ಇಡೀ ಬೆಂಗಳೂರು ಸೀಲ್ಡೌನ್ ಬಗ್ಗೆ ಸರ್ಕಾರದ ನಿಲುವೇನು? ಇಲ್ಲಿದೆ ಮಾಹಿತಿ
ಬೆಂಗಳೂರು, ಏ. 12: ಇಡೀ ಜಗತ್ತಿನಾದ್ಯಂತ ರಣಕೇಕೆ ಹಾಕುತ್ತಿರುವ ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್ಡೌನ್ ರಾಮಬಾಣ. ಜಗತ್ತಿನ ಹಲವು ದೇಶಗಳು ಲಾಕ್ಡೌನ್ ಅಸ್ತ್ರದ ಮೂಲಕ ಕೊರೊನಾ ವೈರಸ್ ಕಟ್ಟಿಹಾಕಲು ಪ್ರಯತ್ನಿಸುತ್ತಿವೆ. ಆದರೆ ಅದು ಸಮುದಾಯಕ್ಕೆ ವೈರಸ್ ಹರಡುವ ಮೊದಲು ಕೈಗೊಳ್ಳಬೇಕಾಗಿದ್ದ ಅಸ್ತ್ರ. ಸಮುದಾಯಕ್ಕೆ ವೈರಸ್ ಹರಡಿದ್ರೆ ಲಾಕ್ಡೌನ್ ಬದಲಿಗೆ ಸೀಲ್ಡೌನ್ ಅಸ್ತ್ರವನ್ನು ಜಾರಿಗೆ ತರಲಾಗುತ್ತದೆ.
ದೇಶದ ಕೊರೊನಾ ವೈರಸ್ ಹಾಟ್ಸ್ಪಾಟ್ ಎಂದು ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಈಗಾಗಲೇ ಎರಡು ವಾರ್ಡ್ಗಳಲ್ಲಿ ಸೀಲ್ಡೌನ್ ಮಾಡಲಾಗಿದೆ. ಆದರೂ ಹೆಚ್ಚುತ್ತಿರುವ ಪ್ರಕರಣಗಳು ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿವೆ. ಹೀಗಾಗಿ ಇಡೀ ಬೆಂಗಳೂರಿನಾದ್ಯಂತ ಸೀಲ್ಡೌನ್ ಜಾರಿಯಾಗುತ್ತದೆ ಎಂಬ ಆತಂಕ ಜನರಲ್ಲಿದೆ. ಇದಕ್ಕೆ ಸರ್ಕಾರ ಅಧಿಕೃತವಾಗಿ ಸ್ಪಷ್ಟನೆಯನ್ನು ಕೊಟ್ಟಿದೆ.
ಕೊರೊನಾ ಹಾಟ್ಸ್ಪಾಟ್ಗಳಲ್ಲಿ ಸ್ಥಾನ ಪಡೆದಿದೆ ಬೆಂಗಳೂರು
ದೇಶದಲ್ಲಿ ದಿನದಿಂದ ದಿನಕ್ಕೆ ಹರಡುವುದು ಹೆಚ್ಚಾಗುತ್ತಿದೆ. ಈಗಾಗಲೇ ನಮ್ಮ ದೇಶದಲ್ಲಿ ಒಟ್ಟು 8,356 ಪ್ರಕರಣಗಳು ವರದಿಯಾಗಿದೆ. ಅದರಲ್ಲಿ 7,367 ಕೇಸ್ಗಳು ಚಾಲ್ತಿಯಲ್ಲಿದೆ. 716 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಡಿಸ್ಚಾರ್ಜ್ ಆಗಿದ್ದಾರೆ. 273 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿಯೂ ಈವರೆಗೆ 226 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 6 ಜನರು ಕೊರೊನಾ ವೈರಸ್ಗೆ ಬಲಿಯಾಗಿದ್ದಾರೆ. ಬೆಂಗಳೂರು ದೇಶದ ಕೊರೊನಾ ಹಾಟ್ಸ್ಪಾಟ್ಗಳಲ್ಲಿ ಒಂದಾಗಿದೆ. ಬೆಂಗಳೂರಿನಲ್ಲಿ 76 ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು ಒಬ್ಬರು ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ಕರ್ನಾಟಕದಲ್ಲಿ ಏಪ್ರಿಲ್ 30ರವರೆಗೆ ಕೊರೊನಾ ಲಾಕ್ಡೌನ್ ವಿಸ್ತರಣೆ
ಬೆಂಗಳೂರಿನ ಎರಡು ವಾರ್ಡ್ಗಳಲ್ಲಿ ಸೀಲ್ಡೌನ್
ಬೆಂಗಳೂರಿನಲ್ಲಿ ದಿನೆದಿನೇ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. 76 ಜನರು ಬೆಂಗಳೂರಿನಲ್ಲಿ ದೃಢಪಟ್ಟಿವೆ. ಹೀಗಾಗಿ ಸೋಂಕು ಸಮುದಾಯಕ್ಕೆ ಹರಡುವ ಶಂಕೆ ಹಿನ್ನೆಲೆಯಲ್ಲಿ ಎರಡು ವಾರ್ಡ್ಗಳನ್ನು ನಿನ್ನೆಯೆ ಸೀಲ್ಡೌನ್ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಬಾಪೂಜಿನಗರ ವಾರ್ಡ್ ನಂಬರ್ 134 ಹಾಗೂ ಪಾದರಾಯನಪುರ ವಾರ್ಡ್ ನಂಬರ್ 135 ರಲ್ಲಿ ಲಾಕ್ಡೌನ್ ಜೊತೆಗೆ ಸೀಲ್ಡೌನ್ ಜಾರಿಗೆ ತರಲಾಗಿದೆ. ಎರಡೂ ವಾರ್ಡ್ಗಳಲ್ಲಿ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಸಮುದಾಯಕ್ಕೆ ಸೋಂಕು ಹರಡುವುದನ್ನು ತಡೆಯಲು ಸೀಲ್ಡೌನ್ ಮಾಡಲಾಗಿದೆ. ಹೀಗಾಗಿ ಇಡೀ ಬೆಂಗಳೂರನ್ನು ಸೀಲ್ಡೌನ್ ಮಾಡಲಾಗುತ್ತದೆಯಾ ಎಂಬ ಆತಂಕ ಜನರಲ್ಲಿದೆ.
ಇಡೀ ಬೆಂಗಳೂರು ಸೀಲ್ಡೌನ್ ಬಗ್ಗೆ ಅಶೋಕ್ ಸ್ಪಷ್ಟನೆ
ಇಡೀ ಬೆಂಗಳೂರನ್ನು ಸೀಲ್ಡೌನ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟನೆ ಕೊಟ್ಟಿದ್ದಾರೆ. ನಾವು ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದೇವೆ. ಕೊರೋನಾ ಕಡಿಮೆ ಆಗುವವರೆಗೆ ಇದೇ ರೀತಿಯಲ್ಲಿ ಎಲ್ಲರೂ ಕೆಲಸ ಮಾಡುತ್ತೇವೆ. ಎಲ್ಲಿ ಪರಿಸ್ಥಿತಿ ಗಂಭೀರವಾಗಿರುತ್ತದೆಯೊ ಆ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಪೂರ್ತಿ ಬೆಂಗಳೂರನ್ನೇ ಸೀಲ್ ಮಾಡುವ ಯೋಚನೆ ಸರ್ಕಾರದ ಮುಂದೆ ಇಲ್ಲ. ಜನರು ಸಮೂಹ ಸನ್ನಿಗೆ ಒಳಗಾಗಬೇಡಿ ಎಂದು ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿ ಸಿಎಂ ಯಡಿಯೂರಪ್ಪ ಆದೇಶ
ಹೋಮ್ ಡೆಲಿವರಿ ಸಹಾಯವಾಣಿಗೆ ಚಾಲನೆ
ಇನ್ನು ಬೆಂಗಳೂರನ್ನು ಸಂಪೂರ್ಣವಾಗಿ ಸೀಲ್ಡೌನ್ ಮಾಡುವುದಿಲ್ಲ ಎಂದು ಸ್ಪಷ್ಟಡಿಸಿರುವ ಕಂದಾಯ ಸಚಿವ ಆರ್. ಅಶೋಕ್ ಅವರು, ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ರಸ್ತೆಗೆ ಬರುವುದನ್ನ ತಪ್ಪಿಸಲು ಸಹಾಯವಾಣಿಗೆ ಚಾಲನೆ ಕೊಟ್ಟಿದ್ದಾರೆ. ಬೆಂಗಳೂರು ದಕ್ಷಿಣ ಪೊಲೀಸ್ ವಿಭಾಗ ವ್ಯಾಪ್ತಿಯಲ್ಲಿ ಹೋಂ ಡೆಲಿವರಿ ಸೇವೆ ಆರಂಭಿಸಲಾಗಿದೆ. ಸಹಾಯವಾಣಿಗೆ ಕರೆ ಮಾಡಿದರೆ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗುವುದು. ದೂರವಾಣಿ ಸಂಖ್ಯೆ: 080-61914960 ಕಾಲ್ ಮಾಡಲು ಅಶೋಕ್ ವಿನಂತಿಸಿದ್ದಾರೆ.