ವಿಶ್ವ ಬಂಡವಾಳ ಹೂಡಿಕೆದಾರರಿಗೆ ರೈತರ ಅಡ್ಡಗಾಲು
ಬೆಂಗಳೂರು, ಫೆಬ್ರವರಿ 2 : ಬುಧವಾರದಿಂದ ಅರಮನೆ ಮೈದಾನದಲ್ಲಿ ನಡೆಯಲಿರುವ ಮೂರು ದಿನಗಳ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಬೆಳಿಗ್ಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ.
ಬಂಡವಾಳ ಹೂಡಿಕೆದಾರರ ಸಮಾವೇಶದಿಂದ ರಾಜ್ಯದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿ ಮಾಡುತ್ತೇವೆಂದು ಹೇಳುತ್ತಾ, ರಾಜ್ಯದ ಜನರ ತೆರಿಗೆ ಹಣ ಪೋಲು ಮಾಡುತ್ತಿರುತ್ತಾರೆ. ಹಿಂದೆ ನಡೆದ ಸಮಾವೇಶಗಳಲ್ಲಿ ಲಕ್ಷಾಂತರ ಕೋಟಿಗಳ ಹೂಡಿಕೆ ಮಾಡುತ್ತೇವೆಂದು ಹೇಳಿದ ಬಂಡವಾಳಗಾರರು ಪುಡಿಕಾಸನ್ನು ಮಾತ್ರ ಹೂಡಿಕೆ ಮಾಡಿರುತ್ತಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಂಗಳವಾರ ತಿಳಿಸಿದರು.
ಇದುವರೆಗೂ ನಡೆದ ಹೂಡಿಕೆದಾರರ ಸಮಾವೇಶದಿಂದ ಯಾವುದೇ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಯಾಗಿರುವುದಿಲ್ಲ ಮತ್ತು ಯಾವುದೇ ಸಾಧನೆ ಆಗಿಲ್ಲ. ಈಗ ನಡೆಯುವ ಸಮಾವೇಶದಿಂದಲೂ ಯಾವುದೇ ಸಾಧನೇ ಆಗುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. [ಇನ್ವೆಸ್ಟ್ ಕರ್ನಾಟಕ -2016 : ವಾಹನ ಸಂಚಾರದ ವಿವರ]
ರಾಜ್ಯದ ಜನರ ತೆರಿಗೆ, ಭೂಮಿ, ಜಲ ಮಾತ್ರ ಬಂಡವಾಳಗಾರರ ಕೈಗೆ ಹೋಗುತ್ತದೆ ವಿನಃ ಇದರಿಂದ ರಾಜ್ಯದ ಜನತೆಗೆ, ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ನುಡಿದರು. ಅವರ ಮುಖಂಡತ್ವದಲ್ಲಿ ಫೆ.3ರಂದು ಬೆಳಿಗ್ಗೆ 10 ಗಂಟೆಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ['ಇನ್ವೆಸ್ಟ್ ಕರ್ನಾಟಕ-2016'ಕ್ಕೆ ಯಾರ್ಯಾರು ಬರ್ತಿದ್ದಾರೆ?]
ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 2010ರಲ್ಲಿ ನಡೆದಿದ್ದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕೂಡ ರೈತರು ಭಾರೀ ಪ್ರತಿಭಟನೆ ನಡೆಸಿದ್ದರು. ಬಂಡವಾಳದಾರರ ಸಮಾವೇಶ ಮತ್ತು ರೈತರ ಪ್ರತಿಭಟನೆಯಿಂದಾಗಿ ಬಳ್ಳಾರಿ ರಸ್ತೆಯಲ್ಲಿ ಸಂಚಾರ ಅಸ್ಯವ್ಯಸ್ತವಾದರೂ ಅಚ್ಚರಿಯಿಲ್ಲ. [ರೈತನ ಕತ್ತುಹಿಡಿದು ದಬ್ಬಿದ ಡಿಸಿ ಬೆನ್ನುತಟ್ಟಿದ ಸಿಎಂ]