ಅರಣ್ಯ ರಕ್ಷಕ ಗೂಳೆಪ್ಪ ಪಬ್ಲಿಕ್ ಟಿವಿ ವರ್ಷದ ವ್ಯಕ್ತಿ
ಬೆಂಗಳೂರು, ಜ. 2 : ಪಬ್ಲಿಕ್ ಟಿವಿ ವರ್ಷದ ವ್ಯಕ್ತಿಯಾಗಿ ಬಳ್ಳಾರಿಯ ಭಟ್ರಹಳ್ಳಿ ಗೂಳೆಪ್ಪ ಆಯ್ಕೆಯಾಗಿದ್ದಾರೆ. ಬುಧವಾರ ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ರಮಾನಾಥ ರೈ 1 ಲಕ್ಷ ರೂ. ಮೊತ್ತದ ಚೆಕ್ ಹಾಗೂ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್, ಪತ್ರಕರ್ತ ರವಿ ಬೆಳಗೆರೆ, ವನ್ಯಜೀವಿ ತಜ್ಞ ಪ್ರವೀಣ್ ಭಾರ್ಗವ ಉಪಸ್ಥಿತರಿದ್ದರು.
ಒಟ್ಟು ಐವರನ್ನು ಪಬ್ಲಿಕ್ ಟಿವಿ ವರ್ಷದ ವ್ಯಕ್ತಿ ಪ್ರಶಸ್ತಿಗೆ, ಶ್ರೀಸಾಮಾನ್ಯರಾಗಿ ಇದ್ದುಕೊಂಡೇ ಅಸಾಮಾನ್ಯ ಸಾಧನೆಗೈದಿರುವವರನ್ನು ನಾಮ ನಿರ್ದೇಶನ ಮಾಡಲಾಗಿತ್ತು. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದವರಾದ ದುಂಡಪ್ಪ, ಬಾಗಲಕೋಟೆಯ ಮುಧೋಳ ತಾಲ್ಲೂಕಿನ ಗೋವಿಂದಪ್ಪ ಗುಜ್ಜನ್ನವರ್, ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಹನುಮಂತಪ್ಪ, ಧಾರವಾಡದ ಆಂಜನೇಯ ನಗರದ ನಿವಾಸಿ, ಮೂಲತಃ ಉಡುಪಿಯವರಾದ ಲೂಸಿ ಸಾಲ್ಡಾನ ಅವರನ್ನು ನಾಮ ನಿರ್ದೇಶನ ಮಾಡಲಾಗಿತ್ತು. ವೀಕ್ಷಕರ ಎಸ್ಎಂಎಸ್ ಮೂಲಕ ವರ್ಷದ ವ್ಯಕ್ತಿಯನ್ನು ಆಯ್ಕೆ ಮಾಡಲಾಯಿತು. [ಗ್ಯಾಲರಿ]
ಬೆಳಗ್ಗೆ ವರ್ಷದ ವ್ಯಕ್ತಿ ಘೋಷಣೆಯಾಗುತ್ತಿದ್ದಂತೆ ಅನೇಕ ಸಾರ್ವಜನಿಕರು ಕರೆ ಮಾಡಿ ಅಭಿನಂದಿಸಿದ್ದಲ್ಲದೇ, ಎಲ್ಲಾ ಐದು ನಾಮಾಂಕಿತರಿಗೆ ತಮ್ಮ ಕಡೆಯಿಂದ ಸಾವಿರಾರು ರೂಪಾಯಿ ಕಾಣಿಕೆ ನೀಡಿದ್ದಾರೆ. ವರ್ಷದ ವ್ಯಕ್ತಿ ಗೂಳೆಪ್ಪ ಅವರಿಗೂ ಸಾರ್ವಜನಿಕರೇ ಕಾಣಿಕೆಯನ್ನು ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ನೀಡಿದರು. [ಒನ್ಇಂಡಿಯಾ ಕರ್ನಾಟಕ ವರ್ಷ ವ್ಯಕ್ತಿಯಾಗಿ ಎಸ್ಆರ್ ಹಿರೇಮಠ] [ಹಿರೇಮಠ ಅವರಿಗೆ ಸನ್ಮಾನ]
ಗೂಳೆಪ್ಪ ಆಯ್ಕೆಯಾಗಿದ್ದು ಯಾಕೆ?
ಭಟ್ರಳ್ಳಿ ಗೂಳೆಪ್ಪ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರಿನವರಾದ ಗೂಳೆಪ್ಪ, ಸದ್ಯ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಭಟ್ರಳ್ಳಿಯಲ್ಲಿ ನೆಲೆಸಿದ್ದಾರೆ. 55 ವರ್ಷ ವಯಸ್ಸಿನ ಗೂಳೆಪ್ಪ ಅವರಿಗೆ ಆರು ಮಕ್ಕಳು. ಆದ್ರೆ, ಮಕ್ಕಳಿಗಿಂತಾ ಹೆಚ್ಚಾಗಿ ಮರಗಳ ಮೇಲೇ ಪ್ರೀತಿ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ರೂ, ಮರಗಳನ್ನ ಉಳಿಸುವುದಕ್ಕಾಗಿ ಪ್ರೀತಿಯನ್ನೇ ಧಾರೆ ಎರೆದಿದ್ದಾರೆ.
ಬರಡು ಭೂಮಿಯಲ್ಲೂ ಹಸಿರು
ಭಟ್ರಳ್ಳಿಯಿಂದ 3 ಕಿಲೋ ಮೀಟರ್ ದೂರದಲ್ಲಿರೋ ಕಾಡೇ ಗೂಳೆಪ್ಪನ ಮನೆ. ಸತತ ಇಪತ್ತು ವರ್ಷಗಳಿಂದ ಮರಗಳನ್ನ ಕಾಯುತ್ತಿರುವ ಗೂಳೆಪ್ಪ, ಬರಡು ಭೂಮಿಯಲ್ಲೂ ಹಸಿರು ಚಿಗುರಿಸಿದ್ದಾರೆ. ಇದಕ್ಕಾಗಿ ಗೂಳೆಪ್ಪ ಪಟ್ಟ ಕಷ್ಟ ಅಷ್ಟಿಷ್ಟಲ್ಲ.
ಬಿಡಿಗಾಸೂ ಕೂಲಿ ಸಿಕ್ಕಿಲ್ಲ ಗೂಳೆಪ್ಪಗೆ
ಇಂದು ಹಸಿರಿನಿಂದ ಕಂಗೊಳಿಸುತ್ತಿರುವ ಈ ಪ್ರದೇಶ, ಹಿಂದೆ ಕೃಷಿ ಭೂಮಿಯಾಗಿತ್ತು. ರೈತರು ಒತ್ತುವರಿ ಮಾಡಿಕೊಂಡಿದ್ದ 125 ಎಕರೆ ಅರಣ್ಯ ಭೂಮಿಯನ್ನ, 1994ರಲ್ಲಿ ಸರ್ಕಾರ ವಶಪಡಿಸಿಕೊಂಡಿತ್ತು. ವಿವಿಧ ಜಾತಿಯ ಸಸಿಗಳನ್ನ ನೆಟ್ಟಿತು. ಅಂದು ಸಸಿಗಳನ್ನ ನಾಟಿ ಮಾಡಲು ಹೋದ ಗೂಳೆಪ್ಪ, ಇಂದಿನವರೆಗೂ ಮರಗಳನ್ನ ಕಾಯೋ ಕೆಲಸದಲ್ಲೇ ನಿರತರಾಗಿದ್ದಾರೆ. ಆದ್ರೆ, ಅಂದಿನಿಂದ ಇಂದಿನವರೆಗೂ ಅರಣ್ಯ ಇಲಾಖೆಯಿಂದ ಬಿಡಿಗಾಸೂ ಕೂಲಿ ಸಿಕ್ಕಿಲ್ಲ. ಹಾಗಿದ್ರೂ ಕೂಡ ಗುಳೆಪ್ಪನ ಕೆಲಸ ನಿಂತಿಲ್ಲ. ಮರಗಳ ಆರೈಕೆ ಮಾಡುತ್ತಾ, ಮರಗಳ್ಳರಿಗೆ ಬಿಸಿ ಮುಟ್ಟಿಸುತ್ತಾ ಬಂದಿರುವ ಗೂಳೆಪ್ಪ ಅವರ ಕಾಯಕಕ್ಕೆ, ಎಲ್ರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ನಡುರಾತ್ರಿಯಲ್ಲೂ ಕಾಡಿನ ರಕ್ಷಣೆ
ಭಟ್ರಳ್ಳಿ ಗೂಳೆಪ್ಪನಿಗೆ, ಒಂದುಕಡೆ ಮರಗಳ್ಳರ ಕಾಟವಾದ್ರೆ, ಮತ್ತೊಂದು ಕಡೆ ಕಾಡುಪ್ರಾಣಿಗಳ ಕಾಟ. ಕಾಡು ಹಂದಿ ದಾಳಿಯಿಂದಾಗಿ ಗೂಳೆಪ್ಪ ಅವರಿಗೆ ಮಾರಣಾಂತಿಕ ಗಾಯಗಳೂ ಆಗಿದ್ದವು. ಆದ್ರೂ ಕೂಡ ನಡುರಾತ್ರಿ 12 ಗಂಟೆಯಾದ್ರೂ ಕಾಡಲ್ಲೇ ಇರ್ತಾರೆ. ಅನಾರೋಗ್ಯಕ್ಕೀಡಾದರೆ ಬೇರೆ ಊರಿಗೆ ಹೋಗಬೇಕಾದ ಕೆಲಸ ಬಂದ್ರೆ, ತಮ್ಮ ಹಿರಿಯ ಮಗ ತಿಪ್ಪೇಸ್ವಾಮಿಯನ್ನ ಕಾಡು ಕಾಯಲು ನೇಮಿಸಿ ಹೋಗ್ತಾರೆ.
ಪ್ರಶಸ್ತಿ, ಪುರಸ್ಕಾರಗಳ ಹಂಬಲವಿಲ್ಲ
ಬೇಸಿಗೆಯಲ್ಲಿ ದೂರದ ಹಳ್ಳದಿಂದ ಬಿಂದಿಗೆ ಮೂಲಕ ನೀರನ್ನ ತಂದು ಮರಗಳಿಗೆ ಹಾಕ್ತಾರೆ. ಇಷ್ಟೊಂದು ಕಷ್ಟಪಟ್ಟು ಬೆಳೆಸಿದ ಮರಗಳನ್ನ ಯಾರಾದ್ರೂ ಕಡಿಯೋಕೆ ಬಂದ್ರೆ, ಸುಮ್ಮನಿರೋಕೆ ಆಗುತ್ತಾ? ಖಂಡಿತಾ ಇಲ್ಲ. ಮರಗಳ್ಳರನ್ನ ಹಿಡಿದು ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸೋದ್ರಲ್ಲೂ ಗೂಳೆಪ್ಪ ನಿಸ್ಸೀಮರು. ಇಂಥಾ ಸಾಧಕನಿಗೆ ಪ್ರಶಸ್ತಿ, ಪುರಸ್ಕಾರಗಳ ಹಂಬಲವಿಲ್ಲ. ಜೀವ ಇರೋವರೆಗೂ ಗಿಡ-ಮರ ಬೆಳೆಸೋದೊಂದೇ ಆಸೆ. ಇಂಥಾ ನಿಸ್ವಾರ್ಥ ಸಾಧಕನಿಗೆ, ಪಬ್ಲಿಕ್ ಟಿವಿ ವರ್ಷದ ವ್ಯಕ್ತಿ ಪುರಸ್ಕಾರ ಒಲಿದುಬಂದಿದೆ. ಇನ್ನು ಮುಂದೆಯೂ ಕೂಡಾ ಹಸಿರನ್ನ ಉಳಿಸಿ ಬೆಳೆಸಲಿ ಅನ್ನೋದೇ ಎಲ್ಲರ ಹಾರೈಕೆ.
ಸಿಎನ್ಆರ್ ರಾವ್, ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ
ಬೆಂಗಳೂರು ಪ್ರೆಸ್ ಕ್ಲಬ್ 'ಭಾರತ ರತ್ನ' ಪ್ರೊ. ಸಿಎನ್ಆರ್ ರಾವ್ ಅವರನ್ನು 'ವರ್ಷದ ವ್ಯಕ್ತಿ'ಯಾಗಿ ಆಯ್ಕೆ ಮಾಡಿ ಮಂಗಳವಾರ ಸನ್ಮಾನಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾವ್ ಅವರನ್ನು ಸನ್ಮಾನಿಸಿ, ವಿಜ್ಞಾನಿಗೆ ನೋಬೆಲ್ ಪುರಸ್ಕಾರ ಸಿಗಬೇಕು ಎಂದು ಆಶಿಸಿದರು. ಈ ಸಂದರ್ಭದಲ್ಲಿ ಹಲವಾರು ಹಿರಿಯ ಪತ್ರಕರ್ತರನ್ನು, ಪ್ಯಾರಾಲಿಂಪಿಕ್ ಕ್ರೀಡಾಪಟು ಗಿರೀಶ್ ಮತ್ತು ನಟ ಸುದೀಪ್ ಅವರನ್ನು ಕೂಡ ಸನ್ಮಾನಿಸಲಾಯಿತು.