ರಸ್ತೆ ಕಾಮಗಾರಿ: ರಾಜ್ಯ ಚುನಾವಣಾ ಆಯೋಗಕ್ಕೆ ದೂರು
ಬೆಂಗಳೂರು, ಮಾರ್ಚ್ 06: ಒಂದು ರಸ್ತೆ ಇರುವಾಗ ಮತ್ತೊಂದು ರಸ್ತೆ ನಿರ್ಮಿಸಲು ಮುಂದಾಗಿರುವ ಬಿಬಿಎಂಪಿ ಕ್ರಮವನ್ನು ವಿರೋಧಿಸಿ ಜಿಕೆವಿಕೆ ಬಡಾವಣೆಯ ನಿವಾಸಿಗಳು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಕೇವಲ ಚುನಾವಣೆ ದೃಷ್ಟಿಯಿಂದ ಜಿಕೆವಿಕೆ ಬಡಾವಣೆಗೆ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಜಿಕೆವಿಕೆ ಬಡಾವಣೆಯ ನಿವಾಸಿಗಳು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಹೊಸ ರಸ್ತೆ ನಿರ್ಮಿಸಲು ಜಕ್ಕೂರು ವಾಯುನೆಲೆಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ. ಅಲ್ಲದೆ, ತೆರಿಗೆದಾರರ ಕೋಟ್ಯಂತರ ರೂಪಾಯಿ ವ್ಯರ್ಥವಾಗಲಿದೆ. ಇದರ ಬದಲಿಗೆ, ಪ್ಲಾಂಟೇಷನ್ ರಸ್ತೆಯನ್ನು ವಿಸ್ತರಣೆ ಮಾಡಬೇಕು. ಈ ರಸ್ತೆಯು ಶೋಭಾ ಅಲ್ಟಿಮಾ ಕ್ಯಾಂಪಸ್ , ಐಟಿಸಿ ಗಾರ್ಡನ್ ಎನ್ಕ್ಲೇವ್ ಬಳಿ ಕೊನೆಗೊಳ್ಳುತ್ತದೆ. ಎನ್ಕ್ಲೇವ್ ಪಕ್ಕದಲ್ಲೇ ಜಿಕೆವಿಕೆ ಬಡಾವಣೆ ಇದೆ. ಇಲ್ಲಿ ಖಾಲಿ ನಿವೇಶನವಿದ್ದು, ಸ್ವಲ್ಪ ಭಾಗವನ್ನು ಸ್ವಾಧೀನ ಪಡಿಸಿಕೊಂಡು ರಸ್ತೆಯನ್ನು ಮತ್ತಷ್ಟು ವಿಸ್ತರಿಸಬಹುದು ಎಂದು ಸಲಹೆ ನೀಡಿದ್ದಾರೆ.
ಬಳ್ಳಾರಿ ರಸ್ತೆಯಿಂದ ಜಕ್ಕೂರು ಫ್ಲೈಯಿಂಗ್ ಶಾಲೆಯ ಮೂಲಕ ಜಿಕೆವಿಕೆ ಬಡಾವಣೆಗೆ ರಸ್ತೆ ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ. ಜಕ್ಕೂರು ಪ್ಲಾಂಟೇಷನ್ ರಸ್ತೆ ಈ ಬಡಾವಣೆಯನ್ನು ಸಂಪರ್ಕಿಸುತ್ತದೆ. ಒಂದು ರಸ್ತೆ ಇರುವಾಗ ಮತ್ತೊಂದು ರಸ್ತೆ ನಿರ್ಮಿಸುವ ಔಚಿತ್ಯವೇನು ಎಂದು ಅವರು ಪ್ರಶ್ನಿಸಿದ್ದಾರೆ.