ಗೋವನ್ನು ಜೀವನದೊಂದಿಗೆ ಜೋಡಿಸಿ, ಮೃತ್ಯುವಿನೊಂದಿಗಲ್ಲ
ಬೆಂಗಳೂರು, ಸೆ 1: ಇಂದು ಗೋವನ್ನು ಮೃತ್ಯುವಿನೊಂದಿಗೆ ಜೋಡಿಸಿರುವುದೇ ಸಮಸ್ಯೆಗಳಿಗೆ ಕಾರಣವಾಗಿದ್ದು, ನಮ್ಮ ಜೀವನದೊಂದಿಗೆ ಗೋವನ್ನು ಜೋಡಿಸುವುದೇ ಪರಿಹಾರವಾಗಿದೆ ಎಂದು ರಾಘವೇಶ್ವರ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
ನಗರದಲ್ಲಿ ಗುರುವಾರ (ಸೆ 1) "ಗೋಚಾತುರ್ಮಾಸ್ಯ"ದ 45ನೇ ದಿನದ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಶ್ರೀಗಳು, ಗೋವು ತನ್ನ ಜೀವಿತಾವಧಿಯಲ್ಲಿ ಪ್ರೀತಿಯಿಂದ ನೀಡುವ ವಸ್ತುಗಳನ್ನು ಬಳಸಿಕೊಂಡರೆ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಹೇಳಿದ್ದಾರೆ. (ಭಾರತ ಗೋಮೂತ್ರ ರಫ್ತು ಮಾಡಿ ಕೀರ್ತಿಶಾಲಿಯಾಗಲಿ)
ಸಭೆಯಲ್ಲಿ ಸಾನ್ನಿಧ್ಯವಹಿಸಿ ಗವ್ಯಾಧಾರಿತ ಕ್ಯಾನ್ಸರ್ ಚಿಕಿತ್ಸೆಯ ಕುರಿತು ಮಾತನಾಡಿದ ರಾಘವೇಶ್ವರ ಶ್ರೀಗಳು, ಗೋವಿನ ಮೂತ್ರದಲ್ಲಿ ಚಿನ್ನವಿದೆ ಎಂದು ಸಂಶೋಧನೆ ಹೇಳಿದೆ, ಆದರೆ ಅಷ್ಟು ಮಾತ್ರವಲ್ಲದೆ, ಅಮೂಲ್ಯವಾದ ಜೀವವನ್ನು ಉಳಿಸುವ ಶಕ್ತಿಯೂ ಗೋಮೂತ್ರಕ್ಕಿದೆ.
ಆಧುನಿಕ ಚಿಕಿತ್ಸಾ ಪದ್ಧತಿಗೆ ಹೋಲಿಸಿದರೆ ಗವ್ಯಾಧಾರಿತ ಕ್ಯಾನ್ಸರ್ ಚಿಕಿತ್ಸೆ ಎಲ್ಲಾ ರೀತಿಯಿಂದಲೂ ಉತ್ತಮ ಆಯ್ಕೆಯಾಗಿದೆ. ಕ್ಯಾನ್ಸರಿನಂತಹ ರೋಗ ಎದುರಾದಾಗಲೂ ನಮ್ಮ ಜೀವ ಉಳಿಸುವ ಶಕ್ತಿ ಗೋವಿಗಿದೆ, ಹಾಗಿರುವಾಗ ಗೋವಿನ ಜೀವವನ್ನು ತೆಗೆಯುತ್ತಿರುವುದು ಮೂರ್ಖತನದ ಕಾರ್ಯ ಎಂದು ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಹೇಳಿದ್ದಾರೆ.
ಗೋವಿನ ಕುರಿತಾದ ಅಜ್ಞಾನವೇ ಗೋಹತ್ಯೆಗೆ ಕಾರಣವಾಗಿದೆ. ಗೋವಿನಿಂದ ಲಾಭವಿದೆ ಎಂಬುದನ್ನು ರೈತರಿಗೆ ಮನವರಿಕೆ ಮಾಡಿಕೊಡಬೇಕಾದ ಕಾರ್ಯವಾಗಬೇಕಿದೆ. ಗೋವನ್ನು ನಾವು ಸಾಕುವುದಲ್ಲ, ಗವ್ಯೋತ್ಪನ್ನಗಳನ್ನು ಸರಿಯಾಗಿ ಬಳಸಿದರೆ ಗೋವೇ ನಮ್ಮನ್ನು ಸಾಕುತ್ತದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಮಾತನಾಡುತ್ತಾ ಶಿವಾನಂದ ಸ್ವಾಮಿಗಳು , ಮೊದಲು ಗೋವಿನ ಕುರಿತಾಗಿ ಕಾಳಜಿಯನ್ನು ಬೆಳಸಿಕೊಳ್ಳಬೇಕು. ರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಗೋಜಾಗೃತಿಯ ಆಂದೋಲನಕ್ಕೆ ನಮ್ಮ ಸಹಕಾರವಿದೆ ಎಂದು ಹೇಳಿದರು. (ಹವ್ಯಕರ ಸಭೆಯಲ್ಲಿ ಮಾರಾಮಾರಿ)
ವೃತ್ತಿಯಲ್ಲಿ ಲೆಕ್ಕಪರಿಶೋಧಕರಾದರೂ ಗೋಸೇವೆಯಲ್ಲಿ ತೊಡಗಿಸಿಕೊಂಡಿರುವ ವಿ. ಸುಧೀಂದ್ರನಾಥ ಮತ್ತು ಕಾಸರಗೋಡಿನ ರಂಜಿತ್ ಪೆರಿಯಾ ಅವರಿಗೆ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು.
ಶ್ರೀಭಾರತೀಪ್ರಕಾಶನವು ಹೊರತಂದ ಗೋಕಥಾ - ದೃಶ್ಯಮುದ್ರಿಕೆ ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯ ಮುದ್ರಿಕೆಯನ್ನು ಸಾನ್ನಿಧ್ಯವಹಿಸಿದ್ದ ಶ್ರೀಗಳು ಲೋಕಾರ್ಪಣೆ ಮಾಡಿದರು. ವಿಧಾನಸಭಾ ಸದಸ್ಯರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಶ್ರೀಗಳಿಂದ ಆಶೀರ್ವಾದ ಪಡೆದರು.