ಕೆಂಪೇಗೌಡ ಬಡಾವಣೆ ಫಲಾನುಭವಿಗಳಿಗೆ ಗುಡ್ ನ್ಯೂಸ್
ಬೆಂಗಳೂರು, ಜೂನ್ 6: ಕೆಂಪೇಗೌಡ ಲೇಔಟ್ ನಿವೇಶನದ ಹಣವನ್ನು ಇದುವರೆಗೂ ಪಾವತಿಸದ ಫಲಾನುಭವಿಗಳು ಸಿಹಿ ಸುದ್ದಿ ಇದೆ.
ಬಿಡಿಎ ನೀಡಿರುವ ಅವಧಿ ಮೀರಿಗೆ ಹಣ ಕಟ್ಟಲು ಸಾಧ್ಯವಾಗಿಲ್ಲ, ಬಿಡಿಎಗೆ ದಂಡ ಕಟ್ಟಬೇಕಾಗುತ್ತೇನೋ ಎನ್ನುವ ಗೊಂದಲ ಬೇಡ, ಅವಧಿಯನ್ನು ಬಿಡಿಎ ವಿಸ್ತರಿಸಿದೆ. ಸರ್ಕಾರದ ಅಧಿಕೃತ ಆದೇಶ ಹೊರಬೀಳುವವರೆಗೂ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎಂದು ಬಿಡಿಎ ಅಧ್ಯಕ್ಷ ಎಸ್ಟಿ ಸೋಮಶೇಖರ್ ತಿಳಿಸಿದ್ದಾರೆ.
ಕೆಂಪೇಗೌಡ ಬಡಾವಣೆ ಫಲಾನುಭವಿಗಳಿಗೆ ಹೊಸ ಆತಂಕ ಶುರು
ನಾಡಪ್ರಭು ಕೆಂಪೇಗೌಡ ಲೇಔಟ್ನಲ್ಲಿ ಮೂಲಸೌಕರ್ಯ ಕಾಮಗಾರಿ ಪೂರ್ಣಗೊಳ್ಳಲಿ ಇನ್ನೂ ಒಂದು ವರ್ಷ ಕಾಯಲೇಬೇಕಾಗಿದೆ. ಈ ಕುರಿತು ಬಿಡಿಎ ಅಧ್ಯಕ್ಷ ಎಸ್ಟಿ ಸೋಮಶೇಖರ್ ಮಾಹಿತಿ ನೀಡಿದ್ದಾರೆ, ಉಡಿಯುವ ನೀರು, ರಸ್ತೆ ಸೇರಿದಂತೆ ಕೆಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಅದು 2020ರಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಇನ್ನು ನಿವೇಶನ ಹಂಚಿಕೆದಾರರು ಬಾಕಿ ಹಣ ಪಾವತಿಸುವ ವಿಚಾರ ಕುರಿತು ಮಾತನಾಡಿದ ಅವರು , ಅವರಿಗೆ ಹೆಚ್ಚುವರಿ ಅವಧಿ ನೀಡಲಾಗಿದೆ. ಇದಕ್ಕೆ ಸರ್ಕಾರ ಸಾತ್ವಿಕ ಒಪ್ಪಿಗೆ ನೀಡಿದ್ದು, ಅಧಿಕೃತ ಆದೇಶ ಇನ್ನೂ ಹೊರಬರಬೇಕಿದೆ. ಇದನ್ನು ನೆಪವಾಗಿರಿಸಿಕೊಂಡು ಪ್ರಾಧಿಕಾರ ದಂಡ ವಿಧಿಸುತ್ತದೆ ಎನ್ನುವ ಆತಂಕ ಬೇಡ ಎಂದಿದ್ದಾರೆ.
ಕೆಂಪೇಗೌಡ ಲೇಔಟ್ನಲ್ಲಿ ಕುಡಿಯುವ ನೀರು, ಒಳಚರಂಡಿ ಸೌಲಭ್ಯ ಕಲ್ಪಿಸುವ ಕಾಮಗಾರಿ ನಡೆಯುತ್ತಿದೆ. ಜಲ ಸಂಗ್ರಹಾಗಾರ ಸಹಿತ ಇತರೆ ಕೆಲಸಗಳನ್ನು ಕಾಲಮಿತಿಯೊಳಗೆ ಮುಗಿಸಲು ಪ್ರಾಧಿಕಾರ ಆಧ್ಯತೆ ನೀಡಿದೆ. ಕೆಂಪೇಗೌಡ ಲೇಔಟ್ ಮಧ್ಯೆ ಮುಖ್ಯ ಆರ್ಟೀರಿಯಲ್ ರಸ್ತೆ ಹಾದುಹೋಗಲಿದೆ. ಇದರ ಕಾಮಗಾರಿಯೂ ಪ್ರಗತಿಯಲ್ಲಿದೆ.