ ಸದ್ಯ 6,500 ಬಿಎಂಟಿಸಿ ಬಸ್ಗಳು ಸಂಚರಿಸುತ್ತಿವೆ. ಇದಕ್ಕೆ 6,000 ಹೊಸ ಬಸ್ಗಳನ್ನು ಸೇರ್ಪಡೆಗೊಳಿಸಲಾಗುವುದು. ಆದರೆ ಹೊಸದಾಗಿ ಬಸ್ಗಳನ್ನು ಖರೀದಿಸಲು ಹೋಗುವುದಿಲ್ಲ. ಅಷ್ಟು ಹಣ ವಿನಿಯೋಗಿಸುವುದು ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಬದಲಾಗಿ ಬಸ್ಗಳನ್ನು ಖಾಸಗಿಯವರಿಂದ ಹಂತ ಹಂತವಾಗಿ ಲೀಸ್ಗೆ ಪಡೆದುಕೊಳ್ಳಲಾಗುತ್ತದೆ. ಬಿಎಂಟಿಸಿ ಆರ್ಥಿಕ ಪುನಶ್ಚೇತನಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಎಲೆಕ್ಟ್ರಿಕ್ ಬಸ್ ಸೇವೆಯನ್ನು ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ಶೇ 50ರಷ್ಟು ಎಲೆಕ್ಟಿಕ್ ಬಸ್ಗಳ ಹೆಚ್ಚಳ ಮಾಡಲಾಗುತ್ತದೆ ಎಂದು ತಿಳಿಸಿದರು.
ಮೆಟ್ರೋ ಪ್ರಯಾಣ ದರ ಇಳಿಕೆ ಇಲ್ಲ
2023ರ ವೇಳೆಗೆ ಪೆರಿಫೆರಲ್ ವರ್ತುಲ ರಸ್ತೆಯನ್ನು ಪೂರ್ಣಗೊಳಿಸಲಾಗುತ್ತದೆ. 300 ಕಿಮೀ ವರೆಗೂ ರಸ್ತೆ ವಿಸ್ತರಣೆ ಮಾಡಲಾಗುತ್ತದೆ. ನಗರದಲ್ಲಿ ಸಂಚಾರ ದಟ್ಟಣೆ ಅಧಿಕವಾಗಿರುವ 12 ಕಾರಿಡಾರ್ಗಳನ್ನು ಗುರುತಿಸಲಾಗಿದೆ. ಮೆಟ್ರೋ ಮಾರ್ಗವನ್ನು ವೈಟ್ಫೀಲ್ಡ್ನಿಂದ ಹೊಸಕೋಟೆಯವರೆಗೂ ವಿಸ್ತರಣೆ ಮಾಡಲಾಗುತ್ತದೆ. ಮೆಟ್ರೋ ಪ್ರಯಾಣದರಲ್ಲಿ ಇಳಿಕೆ ಮಾಡುವುದು ಸಾಧ್ಯವಿಲ್ಲ. ಇದರಿಂದ ನಿರ್ವಹಣೆ ಕಷ್ಟವಾಗುತ್ತದೆ. ದೇಶದ ಎಲ್ಲ ಕಡೆಯೂ ಮೆಟ್ರೋ ದರ ಒಂದೇ ರೀತಿ ಇದೆ ಎಂದರು.
ಕೆರೆಗಳ ನಿರ್ವಹಣೆ ಬಿಬಿಎಂಪಿಗೆ
ಕೆರೆ ಮತ್ತು ರಾಜಕಾಲುವೆಗಳ ಒತ್ತುವರಿ ತೆರವಿಗೆ ಸರ್ಕಾರ ಬದ್ಧವಾಗಿದೆ. ಎಲ್ಲ ಕೆರೆಗಳ ನಿರ್ವಹಣೆಯ ಹೊಣೆಯನ್ನು ಬಿಬಿಎಂಪಿಗೆ ವಹಿಸಲಾಗುತ್ತದೆ ಎಂದು ಹೇಳಿದರು. ಈಗಾಗಲೇ ಕೆರೆ ಏರಿಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಅಲ್ಲಿ ಮನೆಗಳನ್ನು ಕಟ್ಟಿಕೊಂಡವರಿಗೆ ಬೇರೆ ಕಡೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಹೊಸಕೋಟೆವರೆಗೆ ಮೆಟ್ರೋ ವಿಸ್ತರಣೆ: ಯಡಿಯೂರಪ್ಪ ಆಶ್ವಾಸನೆ
ಕಸ ವಿಲೆವಾರಿಗೆ ವೈಜ್ಞಾನಿಕ ಕ್ರಮ
ಬೆಂಗಳೂರು ಅಭಿವೃದ್ಧಿ ಕುರಿತು ಮೂರು ಗಂಟೆ ಚರ್ಚೆ ಮಾಡಲಾಗಿದೆ. ನಗರದ ಕಸ ವಿಲೆವಾರಿಗೆ ಕ್ರಮ ತೆಗೆದುಕೊಂಡಿದ್ದೇವೆ. ನಿತ್ಯ 2,500 ಮೆಟ್ರಿಕ್ ಟನ್ ಕಸ ವಿಲೇವಾರಿ ಆಗುತ್ತಿದೆ. ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅಗತ್ಯ ಎಂಜಿನಿಯರ್ ಮತ್ತು ಪೌರ ಕಾರ್ಮಿಕರನ್ನು ಕೂಡ ಹೆಚ್ಚುವರಿಯಾಗಿ ನೇಮಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಬೆಂಗಳೂರಲ್ಲಿ ಮನೆ ಕಟ್ಟುವವರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ
ಮೊಬಿಲಿಟಿ ಮ್ಯಾನೇಜ್ಮೆಂಟ್ ಅಥಾರಿಟಿ
ಡಿ. 15ರ ನಂತರ ಮತ್ತೆ ಸಭೆ ನಡೆಸಲಾಗುತ್ತದೆ. ಇಂದು ನಡೆದ ಸಭೆಯಲ್ಲಿ ಚರ್ಚೆಯಾದ ವಿಷಯಗಳ ಅನುಷ್ಠಾನ, ನೀಡಲಾದ ಸಲಹೆ ಸೂಚನೆಗಳ ಪರಿಶೀಲನೆಗೆ ಕುರಿತು ಅಂದು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಬೆಂಗಳೂರು ಮೊಬಿಲಿಟಿ ಮ್ಯಾನೇಜ್ಮೆಂಟ್ ಅಥಾರಿಟಿ ಸ್ಥಾಪನೆ ಮಾಡಲಾಗುತ್ತದೆ ಎಂದು ಯಡಿಯೂರಪ್ಪ ತಿಳಿಸಿದರು.