ಮಲ್ಲೇಶ್ವರಂ ಸ್ಫೋಟ: ಗಾಯಾಳು ಲಿಷಾಗೆ ಸರ್ಕಾರಿ ಉದ್ಯೋಗ
ಬೆಂಗಳೂರು, ಜೂನ್ 23 : ನಗರದ ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿ 2013 ಏಪ್ರಿಲ್ 17ರಂದು ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಲಿಷಾಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ಕೊನೆಗೂ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
2016ರ ಅಕ್ಟೋಬರ್ ನಲ್ಲಿ ಸರ್ಕಾರಿ ಉದ್ಯೋಗ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಜೊತೆಗೆ ಪರಿಹಾರ ನೀಡುವ ಕುರಿತು ಕೇಂದ್ರ ಸರ್ಕಾರಕ್ಕೂ ಸೂಚಿಸಿತ್ತು.
ಲಿಷಾ ಪಿಯುಸಿ ಓದುತ್ತಿದ್ದಾಗ ನಡೆದ ದುರಂತದಲ್ಲಿ ಗಂಭೀರ ಗಾಯಗೊಂಡಿದ್ದು, ಒಂದು ಕಾಲು ಮುರಿದುಹೋಗಿತ್ತು. ಚಿಕಿತ್ಸೆಗಾಗಿ ಲಕ್ಷಾಂತರ ರು. ವೆಚ್ಚ ಮಾಡಿದ್ದರೂ ಲಿಷಾಳ ಕಾಲು ಇನ್ನೂ ಪೂರ್ಣ ಗುಣಮುಖವಾಗಿಲ್ಲ.
ಲೀಷಾಗೆ ಉದ್ಯೋಗ ಕೊಟ್ಟಿಲ್ಲವೇಕೆ? ಸರ್ಕಾರಕ್ಕೆ ಕೋರ್ಟಿನಿಂದ ನೋಟಿಸ್
ಇದೀಗ ಪದವೀಧರೆಯಾಗಿರುವ ಆಕೆಗೆ ಅನುಕಂಪದ ಆಧಾರದಲ್ಲಿ ಗ್ರೂಪ್ ಸಿ ಹುದ್ದೆ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಅದೇ ರೀತಿ ಕಳೆದ ಫೆಬ್ರವರಿಯಲ್ಲಿ ಅಪಘಾತದಲ್ಲಿ ಮೃತಪಟ್ಟ ಲೋಕಾಯುಕ್ತ ಎಸ್ಪಿ ಆಗಿದ್ದ ಎಸ್. ರವಿಕುಮಾರ್ ಅವರ ಪತ್ನಿ ಐ.ಎಸ್. ಅನಿತಾ ಅವರಿಗೂ ಅನುಕಂಪದ ಆಧಾರದ ಮೇಲೆ 'ಸಿ' ಗ್ರೂಪ್ ಹುದ್ದೆ ನೀಡಲು ತೀರ್ಮಾನಿಸಲಾಗಿದೆ ರಾಜ್ಯ ಎಂದು ಕಾನೂನು ಸಚಿವ ಟಿ ಬಿ ಜಯಚಂದ್ರ ತಿಳಿಸಿದ್ದಾರೆ.