ಗೂಗಲ್ ಮ್ಯಾಪ್ ನಂಬಿ ಹೋದ ಕ್ಯಾಬ್ ಡ್ರೈವರ್ಗೆ ಕಾದಿತ್ತು ದೊಡ್ಡ ಶಾಕ್
ಬೆಂಗಳೂರು, ಮಾರ್ಚ್ 6: ನಗರದಲ್ಲೊಂದು ಎಲ್ಲೇ ಹೋಗಬೇಕಿದ್ದರೂ ಗೂಗಲ್ ಮ್ಯಾಪ್ ಹಾಕಿಕೊಳ್ಳುವುದು ಸಾಮಾನ್ಯ, ಮನುಷ್ಯನ ಮಾತಿಗಿಂತ ಹೆಚ್ಚು ನಂಬಿಕೆ ಈ ಗೂಗಲ್ ಮ್ಯಾಪ್ ಮೇಲೆ ಇರುತ್ತದೆ.
ಸುಳ್ಳು ಹೇಳೋಕೆ ಅದೇನು ಮನುಷ್ಯರ ಅಂತ ಹೇಳುತ್ತಾ ಗೂಗಲ್ ಮ್ಯಾಪ್ ಯಾವ ಕಡೆ ದಾರಿ ತೋರಿಸಿದರೂ ನಡೆದು ಬಿಡೋದೆ. ಹೀಗೆ ಗೂಗಲ್ ಮ್ಯಾಪ್ ನಂಬಿ ಹೋದ ಕ್ಯಾಬ್ ಡ್ರೈವರ್ ಹಲ್ಲೆಗೆ ಒಳಗಾಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಗೂಗಲ್ ಮ್ಯಾಪ್ ನಂಬಿ ಖಾಸಗಿ ಸ್ವತ್ತು ಪ್ರವೇಶಿಸಿದ ಕ್ಯಾಬ್ ಚಾಲಕನೊಬ್ಬ ಹಲ್ಲೆಗೆ ಒಳಗಾಗಿದ್ದಾನೆ. ದಿಲೀಪ್ ಕುಮಾರ್ (26) ಹಲ್ಲೆಗೊಳಗಾದ ಕ್ಯಾಬ್ ಚಾಲಕ.
ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪದ ಕೋನಪ್ಪನ ಅಗ್ರಹಾರದಿಂದ ಪ್ರಯಾಣಿಕರೊಬ್ಬರನ್ನು ಪಿಕ್ ಅಪ್ ಮಾಡಬೇಕಿತ್ತು. ಗೂಗಲ್ ಮಾರ್ಗದರ್ಶನ ನೀಡಿದಂತೆ ಅವರು ತೆರಳುತ್ತಿದ್ದರು. ಈ ಮಾರ್ಗ ಬಾಬು ರೆಡ್ಡಿ ಎಂಬ ಉದ್ಯಮಿಗೆ ಸೇರಿದ ಜಾಗವಾಗಿತ್ತು.
ಉದ್ಯಮಿ ಹಾಗೂ ರವಿ ರೆಡ್ಡಿ ಅವರಿಗೆ ಸೇರಿದ ಬಸ್ಗಳು ಮತ್ತು ಟ್ರಕ್ಗಳನ್ನು ನಿಲ್ಲಿಸಲು ಈ ಜಾಗ ಬಳಸಿಕೊಳ್ಳುತ್ತಿದ್ದರು. ತಮ್ಮ ಜಾಗಕ್ಕೆ ಬಂದಿದ್ದಕ್ಕೆ ಕ್ಯಾಬ್ ಚಾಲಕನನ್ನು ಉದ್ಯಮಿ ಪ್ರಶ್ನಿಸಿದ್ದರು. ಗೂಗಲ್ ಮ್ಯಾಪ್ ಕಾರಣದಿಂದ ಯಡವಟ್ಟಾಗಿದೆ ಎಂದು ದಿಲೀಪ್ ಉತ್ತರಿಸಿದ್ದರು.
ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದು ಬಾಬು ರೆಡ್ಡಿ ಕಡೆಯವರು ಸೇರಿ ದಿಲೀಪ್ ಮೇಲೆ ಸೌದೆಗಳಿಂದ ಭೀಕರ ಹಲ್ಲೆ ನಡೆಸಿದ್ದಾರೆ. ದಿಲೀಪ್ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.