ಜೀವವೈವಿಧ್ಯವನ ಭಾಗ 4: ಪರಿಸರ ಪ್ರಿಯರಿಗೊಂದು ಗುಡ್ ನ್ಯೂಸ್
Learn to say NO! ಯಾರದ್ದೋ ಬಲವಂತಕ್ಕಾಗಿ ಇಲ್ಲವೇ ಒತ್ತಡಕ್ಕಾಗಿ ನಮಗೆ ಇಷ್ಟವಿಲ್ಲದ ಕೆಲಸಗಳನ್ನು ಮಾಡಬಾರದು. We need to learn to say No. ಎಂದು ನನ್ನ ಕಾಲೇಜು ದಿನಗಳಲ್ಲಿ ಯಾರಿಂದಲೋ ಕೇಳಿ ತಿಳಿದಿದ್ದೆ. ಇಡೀ ಜೀವಮಾನಕ್ಕೆ ಅಳವಡಿಸಿಕೊಳ್ಳಬಹುದಾದ ತತ್ವವಿದು. ನಿಮಗೂ ಇಷ್ಟವೆನಿಸಿದರೆ ಅಳವಡಿಸಿಕೊಳ್ಳಿ. ನೀವು ಇಷ್ಟವಿಲ್ಲದ ಕೆಲಸ ಮಾಡಲಿಲ್ಲವೆಂಬ ಒಳಗಿನ ಆನಂದ ನಿಮ್ಮನ್ನು ಹೆಚ್ಚು ಪ್ರಫುಲ್ಲವಾಗಿಡಬಲ್ಲದು.
ಈ ವಿಷಯ ನೆನಪಾಗಿದ್ದಕ್ಕೆ ಕಾರಣವಿಷ್ಟೇ. ಇತ್ತೀಚೆಗೆ ಬೆಂಗಳೂರು ವಿ.ವಿ. ಜ್ಞಾನಭಾರತಿ ಆವರಣದ ಜೀವ ವೈವಿಧ್ಯವನ ಪ್ರದೇಶದಲ್ಲಿ ಮೂರು ಸಂಸ್ಥೆಗಳಿಗಾಗಿ ಸುಮಾರು 32 ಎಕರೆ ಜಾಗವನ್ನು ಸರ್ಕಾರ ಬೋಗ್ಯಕ್ಕೆ ನೀಡಿತ್ತು. ಆ ಬಗ್ಗೆ ದೊಡ್ಡ ವಿವಾದ ಸೃಷ್ಟಿಯಾಗಿ ಮಾಧ್ಯಮಗಳಲ್ಲಿ ಜೀವ ವೈವಿಧ್ಯವನ ನಾಶ ಮಾಡಬಾರದು, ಇಲ್ಲಿನ ಪರಿಸರವನ್ನು ಉಳಿಸಿಕೊಳ್ಳಬೇಕೆಂದು ಅನೇಕ ಬಾರಿ ಸುದ್ದಿಯಾಯಿತು. ಮುಂದೆ ಓದಿ...
ಜೀವವೈವಿಧ್ಯ ವನ ಭಾಗ 2; ನಮ್ಮ ಗಿಡ-ನಮ್ಮ ವನ- ಕಡಿಯಲು ಬಿಡೆವು
ಮೌನ ಧರಣಿ ಕುಳಿತಿದ್ದ ಪರಿಸರ ಪ್ರಿಯರು
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಸರಣಿ ಟ್ವೀಟ್ ಮಾಡುವ ಮೂಲಕ ಜೀವವೈವಿಧ್ಯ ವನ ಪ್ರದೇಶವನ್ನು ಕಟ್ಟಡಗಳಿಗೆ ಕೊಡುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಸರ್ಕಾರ ಆದೇಶ ಹಿಂಪಡೆಯಲು ಒತ್ತಾಯಿಸಿದ್ದರು. ಖ್ಯಾತ ಪರಿಸರ ತಜ್ಞರಾದ ಯಲ್ಲಪ್ಪರೆಡ್ಡಿ ತಮಗೆ ನೀಡಿದ್ದ ಗೌರವ ಡಾಕ್ಟರೇಟ್ ಹಿಂದಿರುಗಿಸಿ ತಮ್ಮ ಪ್ರತಿರೋಧವನ್ನು ಪ್ರಕಟಿಸಿದ್ದರು. ವಾಕರ್ಸ್ ಜಾಗರ್ಸ್ ಹಾಗೂ ಪರಿಸರ ಪ್ರಿಯರು ಜ್ಞಾನಭಾರತಿಯಲ್ಲಿ ಮೌನ ಧರಣಿ ಮಾಡಿದ್ದರು. ಜೈವಿಕ ವನದ ವಿಶೇಷಾಧಿಕಾರಿ ರೇಣುಕಾ ಪ್ರಸಾದ್ ವನ ಉಳಿಸಿಕೊಳ್ಳಲು "ಗಾಂಧಿ ಮಾರ್ಗದ ಚಳವಳಿಯನ್ನು ಇನ್ನೂ ಜೀವಂತವಾಗಿಟ್ಟಿದ್ದಾರೆ'.
ಕೊನೆಗೂ ಉಳಿದ ಬಯೋ ಪಾರ್ಕ್
ಇವೆಲ್ಲ ಸಾರ್ವಜನಿಕ ಪ್ರತಿರೋಧದ ಧ್ವನಿಗಳು ಸರ್ಕಾರಕ್ಕೆ ಕೇಳಿಸಿರಬೇಕು. ಮೂರೂ ಸಂಸ್ಥೆಗಳಿಗೆ 30 ವರ್ಷಗಳ ಕಾಲ ನೀಡಿದ್ದ ಲೀಸ್ ಅಗ್ರಿಮೆಂಟ್ ಗಳಲ್ಲಿ ಬಯೋ ಪಾರ್ಕ್ ಗೆ ಯಾವುದೇ ಹಾನಿ ಮಾಡಬಾರದೆಂಬ ಷರತ್ತು ವಿಧಿಸಲಾಗಿದೆ. ಇದೊಂದೇ ಷರತ್ತಿನನ್ವಯ ಜ್ಞಾನಭಾರತಿ ಆವರಣದಲ್ಲಿ ಈ ಸಂಸ್ಥೆಗಳಿಗೆ ನೀಡಲಾಗಿರುವ ಜಾಗದಲ್ಲಿ ಏನೂ ಮಾಡುವಂತಿಲ್ಲ. ಹಾಗಾಗಿ ಈ ಕರಾರು ಅನೂರ್ಜಿತವಾದಂತೆಯೇ ಸರಿ.
ಇದನ್ನು ತಿಳಿದ ಹಿರಿಯರಾದ ಯಲ್ಲಪ್ಪರೆಡ್ಡಿ ಹಾಗೂ ರೇಣುಕಾ ಪ್ರಸಾದ್ ಸಂತಸ ವ್ಯಕ್ತಪಡಿಸಿದ್ದಾರೆ. ವನ ಉಳಿಸಿಕೊಳ್ಳಲು ಹೋರಾಡಿದವರೆಲ್ಲರೂ ಸಿಹಿ ಹಂಚಿ ಸಂಭ್ರಮಿಸತೊಡಗಿದ್ದಾರೆ.
ಆತಂಕವಂತೂ ಇದ್ದೇ ಇದೆ
ಆದರೂ ಒಂದು ಆತಂಕ ಇದ್ದೇ ಇದೆ. ಇದೀಗ ಸರ್ಕಾರ ತನ್ನ ತಪ್ಪನ್ನು ಅರಿತು ತಿದ್ದಿಕೊಂಡಿದೆಯಾದರೂ ‘Learn to say No' ಎಂಬ ಧಾಟಿಯಲ್ಲಿ ‘learn to commit new mistakes' ಎಂದು ಬೇರೇನಾದರೂ ದಾರಿ ಹುಡುಕಿ ವನ ನಾಶ ಮಾಡುವ ಕೆಲಸಕ್ಕೆ ಮುಂದಾಗಬಹುದಾ? ಕಾದು ನೋಡಬೇಕು. ಹಾಗಾಗದೆ ನೋಡಿಕೊಳ್ಳಲು ಹೆಚ್ಚಿನ ಜವಾಬ್ದಾರಿ ಅಧಿಕಾರಿಗಳ ಮೇಲೇಯೇ ಇದೆ. ಅವರು ಕುರುಡರೂ ಆಗಬಾರದು, ಜಾಣ ಕಿವುಡರೂ ಆಗಬಾರದು. ಅಷ್ಟಾದರೆ ಜೀವವೈವಿಧ್ಯವನ ಉಳಿಯಲಿದೆ. ಮುಂದಿನ ಪೀಳಿಗೆಗೆ ಕನಿಷ್ಠ ಉತ್ತಮ ಆಕ್ಸಿಜನ್ ಬಿಟ್ಟು ಹೋದೆವೆಂಬ ನೆಮ್ಮದಿಯೂ ನಿಮಗೆ ಸಿಗಲಿದೆ.
Recommended Video
600 ಎಕರೆ ಪ್ರದೇಶದಲ್ಲಿ ನಿರ್ಮಾಣವಾದ ಜೈವಿಕ ವನ
ಇಲ್ಲಿ ಸುಮಾರು ಆರು ನೂರು ಎಕರೆ ಪ್ರದೇಶದಲ್ಲಿ ಜೈವಿಕ ವನ ನಿರ್ಮಾಣ ಮಾಡಲಾಗಿದೆ. 20 ವರ್ಷಗಳ ಕಾಲ ಬೆಂಗಳೂರು ವಿವಿಯ ರಾ.ಸೇ.ಯೋ ವಿದ್ಯಾರ್ಥಿಗಳು, ನಾಗರೀಕರು, ಪರಿಸರ ಕಾಳಜಿಯ ಸಂಘ ಸಂಸ್ಥೆಗಳು ಶ್ರಮಿಸಿವೆ. ಇಲ್ಲೀಗ 575 ಜಾತಿಯ ಗಿಡಮರಗಳಿವೆ. 142 ಜಾತಿಯ ಚಿಟ್ಟೆಗಳಿವೆ. 148 ಜಾತಿಯ ಪಕ್ಷಿಗಳಿವೆ. ಬಿದ್ದ ಮಳೆ ನೀರನ್ನು ಓಡಲು ಬಿಡದೆ ತೆವಳುವಂತೆ ಮಾಡಲಾಗಿದೆ. ತೆವಳುವ ನೀರನ್ನು ನಿಲ್ಲುವಂತೆ ಮಾಡಲಾಗಿದೆ. ನಿಂತ ನೀರು ಭೂಮಿಗೆ ಇಂಗುತ್ತಿದೆ. ಹೀಗೆ ವಾರ್ಷಿಕ 15 ಕೋಟಿ ಲೀಟರ್ ನೀರು ಭೂಮ್ತಾಯಿಯ ಒಡಲು ಸೇರುತ್ತಿದೆ. ಇದೊಂದು ಬಯಲು ಪ್ರಯೋಗಾಲಯವೂ ಹೌದು. ಸಂಶೋಧನೆಗೆ ವಸ್ತುವೂ ಹೌದು. ಬಹುದೊಡ್ಡ ಮಾನವ ನಿರ್ಮಿತ ಜೀವವೈವಿಧ್ಯವನವೂ ಹೌದು. ಹಾಗಾಗಿ ಈ ವನ ಉಳಿಯಲೇಬೇಕು. ಸರ್ಕಾರ ಕೂಡಲೇ ಮೂರೂ ಸಂಸ್ಥೆಗಳಿಗೆ ನೀಡಿರುವ ಬೋಗ್ಯದ ಒಪ್ಪಂದವನ್ನು ರದ್ದುಪಡಿಸಬೇಕು.