ಸಿದ್ದರಾಮಯ್ಯ ಭೇಟಿಯಾದ ರಮೇಶ್ ಜಾರಕಿಹೊಳಿಯ ಬಿಜೆಪಿ ಎದುರಾಳಿ
ಬೆಂಗಳೂರು, ಸೆಪ್ಟೆಂಬರ್ 19: ಸಿದ್ದರಾಮಯ್ಯ ನಿವಾಸಕ್ಕೆ ಬಿಜೆಪಿ ಮುಖಂಡ ಅಶೋಕ ಪೂಜಾರಿ ಭೇಟಿ ನೀಡಿದ್ದ ಕೆಲ ಸಮಯ ಮಾತುಕತೆ ನಡೆಸಿದ್ದಾರೆ. ಈ ಭೇಟಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಅಶೋಕ ಪೂಜಾರಿ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೋಕಾಕ ಕ್ಷೇತ್ರದಿಂದ ರಮೇಶ್ ಜಾರಕಿಹೊಳಿ ವಿರುದ್ಧ ಬಿಜೆಪಿ ಟಿಕೆಟ್ನಿಂದ ಸ್ಪರ್ಧಿಸಿ ಸೋಲನ್ನಪ್ಪಿದ್ದರು. ಅವರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಕೇಂದ್ರದಿಂದ ಬಿಎಸ್ವೈಗೆ ಅವಮಾನ, ರಾಜ್ಯಕ್ಕೆ ಅನ್ಯಾಯ: ಸಿದ್ದರಾಮಯ್ಯ ವಾಗ್ದಾಳಿ
ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದ್ದು, ಉಪಚುನಾವಣೆಯಲ್ಲಿ ಅವರೇ ಅಥವಾ ಅವರ ಕುಟುಂಬದ ಯಾರಾದರೂ ಒಬ್ಬರು ಬಿಜೆಪಿ ಟಿಕೆಟ್ನಿಂದಲೇ ಚುನಾವಣೆಗೆ ಸ್ಪರ್ಧಿಸುವುದು ಖಾಯಂ ಎನ್ನಲಾಗಿದೆ.
ಬಿಜೆಪಿಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಅಶೋಕ ಪೂಜಾರಿ?
ರಮೇಶ್ ಜಾರಕಿಹೊಳಿ ಬಿಜೆಪಿ ಸಖ್ಯ ಬೆಳಿಸಿಕೊಂಡಿದ್ದರಿಂದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಅಶೋಕ ಪೂಜಾರಿ ಅವರು ಬದಿಗೆ ಸರದಂತಾಗಿದ್ದಾರೆ. ತಮಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಲಭ್ಯವಾಗುವುದಿಲ್ಲವೆಂದು ಮನಗಂಡಿರುವ ಅವರು ಕಾಂಗ್ರೆಸ್ನಿಂದ ಮತ್ತೆ ರಮೇಶ್ ಜಾರಕಿಹೊಳಿಯನ್ನು ಎದುರಿಸಲು ಅವಕಾಶ ಕೇಳಲು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ ಎಂಬ ಮಾತು ಕ್ಷೇತ್ರದಲ್ಲಿ ಹರಿದಾಡುತ್ತಿದೆ.
ರಮೇಶ್ ಜಾರಕಿಹೊಳಿಗೆ ಸೋಲುಣಿಸುವ ಪಣತೊಟ್ಟಿರುವ ಸಿದ್ದರಾಮಯ್ಯ
ಕಾಂಗ್ರೆಸ್ಗೆ ಕೈಕೊಟ್ಟು ಮೈತ್ರಿ ಸರ್ಕಾರ ಪತನವಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ ರಮೇಶ್ ಜಾರಕಿಹೊಳಿಗೆ ತಕ್ಕ ಪಾಠ ಕಲಿಸಲು ಸಿದ್ದರಾಮಯ್ಯ ಸಹ ನಿಶ್ಚಯಿಸಿದ್ದು, ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಜಾರಕಿಹೊಳಿ ನೆರಳಲ್ಲಿ ಕಾಂಗ್ರೆಸ್ನಲ್ಲಿ ಬೇರೆ ನಾಯಕರು ಕ್ಷೇತ್ರದಲ್ಲಿ ಅಷ್ಟಾಗಿ ಗುರುತಿಸಿಕೊಂಡಿಲ್ಲ, ಹಾಗಾಗಿ ವಿರೋಧಿ ಪಾಳಯದ ಅಶೋಕ ಪೂಜಾರಿ ಮೇಲೆ ಸಿದ್ದರಾಮಯ್ಯ ಒಲವು ತೋರಿದ್ದಾರೆ.
ಹೈಕಮಾಂಡ್ ಅಂಗಣದಲ್ಲಿ ಸಿದ್ದರಾಮಯ್ಯಗೆ ಸಿಗುತ್ತಿದ್ದ 'ರಾಜ ಮರ್ಯಾದೆ' ಕಮ್ಮಿ ಆಯಿತೇ?
ರಾಜಕೀಯ ಚರ್ಚೆ ಮಾಡಿಲ್ಲವೆಂದ ಅಶೋಕ ಪೂಜಾರಿ
ಸಿದ್ದರಾಮಯ್ಯ ಅವರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ ಪುಜಾರಿ ಅವರು, 'ಸಿದ್ದರಾಮಯ್ಯ ಅವರೊಂದಿಗೆ ರಾಜಕೀಯ ಚರ್ಚೆ ಮಾಡಿಲ್ಲ' ಎಂದಿದ್ದಾರೆ.
'ಪ್ರವಾಹ ಸಂತ್ರಸ್ತರ ಪರವಾಗಿ ಸಿದ್ದರಾಮಯ್ಯಗೆ ಮನವಿ'
'ಕ್ಷೇತ್ರದಲ್ಲಿ ನೆರೆಯಿಂದ ಜನರು ಮನೆ-ಹೊಲ ಕಳೆದುಕೊಂಡಿದ್ದು ಅವರಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಕೇಳಿಕೊಂಡಿದ್ದೇನೆ, ನಮ್ಮ ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ ಅವರು, ಈ ಕುರಿತು ಸಿಎಂ ಅವರಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದಾರೆ' ಎಂದರು.