ನೀತಿ ಸಂಹಿತೆ ನೆಪದಲ್ಲಿ ದೇವರ ದಾಸಿಮಯ್ಯಗೆ ಅಪಮಾನ : ಖಂಡನೆ
ಬೆಂಗಳೂರು, ಏ.11: ಲೋಕಸಭಾ ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ವಚನಕಾರ, ನೇಕಾರ ಸಂತ ಶ್ರೀ ದೇವರ ದಾಸಿಮಯ್ಯರ ಜಯಂತಿಗೆ ಅಪಮಾನ ಮಾಡಲಾಗಿದೆ ಎಂದು ನೇಕಾರರ ಜಾಗೃತಿ ವೇದಿಕೆ ಅಧ್ಯಕ್ಷ ಲಿಂಗರಾಜು ಡಿ ನೊಣವಿನಕೆರೆ ತಿಳಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ವಚನ ಚಳವಳಿಗೆ ಭದ್ರ ಬುನಾದಿ ಹಾಕಿಕೊಟ್ಟ ಶ್ರೇಷ್ಠ ಶರಣ, ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯರ ಜಯಂತಿಯನ್ನು ಇಲಾಖೆಯು ಏ.10ರಂದು 'ನಯನ' ಸಭಾಂಗಣದಲ್ಲಿ ಸರಳವಾಗಿ ಆಯೋಜಿಸಿತ್ತು. ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯನ್ನೂ ಕರೆಯದೆ, ಇತ್ತ ಪತ್ರಿಕೆಗಳ ಮೂಲಕ ಜಾಹೀರಾತನ್ನೂ ಸಹ ಪ್ರಕಟಿಸಲಿಲ್ಲ.
ಕನ್ನಡ ಮತ್ತು ಸಂಸ್ಕೃತ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ ಅವರ ಧೋರಣೆ ಖಂಡನಾರ್ಹ ಎಂದರು. ಅಲ್ಲದೆ ಶ್ರೀ ದೇವರ ದಾಸಿಮಯ್ಯರ ಕುರಿತಂತೆ ಸಾಹಿತಿಗಳಿಂದಾಗಲೀ, ವಿಚಾರವಂತರಿಂದಾಗಲೀ, ವಿಶ್ಲೇಷಣೆಕಾರರಿಂದಾಗಲೀ ಉಪನ್ಯಾಸವನ್ನೂ ಏರ್ಪಡಿಸದೆ ಕೇವಲ ಕಾಟಾಚಾರದ ಜಯಂತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಚರಿಸಿರುವ ಮೂಲಕ ಶ್ರಮಿಕ ಸಮಾಜ, ತಳ ಸಮುದಾಯವಾದ ನೇಕಾರ ಸಮಾಜವನ್ನು ಅವಮಾನಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇವರ ದಾಸಿಮಯ್ಯ ಜಯಂತಿ ಆಚರಣೆಯನ್ನು ಎಲ್ಲ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಯಾವುದೇ ನೀತಿ ಸಂಹಿತೆ ಅಡ್ಡಿಯಾಗದಿರುವಾಗ ರಾಜಧಾನಿಯಲ್ಲಿ ಜಯಂತಿಯನ್ನು ಆಚರಿಸಲು ನೀತಿ ಸಂಹಿತೆ ಹೇಗೆ ಅಡ್ಡಿಯಾಯಿತು ? ಕೇವಲ 25 ನಿಮಿಷಗಳಲ್ಲಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದ್ದೂ ಅಲ್ಲದೆ ಕಾರ್ಯಕ್ರಮದ ನಡುವೆ ಸಭಾಭವನದಿಂದ ಎದ್ದು ಹೋಗುವ ಮೂಲಕ ನಿರ್ದೇಶಕರು ಶ್ರೀ ದೇವರ ದಾಸಿಮಯ್ಯರ ವ್ಯಕ್ತಿತ್ವಕ್ಕೆ ಅಗೌರವ ತೋರಿದ್ದಾರೆ ಎಂದು ಲಿಂಗರಾಜು ಡಿ. ನೊಣವಿನಕೆರೆ ಆರೋಪಿಸಿದರು.
ಕರ್ನಾಟಕದ ಲೋಕಸಭಾ ಸದಸ್ಯರಲ್ಲಿ ಯಾರು ಎಷ್ಟು ಓದಿದ್ದಾರೆ?
ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯರ ಜಯಂತಿ ಆಚರಣೆ ವಿಚಾರದಲ್ಲಿ ನಿರ್ದೇಶಕರು ತೋರಿರುವ ನಿರ್ಲಕ್ಷ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಿ ಚುನಾವಣೆ ಬಳಿಕ ಅರ್ಥಪೂರ್ಣ ಜಯಂತಿ ಆಚರಣೆಗೆ ಮುಂದಾಗಬೇಕೆಂದು ವೇದಿಕೆಯು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ವೇದಿಕೆ ರಾಜ್ಯಾಧ್ಯಕ್ಷರು ಒತ್ತಾಯಿಸಿದ್ದಾರೆ.