ಸಾರಿಗೆ ನೌಕರರೊಂದಿಗೆ ಸರ್ಕಾರದ ಸಂಧಾನ ಸಫಲ: ರಾತ್ರಿಯಿಂದಲೇ ಬಸ್ ಸಂಚಾರ
ಬೆಂಗಳೂರು, ಡಿಸೆಂಬರ್ 13: ಸಾರಿಗೆ ನೌಕರರ ಜೊತೆ ಸರ್ಕಾರದ ಸಂಧಾನ ಸಫಲವಾಗಿದ್ದು, ಭಾನುವಾರ ರಾತ್ರಿಯಿಂದಲೇ ಕೆ.ಎಸ್.ಆರ್.ಟಿ.ಸಿ ಸಂಚಾರ ಆರಂಭವಾಗಲಿದೆ ಎಂದು ಮಾಜಿ ಸಾರಿಗೆ ಸಚಿವ ಹಾಗೂ ಹಾಲಿ ಕಂದಾಯ ಆರ್.ಅಶೋಕ್ ತಿಳಿಸಿದರು.
ಸಂಬಳ, ಓಟಿ, ವರ್ಗಾವಣೆ, ಕಿರುಕುಳ ನಿವಾರಣೆ ಮುಂತಾದ ಭರವಸೆ ಈಡೇರಿಸುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಿದ್ದು, ಆದರೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರನ್ನಾಗಿಸಲು ಸಾಧ್ಯವಿಲ್ಲವೆಂದು ಇದೇ ವೇಳೆ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದರು.
ಸಾರಿಗೆ ಮುಷ್ಕರ ವಾಪಸ್: ಕೆಎಸ್ಸಾರ್ಟಿಸಿ ಸಂಚಾರ ಆರಂಭ
ಸಭೆ ಬಳಿಕ ಮಾತನಾಡಿದ ಸಾರಿಗೆ ಸಚಿವರೂ ಅದ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ""ಈ ಹೋರಾಟದಲ್ಲಿ ಭಾಗಿಯಾದ ಎಲ್ಲರನ್ನೂ ಕರೆಸಿ ಮಾತಾಡಿದ್ದೇವೆ, ರಾತ್ರಿಯಿಂದಲೇ ಬಸ್ ಸಂಚಾರ ಆರಂಭಿಸುವುದಾಗಿ ಹೇಳಿದ್ದಾರೆ'' ಎಂದರು.
ಭತ್ಯೆ ಕೊಡಲು ಸಹ ಒಪ್ಪಿದ್ದೇವೆ
ತರಬೇತಿ ಅವಧಿ ಎರಡು ವರ್ಷದಿಂದ ಒಂದು ವರ್ಷಕ್ಕೆ ಇಳಿಸಲು ಒಪ್ಪಿದ್ದು, ಕೋವಿಡ್ ಸಂದರ್ಭದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕೆಲವೇ ದಿನಗಳಲ್ಲಿ 30 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದರು. ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಭತ್ಯೆ ಕೊಡಲು ಸಹ ಒಪ್ಪಿದ್ದೇವೆ ಎಂದು ಹೇಳಿದರು. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಭತ್ಯೆ ನಿಲ್ಲಿಸಿದ್ದೆವು, ಈಗ ಜನೆವರಿಯಿಂದ ಮತ್ತೆ ಭತ್ಯೆ ನೀಡುತ್ತೇವೆ. ಅದೇ ರೀತಿ ಮೇಲಾಧಿಕಾರಿಗಳ ಕಿರುಕುಳಕ್ಕೆ ಬ್ರೇಕ್ ಹಾಕಲು ಸಮಿತಿ ರಚಿಸುತ್ತೇವೆ. ಆದರೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣನೆ ಮಾಡಲು ಆಗುವುದಿಲ್ಲವೆಂದು ಇದೇ ಸಂದರ್ಭದಲ್ಲಿ ಮಾಧ್ಯಮಗಳಿಗೆ ತಿಳಿಸಿದರು.
ಸಂಧಾನ ಸಭೆ ಸಫಲ
ಆರನೇ ವೇತನ ಆಯೋಗದ ಶಿಫಾರಸುಗಳ ವೇತನ ಪರಿಷ್ಕರಣೆ ಸಂಬಂಧಿಸಿದಂತೆ ಮುಂದಿನ ಹಣಕಾಸು ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಮಾಹಿತಿ ನೀಡಿದರು.
ಸಂಧಾನ ಸಭೆ ಸಫಲವಾದ ಬಳಿಕ ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ಶನಿವಾರ ಮುಖ್ಯಮಂತ್ರಿಗಳು ಕರೆದು ನನ್ನನ್ನು ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಕರೆದು, ಆದಷ್ಟು ಬೇಗ ಸಮಸ್ಯೆ ಬಗೆಹರಿಸಿ ಎಂದು ಹೇಳಿದ್ದರು. ಭಾನುವಾರ ಬೆಳಿಗ್ಗೆ ನಮ್ಮ ಮನೆಯಲ್ಲೂ ಮೀಟಿಂಗ್ ಮಾಡಿದೆವು, ಮೀಟಿಂಗ್ ಸಕ್ಸೆಸ್ ಆಗಿದೆ ಎಂದರು.
ನನ್ನಿಂದಲೇ ಸಕ್ಸೆಸ್ ಆಗಿದೆ ಅಂತ ಹೇಳಲ್ಲ
ಎಲ್ಲಾ ಲೀಡರ್ ಗಳಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ, ಜನ ಸಾಮಾನ್ಯರ ಕಷ್ಟ ನೋಡಿ ನಮಗೂ ಕರಳು ಚುರುಕ್ ಅನಿಸಿತ್ತು. ಇದನ್ನು ಎಲ್ಲಾ ಮುಖಂಡರ ಗಮನಕ್ಕೆ ತಂದಿದ್ದೆ. ಈ ಸಭೆ ನನ್ನಿಂದಲೇ ಸಕ್ಸೆಸ್ ಆಗಿದೆ ಅಂತ ನಾನು ಹೇಳುವುದಿಲ್ಲ ಎಂದರು.
ಕಳೆದ ಮೂರು ದಿನಗಳಿಂದ ಪ್ರತಿಭಟನಾ ನಿರತ ಸಾರಿಗೆ ನೌಕರರ ಮೇಲೆ ಯಾವ ಯಾವ ಕೇಸ್ ಹಾಕಿದ್ದಾರೋ, ಆ ಎಲ್ಲಾ ಕೇಸ್ ವಿತ್ ಡ್ರಾ ಮಾಡುತ್ತೇವೆ. ಈ ಕುರಿತು ಗೃಹ ಸಚಿವ ಬೊಮ್ಮಾಯಿ ಕೂಡಾ ಒಪ್ಪಿಕೊಂಡಿದ್ದಾರೆ. ಸಿಎಂ ಜೊತೆ ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಸಾರಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.
ಬಸವರಾಜ್ ಬೊಮ್ಮಾಯಿ ಅವರಿಗೆ ಅಭಿನಂದನೆ
ಸಾರಿಗೆ ಇಲಾಖೆ ಆಲದಮರ ಇದ್ದಂಗೆ. ಕಾಂಗ್ರೆಸ್ ನವರಿಗೆ ಅರಾಜಕತೆ ಸೃಷ್ಟಿ ಆಗಬೇಕು ಅನ್ನುವುದಿತ್ತು. ಸನ್ಮಾನ್ಯ ಕನಕಪುರ ಬಂಡೆಯವರಿಗೆ ಹೀಗೆ ಗಲಾಟೆ ಆಗುತ್ತಿದ್ದರೆ ಮಾತ್ರ ಆನಂದ. ಬಂಡೆದು ಬಂಡೆ ಸ್ಟೈಲು, ಅಶೋಕಂದು ಅಶೋಕ್ ಸ್ಟೈಲು ಎಂದು ಮಾರ್ಮಿಕವಾಗಿ ನುಡಿದರು. ಇದೇ ವೇಳೆ ಸಾರಿಗೆ ನೌಕರರ ಹೋರಾಟದ ನೇತೃತ್ವ ವಹಿಸಿರುವ ಮುಖಂಡರ ಮಾತನಾಡಿ, ಸಚಿವರಾದ ಆರ್.ಅಶೋಕ್, ಲಕ್ಷ್ಮಣ್ ಸವದಿ, ಬಸವರಾಜ್ ಬೊಮ್ಮಾಯಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಒಂದು ಹಂತಕ್ಕೆ ನಮ್ಮ ಬೇಡಿಕೆಗಳು ಈಡೇರಿದ್ದು, ಅದನ್ನು ಪ್ರೀಡಂ ಪಾರ್ಕ್ ನಲ್ಲಿ ಘೋಷಣೆ ಮಾಡುತ್ತೇವೆ ಎಂದರು.
ಕೋಡಿಹಳ್ಳಿ ಚಂದ್ರಶೇಖರ್ ಬಗ್ಗೆ ಮಾತನಾಡಲು ಸಚಿವರು ಹಿಂದೇಟು
ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಹೇಳಿದೆ. NINC ರದ್ದು ಮಾಡುತ್ತೇವೆ ಎಂದು ಸರ್ಕಾರ ಹೇಳಿದೆ. ಕೋವಿಡ್ ಇರುವ ಕಾರಣ ಮುಂದಿನ ದಿನಗಳಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಸರ್ಕಾರ ಹೇಳಿದ್ದು, ಈ ಹೋರಾಟಕ್ಕೆ ಕೋಡಿಹಳ್ಳಿ ಚಂದ್ರಶೇಖರ ಕಾರಣ. ಅವರಿಗೂ ಅಭಿನಂದನೆಗಳು ಎಂದು ಸಾರಿಗೆ ನೌಕರರ ಮುಖಂಡರು ಹೇಳಿದರು. ಕೋಡಿಹಳ್ಳಿ ಚಂದ್ರಶೇಖರ್ ಬಗ್ಗೆ ಮಾತನಾಡಲು ಸಚಿವರು ಹಿಂದೇಟು ಹಾಕಿದ್ದು ಕಂಡುಬಂದಿತು. ಕೇವಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಮಾತ್ರ ಸಚಿವ ಆರ್.ಅಶೋಕ್ ಟಾಂಗ್ ಕೊಟ್ಟರು. ಡಿ.ಕೆ ಶಿವಕುಮಾರ್ ಅವರ ನಿರೀಕ್ಷಿಸಿದಂತೆ ಅರಾಜಕತೆಗೆ ನಾವು ಅವಕಾಶ ಕೊಟ್ಟಿಲ್ಲ ಎಂದರು.