ಲೋನ್ ಕೊಡಿಸುವ ನೆಪದಲ್ಲಿ ಉದ್ಯಮಿಗೆ 7 ಕೋಟಿ ರೂ. ನಾಮ ಹಾಕಿದ್ದ ಗ್ಯಾಂಗ್ ಸೆರೆ
ಬೆಂಗಳೂರು, ಮೇ. 06: ಆತ ಮೈಮೇಲೆ ಹಾಕುವುದು ಬರೋಬ್ಬರಿ ನಾಲ್ಕು ಕೆ.ಜಿ. ಚಿನ್ನ. ನೋಡೋಕೆ ಗೋಲ್ಡ್ ಬಾಬಾ ತರ ಕಾಣ್ತಾನೆ. ಯಾವುದೋ ಮಠದ ಪೀಠಾಧಿಪತಿ ಎಂಬ ಭಾವನೆ ಮೂಡುತ್ತೆ. ಬ್ಯಾಂಕ್ ಲೋನ್ ಕೊಡಿಸುವ ನೆಪದಲ್ಲಿ ಬೆಂಗಳೂರಿನ ಉದ್ಯಮಿಗೆ ಏಳು ಕೋಟಿ ರೂಪಾಯಿ ಪಡೆದು ನಾಮ ಹಾಕಿದ್ದ "ಗೊಲ್ಡ್ ಮ್ಯಾನ್" ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ ! ಅಂದ ಹಾಗೆ ಅವನು ಮೈಮೇಲೆ ಧರಿಸುತ್ತಿದ್ದ ಎರಡೂವರೆ ಕೋಟಿ ಮೌಲ್ಯದ ನಾಲ್ಕು ಕೆ.ಜಿ ಚಿನ್ನ ವಶಪಡಿಸಿಕೊಂಡಿದ್ದಾರೆ. ಮೈತುಂಬಾ ಚಿನ್ನದ ಒಡವೆ ಹಾಕಿಕೊಂಡು ಫೋಸ್ ಕೊಟ್ಟಿದ್ದ ತಮಿಳುನಾಡು ಮೂಲದ ಈ ವಂಚಕ ಇದೀಗ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ.
ಖತರ್ನಾಕ್ ಗೋಲ್ಡ್ ಮ್ಯಾನ್: ತಮಿಳುನಾಡು ಮೂಲದ ತಿರುನಲ್ವೇಲಿ ಜಿಲ್ಲೆಯ ಎ. ಹರಿನಾಡರ್ ಅಲಿಯಾಸ್ ಹರಿ ಗೋಪಾಲಕೃಷ್ಣ ನಾಡರ್ ಬಂಧಿತ ಆರೋಪಿ. ಈತನಿಂದ 3893 ಗ್ರಾಂ ಚಿನ್ನಾಭರಣ, 8 ಲಕ್ಷ ರೂ. ನಗದು, ಇನ್ನೋವಾ ಕ್ರಿಸ್ಟಾ ಕಾರನ್ನು ವಶಪಡಿಸಿಕೊಂಡಿದ್ದಾನೆ. ಕರ್ನಾಟಕ, ಆಂಧ್ರ ಪ್ರದೇಶ ತಮಿಳುನಾಡು, ಕೇರಳದಲ್ಲಿ ಉದ್ಯಮಿಗಳಿಗೆ ಬ್ಯಾಂಕ್ ಲೋನ್ ಕೊಡಿಸುವ ನೆಪದಲ್ಲಿ ಸಾಕಷ್ಟು ಮಂದಿಗೆ ವಂಚನೆ ಮಾಡಿರುವುದು ಸಿಸಿಬಿ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಬ್ಯಾಂಕ್ ಲೋನ್ ಕೊಡಿಸುವರ ಬಗ್ಗೆ ಹುಷಾರ್: ಬೆಂಗಳೂರಿನ ಉದ್ಯಮಿ ವೆಂಕಟರಮಣಿ ಶಾಸ್ತ್ರಿ ಅವರು ತನ್ನ ಬಿಸಿನೆಸ್ ಮುಂದುವರೆಸಲು ಬ್ಯಾಂಕ್ ಲೋನ್ಗಾಗಿ ಪರದಾಡುತ್ತಿದ್ದರು. ವಾರ್ಷಿಕ ಶೇ 6 ಬಡ್ಡಿ ದರದ ಮೇಲೆ 360 ಕೋಟಿ ರೂಪಾಯಿ ಸಾಲವನ್ನು ಬ್ಯಾಂಕ್ನಲ್ಲಿ ಕೊಡಿಸುವುದಾಗಿ ನಂಬಿಸಿದ್ದ ವ್ಯಕ್ತಿಯೊಬ್ಬ ಪಂಚತಾರ ಹೋಟೆಲ್ಗೆ ಕರೆದೊಯ್ದಿದ್ದ. ಅಲ್ಲಿ ಹರಿ ನಾಡರ್ ಮತ್ತು ರಂಜಿತ್ ಪಣಕ್ಕರ್ ಎಂಬುವರನ್ನು ಪರಿಚಯಿಸಿದ್ದರು. ಮೂರು ದಿನದಲ್ಲಿ ವೆಂಕಟರಮಣಿ ಶಾಸ್ತ್ರಿ ಅವರಿಗೆ ಲೋನ್ ಕೊಡಿಸುವುದಾಗಿ ನಂಬಿಸಿದ್ದ ವಂಚಕ ಗ್ಯಾಂಗ್, ನಕಲಿ ಡಿಡಿಯನ್ನು ತೋರಿಸಿತ್ತು. ನಿಮಗೆ 360 ಕೋಟಿ ರೂಪಾಯಿ ಲೋನ್ ಆಗಿದೆ. ಆದರೆ ಅದು ಬಿಡುಗಡೆಯಾಗಬೇಕಾದರೆ ಸರ್ವೀಸ್ ಚಾರ್ಜ್ 2 ಪರ್ಸೆಂಟ್ ಹಣವನ್ನು ಬ್ಯಾಂಕ್ನವರಿಗೆ ಕೊಡಬೇಕು. ಮೊದಲು ಆ ಹಣವನ್ನು ಪಾವತಿ ಮಾಡಿದ ಬಳಿಕವಷ್ಟೇ ಲೋನ್ ಬಿಡುಗಡೆ ಮಾಡುತ್ತಾರೆ ಎಂದು ನಂಬಿಸಿದ್ದರು.
ಸಾಲ ಕೊಡಿಸುವ ನೆಪದಲ್ಲಿ ಏಳು ಕೋಟಿಗೆ ನಾಮ:
ಈ ಬಗ್ಗೆ ಅನುಮಾನಗೊಂಡಿದ್ದ ವೆಂಕಟರಮಣಿ ಶಾಸ್ತ್ರಿ ಅವರ ಸಮ್ಮುಖದಲ್ಲಿಯೇ ಬ್ಯಾಂಕ್ ಮ್ಯಾನೇಜರ್ಗೆ ಕರೆ ಮಾಡಿ ಲೌಡ್ ಸ್ಪೀಕರ್ನಲ್ಲಿ ಲೋನ್ ಮಂಜೂರು ಆಗಿರುವ ಬಗ್ಗೆ ಹೇಳಿಸಿದ್ದರು. ಇವರ ಗ್ಯಾಂಗ್ನ ಸದಸ್ಯರೊಬ್ಬರಿಗೆ ಕರೆ ಮಾಡಿ ನಾಟಕವಾಡಿದ್ದ ವಂಚಕರ ಮೋಸದ ಬಲೆಗೆ ವೆಂಕಟರಮಣಶಾಸ್ತ್ರಿ ಬಿದ್ದಿದ್ದರು. ಸರ್ವೀಸ್ ಚಾರ್ಜ್ ಆಗಿ 7.20 ಕೋಟಿ ರೂ. ಹಣವನ್ನು ಬ್ಯಾಂಕ್ ಮೂಲಕವೇ ವೆಂಕಟರಮಣ ಶಾಸ್ತ್ರಿ ನೀಡಿದ್ದರು. ಲೋನ್ ಹಣ ಕೇಳಿದಾಗ, ಜೀವವನ್ನೇ ತೆಗೆಯುವುದಾಗಿ ಜೀವ ಬೆದರಿಕೆ ಹಾಕಿ ತಲೆ ಮರೆಸಿಕೊಂಡಿದ್ದರು. ಈ ಕುರಿತು ವೆಂಕಟರಮಣಿ ಶಾಸ್ತ್ರಿ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರನ್ನು ಸಿಸಿಬಿ ಪೊಲೀಸರ ತನಿಖೆಗೆ ವಹಿಸಲಾಗಿತ್ತು.
ಇಬ್ಬರು ಕಿಂಗ್ ಪಿನ್ ಗಳು ಸೆರೆ:
Recommended Video
ಪ್ರಕರಣದ ತನಿಖೆ ನಡೆಸಿದ ಸಿಸಿಬಿ ವಿಶೇಷ ನಿಗಾ ತಂಡದ ಪೊಲೀಸರು, ಹರಿ ನಾಡರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಪ್ರಕರಣದ ಮತ್ತೊಬ್ಬ ಆರೋಪಿಯಾದ ರಂಜಿತ್ನನ್ನು ಈ ಮೊದಲೇ ಪೊಲೀಸರು ಬಂಧಿಸಿದ್ದರು. ಈತನಿಂದಲೂ ಕೂಡ ಹತ್ತು ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ, ಬ್ಯಾಂಕ್ ಖಾತೆಯಲ್ಲಿದ್ದ 34 ಲಕ್ಷ ರೂ. ಹಣವನ್ನು ಜಪ್ತಿ ಮಾಡಿದ್ದರು. ಇದೀಗ ಹರಿ ನಾಡರ್ ಮತ್ತು ರಂಜಿತ್ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆಯಾಗಿರುವ ಬಗ್ಗೆ ವಿವರ ಪಡೆದಿರುವ ಸಿಸಿಬಿ ಪೊಲೀಸರು, ಇತರೆ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಅಪರಾಧ ವಿಭಾಗದ ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ಈ ಕಾರ್ಯಚರಣೆ ನಡೆದಿದೆ.