'ಆಶ್ರಮದಲ್ಲಿ ಮಧ್ಯರಾತ್ರಿ ಎಬ್ಬಿಸಿ ವಿಡಿಯೋ ಮಾಡುವಂತೆ ಹಿಂಸೆ ಮಾಡ್ತಿದ್ರು'
ಬೆಂಗಳೂರು, ನವೆಂಬರ್ 23: ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಆಶ್ರಮದಲ್ಲಿ ಮಾನಸಿಕ ಹಿಂಸೆ ನೀಡಲಾಗುತ್ತಿತ್ತು ಎಂದು ನಿತ್ಯಾನಂದ ಆಶ್ರಮದಿಂದ ರಕ್ಷಿಸಲಾಗಿದ್ದ ಬೆಂಗಳೂರಿನ ಬಾಲಕಿ ಹೇಳಿಕೆ ನೀಡಿದ್ದಾಳೆ.
ಈ ಕುರಿತು ಎನ್ಡಿಟಿವಿ ವರದಿ ಮಾಡಿದ್ದು, ಆಕೆ ನಿತ್ಯಾನಂದ ಆಶ್ರಮ ಸೇರಿದ್ದು ಯಾವಾಗ, ಅಲ್ಲಿ ಯಾವ ರೀತಿ ತನ್ನನ್ನು ನಡೆಸಿಕೊಳ್ಳುತ್ತಿದ್ದರು ಎಂಬುದನ್ನು ವಿವರವಾಗಿ ಬರೆಯಲಾಗಿದೆ.
2013ರ ಮೇ ತಿಂಗಳಿನಲ್ಲಿ ಗುರುಕುಲಕ್ಕೆ ಹೋಗಿ ಸೇರಿದೆ. ಮೊದಮೊದಲು ಮನಜರಂಜನಾ ಕಾರ್ಯಕ್ರಮಗಳು ನಡೆಯುತ್ತಿತ್ತು, 2017ರ ಬಳಿಕ ಭ್ರಷ್ಟಾಚಾರ ಬೆಳಕಿಗೆ ಬಂದಿತ್ತು. ಆಶ್ರಮಕ್ಕೆ ದೇಣಿಗೆ ಸಂಗ್ರಹಿಸುವ ಪ್ರಮೊಷನಲ್ ಕಾರ್ಯಗಳು ಆರಂಭವಾದವು. ಅದು ಕೇವಲ ಸಾವಿರಮಟ್ಟದಲ್ಲ ಲಕ್ಷಗಟ್ಟಲೆ ನಿಧಿಯನ್ನು ಸಂಗ್ರಹಿಸಬೇಕಿತ್ತು. ದೇಣಿಗೆ 3 ಲಕ್ಷ ರೂ.ನಿಂದ ಆರಂಭವಾಗುತ್ತಿತ್ತು. 8 ಲಕ್ಷದವರೆಗೂ ಇರುತ್ತಿತ್ತು. ಅಥವಾ ಜಮೀನನ್ನು ನೀಡಲಾಗುತ್ತಿತ್ತು.
ಮಧ್ಯರಾತ್ರಿ ಎಬ್ಬಿಸಿ ಸ್ವಾಮೀಜಿಗಾಗಿ ವಿಡಿಯೋ ಮಾಡುವಂತೆ ಒತ್ತಾಯ ಮಾಡುತ್ತಿದ್ದರು. ಜೊತೆಗೆ ಆಭರಣಗಳನ್ನು ಧರಿಸಬೇಕಿತ್ತು ಹಾಗೂ ಮೇಕ್ಅಪ್ ಮಾಡಿಕೊಳ್ಳಬೇಕಿತ್ತು. ಎಲ್ಲಾ ವಿಡಿಯೋಗಳನ್ನು ತನ್ನ ಸಹೋದರಿಯೇ ಮಾಡುತ್ತಿದ್ದಳು. ಹಾಗೆಯೇ ತಮ್ಮ ಪೋಷಕರ ವಿರುದ್ಧ ಮಾತನಾಡುವಂತೆ ಅವರೇ ಹೇಳಿಕೊಡುತ್ತಿದ್ದರು. ಹಾಗೆಯೇ ನನಗೂ ಅದೇ ರೀತಿ ಹೇಳಿದಾಗ ನಾನು ಅದನ್ನು ನಿರಾಕರಿಸಿದ್ದೆ ಎಂದು ಹೇಳಿದ್ದಾಳೆ.
ಸ್ವಯಂಘೋಷಿತ ದೇವಮಾನವ ನಿತ್ಯಾನಂದ ವಿದೇಶಕ್ಕೆ ಪರಾರಿ
ಹಾಗಾಗಿ ಆಕೆಯನ್ನು ಎರಡು ತಿಂಗಳುಗಳ ಕಾಲ ರೂಮಿನಲ್ಲಿ ಬಂಧಿಸಿಡಲಾಗಿತ್ತು. ಆಶ್ರಮದಲ್ಲಿದ್ದ ಕೆಲವರು ಕೆಟ್ಟ ಶಬ್ದಗಳಿಂದ ಆಕೆಯನ್ನು ನಿಂದಿಸುತ್ತಿದ್ದರು. ಯುವತಿ ಮನೆಯವರು ತಮ್ಮ ಮಗಳನ್ನು ಆಶ್ರಮದಲ್ಲಿ ಬಂಧಿಯಾಗಿರಿಸಿಕೊಂಡಿದ್ದಾರೆ ಎಂದು ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ಆಕೆಯನ್ನು ಮಕ್ಕಳ ಕಲ್ಯಾಣ ಇಲಾಖೆಯವರು ರಕ್ಷಣೆ ಮಾಡಿದ್ದಾರೆ. ಇದೀಗ ನಿತ್ಯಾನಂದ ಸ್ವಾಮಿ ಹುಡುಕಾಟ ನಡೆಯುತ್ತಿದ್ದು, ನಕಲಿ ಪಾಸ್ಪೋರ್ಟ್ ಮೂಲಕ ವಿದೇಶಕ್ಕೆ ಪರಾರಿಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನಕಲಿ ಪಾಸ್ಪೋರ್ಟ್ ಬಳಸಿ ವಿದೇಶಕ್ಕೆ ಪರಾರಿ
ಗುಜರಾತ್ ಪೊಲೀಸರ ಪ್ರಕಾರ ನಿತ್ಯಾನಂದ ಪಾಸ್ಪೋರ್ಟ್ ಪೊಲೀಸರ ವಶದಲ್ಲಿದೆ. ಹಾಗಿದ್ದರೆ ವಿದೇಶಕ್ಕೆ ನಿತ್ಯಾನಂದ ಪರಾರಿಯಾಗಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ. ನಕಲಿ ಪಾಸ್ಪೋರ್ಟ್ ಬಳಸಿ ವಿದೇಶಕ್ಕೆ ನಿತ್ಯಾನಂದ ಹೋಗಿರಬಹುದು ಎಂದು ಅಂದಾಜಿಸಲಾಗಿದೆ. ಒಂದೊಮ್ಮೆ ಇದು ನಿಜವಾದರೆ ನಿತ್ಯಾನಂದ ಸ್ವಾಮಿಗೆ ಇನ್ನಷ್ಟು ಕಾನೂನು ಸಂಕಟ ಎದುರಾಗಲಿದೆ.
ಸ್ವಾಮಿ ನಿತ್ಯಾನಂದ ವಿರುದ್ಧ ಎಫ್ಐಆರ್, ಶಿಷ್ಯೆಯರ ಬಂಧನ
ಸ್ವಾಮಿ ನಿತ್ಯಾನಂದ ವಿರುದ್ಧ ಅಪಹರಣ ಮತ್ತು ಅಕ್ರಮ ಬಂಧನದ ದೂರಿನ ಅನ್ವಯ ಗುಜರಾತ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಅಪಹರಣದ ಜೊತೆಗೆ ಆಶ್ರಮವನ್ನು ನಡೆಸಲು ಚಂದಾ ವಸೂಲಿಗೆ ಮಕ್ಕಳನ್ನು ಬಳಸಿಕೊಂಡಿರುವ ಬಗ್ಗೆಯೂ ದೂರು ದಾಖಲಿಸಿಕೊಂಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾದ್ವಿ ಪ್ರಾಣಪ್ರಿಯಾನಂದ ಮತ್ತು ಪ್ರಿಯತತ್ವ ರಿಧಿ ಕಿರಣ್ ಎಂಬ ಇಬ್ಬರು ನಿತ್ಯಾನಂದ ಶಿಷ್ಯೆಯರನ್ನು ಪೊಲೀಸರು ಬಂಧಿಸಿದ್ದಾರೆ.
ಕೋರ್ಟ್ಗೆ ಹಾಜರಾಗಬೇಕು
ಡಿಸೆಂಬರ್ 9ಕ್ಕೆ ಕೋರ್ಟ್ಗೆ ಹಾಜರಾಗಬೇಕು ಆದರೆ ಕೋರ್ಟ್ ನಿತ್ಯಾನಂದಸ್ವಾಮಿಗೆ ಕೋರ್ಟ್ ಜಾರಿ ಮಾಡಿ ಡಿಸೆಂಬರ್ 9ರ ವಿಚಾರಣೆಗೆ ಹಾಜರಾಗಿ ಉತ್ತರ ನೀಡುವಂತೆ ಸೂಚಿಸಿದೆ. ಇದರಿಂದ ಮುಂದಿನ ವಿಚಾರಣೆಯಲ್ಲಿ ನಿತ್ಯಾನಂದ ನಿಲುವು ಹಾಗೂ ಕೋರ್ಟ್ ಪ್ರತಿಕ್ರಿಯೆ ಪ್ರಾಮುಖ್ಯತೆ ಪಡೆದಿದೆ.
ಅತ್ಯಾಚಾರ ಪ್ರಕರಣ
ಕರ್ನಾಟಕದಲ್ಲಿ ಅತ್ಯಾಚಾರ ಪ್ರಕರಣ ಹಾಗೂ ಗುಜರಾತ್ನಲ್ಲಿ ಇಬ್ಬರು ಅಪ್ರಾಪ್ತರ ಮೇಲೆ ಹಲ್ಲೆ ಹಾಗೂ ಅಪಹರಣ ಪ್ರಕರಣ ದಾಖಲಾದ ಬಳಿಕ ನಿತ್ಯಾನಂದ ಸ್ವಾಮಿ ಪರಾರಿಯಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಪೊಲೀಸ್ ಮೂಲಗಳ ಪ್ರಕಾರ ಆಸ್ಟ್ರೇಲಿಯಾ ದ್ವೀಪವೊಂದರಲ್ಲಿ ನಿತ್ಯಾನಂದ ಅಡಗಿರುವ ಸಾಧ್ಯತೆ ಇದೆ.