ಪಾಸ್ಪೋರ್ಟ್ ಪಡೆಯುವುದು ಇನ್ಮುಂದೆ ಸರಳ; ಬರುತ್ತಿದೆ ಮೊಬೈಲ್ ಆಪ್
ಬೆಂಗಳೂರು, ಫೆಬ್ರವರಿ 29; ಪಾಸ್ಪೋರ್ಟ್ ವ್ಯವಸ್ಥೆಯನ್ನು ಸರಳೀಕರಿಸಲು ಮೋಬೈಲ್ ಆಪ್ ಒಂದನ್ನು ಹೊರತರಲು ವಿದೇಶಾಂಗ ಸಚಿವಾಲಯ ಕ್ರಮ ಕೈಗೊಳ್ಳುತ್ತಿದೆ. ವಿಸಾಕ್ಕೆ ಸಂಬಂಧಿಸಿದಂತೆ 170 ದೇಶಗಳೊಂದಿಗೆ ಈ-ವೀಸಾ ಸೇವೆಯನ್ನು ಆರಂಭಿಸಿದ್ದು, ಇದರಿಂದ ಭಾರತಕ್ಕೆ ಆಗಮಿಸುವ ವಿದೇಶಿಗರಿಗೆ ಅನುಕೂಲಕರವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಹೇಳಿದ್ದಾರೆ.
ಬೆಂಗಳೂರಿನ ವಿಕಾಸ ಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುರಕ್ಷಿತ ಮತ್ತು ಕಾನೂನಾತ್ಮಕ ವಲಸೆ, ಪಾಸ್ಪೋರ್ಟ್ ಸೇವೆಗಳು, ಭಾರತೀಯ ಸಂಜಾತರ ಒಳಗೊಳ್ಳುವಿಕೆ ಮತ್ತು ವಿದೇಶಿ ವ್ಯವಹಾರಗಳಿಗೆ ಸಂಬಂಧಿಸಿದಂತೆ ಒಂದು ದಿನದ "ವಿದೇಶಿ ಸಂಪರ್ಕ" ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡುವ ವೇಳೆ ಅವರು ಪಾಸ್ಪೋರ್ಟ್ ಬಳಕೆದಾರರಿಗೆ ಈ ಸಿಹಿ ಸುದ್ದಿ ನೀಡಿದ್ದಾರೆ.
ಜಗತ್ತಿನ ಶಕ್ತಿಶಾಲಿ ಪಾಸ್ಪೋರ್ಟ್ ಹೊಂದಿರುವ ದೇಶ ಯಾವುದು ಗೊತ್ತೇ?
ಕೇಂದ್ರ ಸರ್ಕಾರ ಈಗಾಗಲೇ ಅನೇಕ ಕಾರ್ಯಕ್ರಮ ಜಾರಿಗೆ ತಂದಿದ್ದು, ಅವುಗಳನ್ನು ಸರಳೀಕರಿಸಿ, ಮತ್ತಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ಜಾರಿಗೆ ತರುವ ಉದ್ದೇಶದಿಂದ ಇಂತಹ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕರ್ನಾಟಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಅತ್ಯುತ್ತಮ ಪ್ರತಿಭೆಗಳನ್ನು ನೀಡಿದ ಕೀರ್ತಿ ಪಡೆದ ರಾಜ್ಯವಾಗಿದೆ ಎಂದು ತಿಳಿಸಿದರು.
ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕುವ ಭಾರತೀಯರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ 24*7 ಸಮಯ ಕಾರ್ಯನಿರ್ವಹಿಸುವ ಕಾಲ್ಸೆಂಟರ್ ತೆರೆಯಲಾಗಿದ್ದು, ವಿದೇಶಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ನೆಲೆಸಿರುವ ಭಾರತೀಯರು ಅಲ್ಲಿನ ರಾಯಬಾರಿ ಕಚೇರಿಗಳಲ್ಲಿ ನೋಂದಾಯಿಸುವ ಜವಬ್ದಾರಿಯನ್ನು ಮರೆಯಬಾರದು. ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ ಪಾಸ್ಪೋರ್ಟ್ ಪಡೆಯುವ ಸೇವಾ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದ್ದು, ಕೇಂದ್ರ ಸರ್ಕಾರ ರಾಜ್ಯಗಳೊಂದಿಗೆ ಕೈ ಜೋಡಿಸುವ ಮೂಲಕ ವಿದೇಶ ಯಾತ್ರೆ ಅಥವಾ ವಿದೇಶಿಗರ ಆಗಮನದ ಬಗ್ಗೆ ಹೆಚ್ಚಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಚಿತ್ರದುರ್ಗಕ್ಕೆ ಸಿಕ್ಕಿತು ಪಾಸ್ಪೋರ್ಟ್ ಸೇವಾಕೇಂದ್ರ
ರಾಜ್ಯ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಮಾತನಾಡಿ ವಿದೇಶಿ ಪ್ರಯಾಣಗಳಿಗೆ ಸಂಬಂದಿಸಿದಂತೆ ಸರಳೀಕೃತ ವ್ಯವಸ್ಥೆಯನ್ನು ಜಾರಿಗೆ ತರಬೇಕಾದ ಅವಶ್ಯಕತೆ ಇದೆ. ಅತ್ಯಂತ ಹೆಚ್ಚು ಅನಿವಾಸಿ ಭಾರತೀಯರು ಇರುವ ರಾಜ್ಯ ನಮ್ಮದಾಗಿದ್ದು, ಒಟ್ಟಾರೆಯಾಗಿ ಈಗಿರುವ ವ್ಯವಸ್ಥೆಯನ್ನು ಸರಳೀಕೃತಗೊಳಿಸಬೇಕು ಎಂದು ಕಾರ್ಯಾಗಾರದಲ್ಲಿ ಸೂಚಿಸಿದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಅವರು ಮಾತನಾಡಿ ದೇಶದಲ್ಲಿಯೇ ಮೊತ್ತ ಮೊದಲ ಬಾರಿಗೆ ಪಾಸ್ಪೋರ್ಟ್ ಪಡೆಯುವಾಗ ಇದ್ದ ಪೊಲೀಸ್ ಪರಿಶೀಲನೆಯನ್ನು ಆನ್ಲೈನ್ಗೊಳಿಸಿ ಪ್ರತಿ ಪೊಲೀಸ್ ಸ್ಟೇಷನ್ನಿಗೆ ಟ್ಯಾಬ್ ನೀಡಲಾಗಿದೆ ಎಂದು ತಿಳಿಸಿದರು.
ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಭಟ್ಟಚಾರ್ಯ ಅವರು ಮಾತನಾಡಿ ಕಾರ್ಯಾಗಾರದ ಉದ್ದೇಶಗಳನ್ನು ಸಭೆಗೆ ವಿವರಿಸದರು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಹೇಮಲತ, ಜಂಟಿ ಕಾರ್ಯದರ್ಶಿ ಡಾ. ವಿಜಯ ಮಹಾಂತೇಶ ಇದ್ದರು.