ಮನುಷ್ಯನ ಅಪೂರ್ಣತೆ ಬಗೆಗೆ ಒರೆ ಹಚ್ಚುವ 'ಹಯವದನ' ನಾಟಕ ತಪ್ಪದೆ ನೋಡಿ
ಬೆಂಗಳೂರು, ಅಕ್ಟೋಬರ್ 12: ಗಿರೀಶ್ ಕಾರ್ನಾಡರ 'ಹಯವದನ' ನಾಟಕ ಅಕ್ಟೋಬರ್ 13ರಂದು ಬಸವೇಶ್ವರನಗರದ ಕೆಇಎ ಪ್ರಭಾತ್ ಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಸಂಜೆ 6 ಗಂಟೆಗೆ ನಾಟಕ ಆರಂಭವಾಗಲಿದೆ. ಗಿರೀಶ್ ಕಾರ್ನಾಡರ ರಚನೆ, ಬಿಬಿ ಕಾರಂತರ ಸಂಗೀತ, ಟಿಎಸ್ ನಾಗಾಭರಣ ಅವರು ಪುನರ್ ಸಂಯೋಜನೆ ಮಾಡಿದ್ದಾರೆ.
ಗಿರೀಶ್ ಕಾರ್ನಾಡರ, ವಿಭಿನ್ನವಾದ ವಿಷಯ ಇರೋ ನಾಟಕ 'ಹಯವದನ' ಎರಡು ದೇಹ ಒಂದು ಪ್ರಾಣದಂತಿದ್ದ ಕಪಿಲ ಮತ್ತು ದೇವದತ್ತ... ಅವರಿಬ್ಬರ ಮನ ಸೆಳೆದ ಪದ್ಮಿನಿ... ಸಂದರ್ಭಕ್ಕೆ ಬಲಿಯಾಗಿ, ಕಪಿಲನ ದೇಹಕ್ಕೆ, ದೇವದತ್ತನ ಶಿರ, ದೇವದತ್ತನ ದೇಹಕ್ಕೆ ಕಪಿಲನ ಶಿರ ಅದಲುಬದಲಾಗುತ್ತದೆ. ಸಂದಿಗ್ಧ ಪರಿಸ್ಥಿತಿಯ, ತೊಳಲಾಟಗಳ ಚಿತ್ರಣ ಅದ್ಭುತವಾಗಿ ಬಂದಿದೆ. ಬೆನಕ ತಂಡದ ಕಲಾವಿದರು ನಾಟಕವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.
ನಾಟಕದ ಹಾಡುಗಳಂತೂ ಇವತ್ತಿಗೂ, ಹವ್ಯಾಸಿ ರಂಗಭೂಮಿಯಲ್ಲಿ ಮೈಲಿಗಲ್ಲು. ನಾಟಕಕ್ಕೆ, ಅದರ ಹಾಡುಗಳಿಗೆ,ಬಿ ವಿ ಕಾರಂತರ ನಿರ್ದೇಶನ ಎಂದಮೇಲೆ ಹೇಳುವುದೇನಿದೆ... ನಾಟಕದುದ್ದಕ್ಕೂ ನಿಮಗೆ ವಿಭಿನ್ನವಾದ ಅನುಭವ ಖಚಿತ.
ಮನುಷ್ಯನ ಅಪೂರ್ಣತೆಯ ಬಗೆಗೆ ಆಲೋಚಿಸಲು, ಕಾರ್ನಾಡರ "ಹಯವದನ" ಓದಬೇಕು. ನಾಟಕ ಆರಂಭ ಆಗುವುದು ಗಣೇಶನ ಅಪೂರ್ಣತೆಯ ಉಲ್ಲೇಖನದಿಂದ. ಇಲ್ಲಿ ಕಂಡುಬರುವುದು ಬರೇ ಮೂರು ಮುಖ್ಯ ಪಾತ್ರಗಳು - ಪದ್ಮಿನಿ, ದೇವದತ್ತ ಹಾಗೂ ಕಪಿಲ. ಇಲ್ಲಿ ಅಪೂರ್ಣತೆಯ ಪ್ರತೀಕ ಅನ್ನುವಂತೆ ಹಯವದನನಿದ್ದಾನೆ.