ಟ್ವಿಟ್ಟರ್ನಲ್ಲಿ ಟಾಪ್ ಟ್ರೆಂಡ್ ಆಯಿತು #GobackModi ..!
ಬೆಂಗಳೂರು, ಜನವರಿ 2: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಎರಡು ದಿನ ಭೇಟಿ ನೀಡಿರುವುದನ್ನು ವಿರೋಧಿಸಿ ಮಾಡಲಾಗಿರುವ ಹ್ಯಾಶ್ ಟ್ಯಾಗ್ #GobackModi ಟ್ವಿಟ್ಟರ್ನಲ್ಲಿ ಟ್ರೆಂಡ್ ಆಗಿದೆ.
ಬಿಜೆಪಿ ವಿರುದ್ಧ ಟೀಕೆ ಮಾಡಲು ಮೋದಿ ಕರ್ನಾಟಕ ಭೇಟಿಯನ್ನು, ಕರ್ನಾಟಕ ಕಾಂಗ್ರೆಸ್ ಹಾಗೂ ಅದರ ಮುಖಂಡರು ಮತ್ತು ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಕರ್ನಾಟಕಕ್ಕೆ ಮೋದಿ ಹಾಗೂ ಕೇಂದ್ರ ಸರ್ಕಾರದಿಂದ ಅನ್ಯಾಯ ಆಗುತ್ತಿದೆ ಎಂದು ಸಾಲು ಸಾಲು ಟ್ವೀಟ್ ಮಾಡುವ ಮೂಲಕ ಮೋದಿ ಅವರಿಗೆ ನೇರವಾಗಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಿಂದ ರಾಜ್ಯ ಬಿಜೆಪಿ ನಾಯಕರು ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಮಹಾದಾಯಿ ವಿಚಾರ, ಪೌರತ್ವ ತಿದ್ದುಪಡಿ ಕಾಯ್ದೆ, ಎನ್ಆರ್ಸಿ ವಿರೋಧಿಸಲು ಸಹ ಟ್ವಿಟ್ಟರ್ನಲ್ಲಿ #GobackModi ಹ್ಯಾಶ್ ಟ್ಯಾಗ್ ಬಳಸಿಕೊಳ್ಳಲಾಗಿದೆ. 28 ಸಾವಿರ ಟ್ವೀಟ್ಗಳು #GobackModiಗೆ ಇಲ್ಲಿಯವರೆಗೆ ಆಗಿವೆ.
ನರೇಂದ್ರ ಮೋದಿ ತುಮಕೂರು ಭೇಟಿ ವಿರೋಧಿಸಿದ ರೈತರು
ಕರ್ನಾಟಕಕ್ಕೆ ನೆರೆ ಪರಿಹಾರ ನೀಡುವುದರಲ್ಲಿ ತಾರತಮ್ಯ, ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ನೀಡುವ ಕುರಿತು, ಮಹದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಮೋದಿ ಅವರು ತೀವ್ರ ತಾರತಮ್ಯ ಮಾಡುತ್ತಿದ್ದಾರೆ ಎಂಬುದಕ್ಕೆ ಈ ಹ್ಯಾಶ್ ಟ್ಯಾಗ್ ಹೆಚ್ಚು ಬಳಕೆಯಾಗಿದೆ. ಸಾಕಷ್ಟು ಜನ ಟ್ವಿಟರ್ನಲ್ಲಿ ಈ ಹ್ಯಾಶ್ಟ್ಯಾಗ್ ಮೂಲಕ ಮೋದಿ ಕಾಲೆಳೆಯುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ ತುಮಕೂರಿಗೆ ಭೇಟಿ ನೀಡಲಿದ್ದರು. ಅಲ್ಲಿ ಲಿಂಗೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದು, ತುಮಕೂರು ವಿವಿ ಆವರಣದಲ್ಲಿ ಆಯೋಜಿಸಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನಾದ ಫಲಾನುಭವಿಗಳ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿದ್ದರು. ಸಂಜೆ ಡಿಆರ್ಡಿಓ ಸಂಸ್ಥೆಗೆ ಭೇಟಿ ನೀಡಿ ರಾಜಭವನದಲ್ಲಿ ತಂಗಲಿದ್ದಾರೆ. ನಾಳೆ ಭಾರತೀಯ ವಿಜ್ಞಾನ ಕಾಂಗ್ರೆಸ್ ಜಿಕೆವಿಕೆ ಆವರಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.