ಬಿಜೆಪಿ ಕಚೇರಿ ಸಿಬ್ಬಂದಿ ಸಚಿವ ಗೋಪಾಲಯ್ಯರಿಗೆ ಹೇಳಿದ್ದು...
ಬೆಂಗಳೂರು, ಫೆ. 07: 'ಸರ್, ಇದು ರಾಜ್ಯ ಬಿಜೆಪಿ ಕಚೇರಿ' ಎಂದು ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿ ಸಿಬ್ಬಂದಿ ನೂತನ ಸಚಿವ ಕೆ ಗೋಪಾಲಯ್ಯ ಅವರನ್ನು ಸ್ವಾಗತಿಸಿದ್ದಾರೆ.
ಬಿಜೆಪಿ ಕಚೇರಿ ಸಿಬ್ಬಂದಿ ಹಾಗೇ ಸ್ವಾಗತಿಸಿರುವುದರ ಹಿಂದೆ ಸಣ್ಣ ಕಾರಣವೂ ಇದೆ. ಬೇರೆ ರಾಜಕೀಯ ಪಕ್ಷಗಳಿಂದ ಬಿಜೆಪಿ ಸೇರ್ಪಡೆ ಆಗುವವರಿಗೆ ಆ ಪಕ್ಷದ ಸಿದ್ದಾಂತದ ಜೊತೆಗೆ ಇನ್ನೂ ಹಲವು ವಿಷಯಗಳ ಬಗ್ಗೆ ಸೂಕ್ಷ್ಮ ಅರಿವಿರಬೇಕಾಗುತ್ತದೆ. ಯಾಕೇಂದರೆ ಹೇಳಿ ಕೇಳಿ ಬಿಜೆಪಿ ಶಿಸ್ತು ಪರಿಪಾಲನೆಗೆ ಅತ್ಯಂತ ಹೆಚ್ಚು ಮಹತ್ವ ಕೊಡುವ ಪಕ್ಷ. ಅಲ್ಲಿ ಸಾಮಾನ್ಯ ಕಾರ್ಯಕರ್ತರಿಂದ ರಾಷ್ಟ್ರಮಟ್ದದ ನಾಯಕರೂ ಶಿಸ್ತುಪರಿಪಾಲನೆ ಮಾಡಲೇಬೇಕು.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಗೆ ಮಹಾಲಕ್ಷ್ನೀಲೇಔಟ್ ಬಿಜೆಪಿ ಶಾಸಕ, ನೂತನ ಸಚಿವ ಕೆ. ಗೋಪಾಲಯ್ಯ ಭೇಟಿ ಕೊಟ್ಟಿದ್ದರು. ಅವರು ಬರುತ್ತಾರೆಂದು ಕಚೇರಿ ಸಿಬ್ಬಂದಿ, ಕಾರ್ಯಕರ್ತರು ಹಾಗೂ ಮುಖಂಡರು ಬಿಜೆಪಿ ಕಚೇರಿಯಲ್ಲಿ ಕಾಯುತ್ತಿದ್ದರು. ಸಚಿವರಾದ ಬಳಿಕ ಮೊದಲ ಸಲ ಬಿಜೆಪಿ ಕಚೇರಿಗೆ ಸಚಿವ ಗೋಪಾಲಯ್ಯ ಅವರನ್ನು ಪಕ್ಷದ ನಾಯಕರು, ಕಚೇರಿ ಸಿಬ್ಬಂದಿ, ಕಾರ್ಯಕರ್ತರು ಸ್ವಾಗತಿಸಿದ್ದಾರೆ. ಜೊತೆಗೆ ಮಂತ್ರಿಯಾದ ಬಳಿಕ ಮೊದಲ ಬಾರಿ ಬಿಜೆಪಿ ಕಚೇರಿಗೆ ಆಗಮಿಸಿದ್ದ ನೂತನ ಸಚಿವ ಕೆ. ಗೋಪಾಲಯ್ಯ ಅವರಿಗೆ ರಾಜ್ಯ ಬಿಜೆಪಿ ಕಚೇರಿ ಸಿಬ್ಬಂದಿ ಕೆಲವು ವಿಚಾರಗಳ ಕುರಿತು ವಿಷಯ ತಿಳಿ ಹೇಳಿದ್ದಾರೆ, ಒಂದಿಷ್ಟು ಸಲಹೆಗಳನ್ನೂ ಕೊಟ್ಟಿದ್ದಾರೆಂದು ತಿಳಿದು ಬಂದಿದೆ.
ಮಿ. ಕಟೀಲ್, ನಿಮ್ಮ ಊರಿನ 8 ಶಾಸಕರಲ್ಲಿ ಒಬ್ಬರಿಗೂ ಸಚಿವ ಸ್ಥಾನ ಕೊಡಿಸಲಾಗಲಿಲ್ಲವೇ?
ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಹೋಲಿಕೆ ಮಾಡಿದರೆ ಬಿಜೆಪಿ ಕಚೇರಿ ಸ್ವಲ್ಪ ಬೇರೆ ರೀತಿಯೆ ಇದೆ. ಕಳೆದ ಹಲವು ದಶಕಗಳಿಂದ ಜೆಡಿಎಸ್ ಪಕ್ಷದಲ್ಲಿದ್ದ ಗೋಪಾಲಯ್ಯ ಅವರು ಇತ್ತಿಚಿಗೆ ಬಿಜೆಪಿ ಸೇರಿ, ಮಂತ್ರಿ ಆಗಿದ್ದಾರೆ.
ಗೋಪಾಲಯ್ಯ ಅವರಿಗೆ ಬಿಜೆಪಿ ಕಚೇರಿ ಸಿಬ್ಬಂದಿ ಹೇಳಿದ್ದೇನೂ?
ಸಂಪುಟ ದರ್ಜೆ ಸಚಿವರಾಗಿ ಕೆ. ಗೋಪಾಲಯ್ಯ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ಕೊಟ್ಟಿದ್ದಾರೆ. ಮಂತ್ರಿಯಾಗಿ ಅಥವಾ ಬೇರೆ ಅಧಿಕಾರ ವಹಿಸಿಕೊಂಡ ತಕ್ಷಣ ಕಚೇರಿಗೆ ಭೇಟಿ ಕೊಡುವುದು ಬಿಜೆಪಿಯಲ್ಲಿ ವಾಡಿಕೆ. ಅದನ್ನೂ ಬೇರೆ ಪಕ್ಷಗಳಿಂದ ಬಂದವರೂ ಪಾಲಿಸಬೇಕು. ಆದರೆ ನೂತನ ಸಚಿವ ಕೆ. ಗೋಪಾಲಯ್ಯ ಹೇಳಿದ ಸಮಯಕ್ಕಿಂದ ಸುಮಾರು 45 ನಿಮಿಷಗಳ ಕಾಲ ತಡವಾಗಿ ಬಿಜೆಪಿ ಕಚೇರಿಗೆ ತೆರಳಿದ್ದಾರೆ.
ಅಷ್ಟರಲ್ಲಿ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಸೇರಿದಂತೆ ಹಲವು ನಾಯಕರು, ಕಾರ್ಯಕರ್ತರು ಹಾಗೂ ಕಚೇರಿ ಸಿಬ್ಬಂದಿ ಗೋಪಾಲಯ್ಯ ಅವರಿಗಾಗಿ ಕಾಯ್ದು ಕುಳಿತಿದ್ದರು. ಅವರು ತಡವಾಗಿ ಬಂದಿದ್ದು ಅಲ್ಲಿದ್ದವರಿಗೆ ಸ್ವಲ್ಪ ಅಸಮಾಧಾನ ಮೂಡಿಸಿತ್ತು. ಬಿಜೆಪಿ ಕಚೇರಿ ಸಿಬ್ಬಂದಿಗೆ 11.30ಕ್ಕೆ ಆಗಮಿಸುವುದಾಗಿ ಹೇಳಿದ್ದ ಗೋಪಾಲಯ್ಯ ಅವರು ಸುಮಾರು 45 ನಿಮಿಷಗಳ ತಡವಾಗಿ ಹೋಗಿದ್ದರು. ಆಗ ಸರ್, ಇದು ಬಿಜೆಪಿ ಕಚೇರಿ, ಸಮಯದ ಬಗ್ಗೆ ಸ್ವಲ್ಪ ಗಮನಹರಿಸಬೇಕು ಎಂದು ಸೂಚ್ಯವಾಗಿ ಬಿಜೆಪಿ ಕಚೇರಿ ಸಿಬ್ಬಂದಿ ಹೇಳಿದ್ದಾರೆಂದು ತಿಳಿದು ಬಂದಿದೆ.
ನಾನು ಪಕ್ಷದ ನೀತಿಗಳಿಗೆ ಹೊಂದಾಣಿಕೆ ಆಗುತ್ತೇನೆ
ಬಿಜೆಪಿ ಕಚೇರಿಗೆ ಭೇಟಿಕೊಟ್ಟು, ಪಕ್ಷದ ಮುಖಂಡರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಸಚಿವ ಗೋಪಾಲಯ್ಯ ಅವರು, ಮಂತ್ರಿ ಆದ ತಕ್ಷಣ ಬಿಜೆಪಿ ಕಚೇರಿಗೆ ಬರಲು ಆಗಿರಲಿಲ್ಲ. ನಾನು ಬಿಜೆಪಿ ಪಕ್ಷದ ವಿಚಾರಗಳು, ನೀತಿಗಳಿಗೆ ಹೊಂದಾಣಿಕೆ ಆಗುತ್ತೇನೆ. ಹಿಂದಿನ ಪಕ್ಷದ ಕಚೇರಿ ಹೇಗುತ್ತು ಎಂಬುದರ ಬಗ್ಗೆ ಮಾತನಾಡುವುದಿಲ್ಲ. ನಾವೆಲ್ಲರೂ ಈಗ ಒಂದೇ, ಕಾರ್ಯಕರ್ತರು ಅನ್ಯೋನ್ಯತೆಯಿಂದ ಇರುತ್ತೇವೆ. ಯಾವುದೇ ಜಿಲ್ಲೆ, ತಾಲ್ಲೂಕುಗಳಿಗೆ ಹೋದಾಗ ನನ್ನ ಪಕ್ಷದ ಕಚೇರಿಗೆ ಹೋಗುತ್ತೇನೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಇನ್ನು ಖಾತೆ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ ಯಾವ ರೀತಿ ಅಭಿವೃದ್ಧಿ ಆಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅದೇ ರೀತಿ ನಾನು ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ, ಅಭಿವೃದ್ಧಿ ಮಾಡುತ್ತೇನೆ ಎಂದಿದ್ದಾರೆ.
2 ಹಂತದಲ್ಲಿ ಸಂಪುಟ ವಿಸ್ತರಣೆಯಾಯ್ತು, ಸಚಿವ ಸ್ಥಾನ ವಂಚಿತರ ಪಟ್ಟಿ
ಮಾಜಿ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಲು ಗೋಪಾಲಯ್ಯ ನಕಾರ!
ಯುಗಾದಿ ಬಳಿಕ ರಾಜ್ಯ ಸರ್ಕಾರ ಬದಲಾವಣೆ ಆಗುತ್ತದೆ ಎಂಬ ಮಾಜಿ ಸೆಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಗೋಪಾಲಯ್ಯ ಯಾವುದೇ ಪ್ರತಿಕ್ರಿಯೆ ಕೊಡಲು ಮುಂದಾಗಿಲ್ಲ. ನಾನಿನ್ನೂ ಚಿಕ್ಕವನು, ನಮ್ಮ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿಎಂ ಬಿ.ಎಸ್. ಯಡಿಯೂರಪ್ಪ ಮಾತಾಡ್ತಾರೆ. ಈ ಬಗ್ಗೆ ನನೇನೂ ಮಾತನಾಡುವುದಿಲ್ಲ ಎಂದಿದ್ದಾರೆ.
ನಾನು ಬಿಜೆಪಿ ಕಾರ್ಯಕರ್ತ ಎಂದ ಗೋಪಾಲಯ್ಯ
ನಾನು ಬಿಜೆಪಿ ನಾಯಕನಲ್ಲ, ಬಿಜೆಪಿ ಕಾರ್ಯಕರ್ತ ಎಂದು ಸಚಿವ ಗೋಪಾಲಯ್ಯ ಹೇಳಿದ್ದಾರೆ. ಬಿಜೆಪಿ ಕಚೇರಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ, 'ಮಂತ್ರಿಗಳೇ ಕುಳಿತುಕೊಳ್ಳಿ' ಎಂದು ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರಣ್ ಕುಮಾರ್ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ಕೊಟ್ಟ ಗೋಪಾಲಯ್ಯ, 'ನಾನು ಸರ್ಕಾರದಲ್ಲಿ ಮಾತ್ರ ಮಂತ್ರಿ, ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತ' ಎಂದು ಹೇಳಿದ್ದು ಗಮನ ಸೆಳೆಯಿತು.