ಟಿಪ್ಪು ಜಯಂತಿ ರದ್ದು: ನಿರ್ಧಾರಕ್ಕೆ ಕಾಲಾವಕಾಶ ಕೋರಿದ ಸರ್ಕಾರ
ಬೆಂಗಳೂರು, ಜನವರಿ 20: ಟಿಪ್ಪು ಜಯಂತಿ ರದ್ದು ಮಾಡುವ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬರಲು ಕಾಲಾವಕಾಶವನ್ನು ರಾಜ್ಯ ಸರ್ಕಾರವು ಹೈಕೋರ್ಟ್ ಗೆ ಕೋರಿದೆ.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಮಾಡಿ ಆದೇಶ ಹೊರಡಿಸಿತ್ತು. ಆದರೆ ಅದರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೂಡಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಸರ್ಕಾರದ ನಿರ್ಧಾರ ತಿಳಿಸಲು ಎರಡು ವಾರದ ಗಡುವು ನೀಡಿತ್ತು. ಹೈಕೋರ್ಟ್ ಗೆ ಮಧ್ಯಂತರ ಅರ್ಜಿ ಸಲ್ಲಿಸಿರುವ ಸರ್ಕಾರ ಮತ್ತೆ 8 ವಾರಗಳ ಸಮಯಾವಕಾಶ ಕೇಳಿದೆ.
ಸರ್ಕಾರ ಎಲ್ಲಾ ಸಾಹಿತ್ಯ, ದಾಖಲೆ ಪರಿಶೀಲಿಸುತ್ತಿದೆ. 300 ವರ್ಷಗಳ ಹಿಂದಿನ ವಿಚಾರ ಪರಿಶೀಲಿಸಬೇಕಿದೆ. ಹೀಗಾಗಿ ಮರುಪರಿಶೀಲನೆ ಗೆ ಹೆಚ್ಚಿನ ಕಾಲಾವಕಾಶ ಬೇಕು ಎಂದು ಹೈಕೋರ್ಟ್ ಗೆ ರಾಜ್ಯ ಸರ್ಕಾರದ ವಕೀಲರು ಇಂದು ಮನವಿ ಮಾಡಿದರು.
ಟಿಪ್ಪು ಜಯಂತಿ ರದ್ದು ವಿಚಾರವನ್ನು ಮರುಪರಿಶೀಲಿಸಿ ಹೊಸದಾಗಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಹೈಕೋರ್ಟ್ ಈ ಹಿಂದೆ ಆದೇಶಿಸಿತ್ತು. ಇದೀಗ ಸರ್ಕಾರದ ಮನವಿ ಹಿನ್ನೆಲೆಯಲ್ಲಿ ಮತ್ತೆ ಎಂಟು ವಾರ ಕಾಲಾವಕಾಶ ನೀಡಿ ಹೈಕೋರ್ಟ್ ಆದೇಶಿಸಿದೆ.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಟಿಪ್ಪು ಜಯಂತಿ ಆಚರಣೆಗೆ ಚಾಲನೆ ನೀಡಲಾಗಿತ್ತು. ಆದರೆ ಬಿಜೆಪಿ ಆಗಲೂ ಸಹ ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿತ್ತು. ಕರಾವಳಿ ಜಿಲ್ಲೆಗಳು ಮತ್ತು ಕೊಡಗಿನಲ್ಲಿ ಟಿಪ್ಪು ಜಯಂತಿ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆದಿದ್ದವು.
ಕಳೆದ ವಿಧಾನಸಭೆ ಚುನಾವಣೆಯ ಬಿಜೆಪಿ ಪ್ರಣಾಳಿಕೆಯಲ್ಲಿ ಟಿಪ್ಪು ಜಯಂತಿ ರದ್ದು ಸಹ ಅಂಶವಾಗಿತ್ತು. ಅಂತೆಯೇ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಟಿಪ್ಪು ಜಯಂತಿಯನ್ನು ರದ್ದು ಮಾಡಿ ಆದೇಶ ಹೊರಡಿಸಲಾಗಿತ್ತು.
ಟಿಪ್ಪು ಬಗ್ಗೆ ಇರುವ ಪಠ್ಯಗಳನ್ನು ಸಹ ಈ ಬಾರಿ ಬದಲಾವಣೆ ಮಾಡಲಾಗುತ್ತಿಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಿದ್ದು, 'ಟಿಪ್ಪು ಬಗ್ಗೆ ಅಧ್ಯಯನ ಆಗಬೇಕು ಎಂದು ಡಿಎಸ್ಇಆರ್ಟಿ ಸಮಿತಿ ವರದಿ ನೀಡಿದೆ. ಹಾಗಾಗಿ ಈ ವಿಷಯದಲ್ಲಿ ವಿಸ್ತೃತ ಚರ್ಚೆಯ ಅವಶ್ಯಕತೆ ಇದೆ ಹಾಗಾಗಿ ಈ ಬಾರಿಯ ಪಠ್ಯದಲ್ಲಿ ಟಿಪ್ಪು ಪಠ್ಯ ಹಾಗೆಯೇ ಇರಲಿದೆ' ಎಂದು ಹೇಳಿದರು.