ಆಲಮಟ್ಟಿಯಿಂದ ಕಾರವಾರಕ್ಕೆ ದೋಣಿ ಪ್ರಯಾಣ
ಬೆಂಗಳೂರು, ನ. 26: ಕೇರಳ ರಾಜ್ಯದ ಪ್ರವಾಸೋದ್ಯಮದಲ್ಲಿ ದೋಣಿ ವಿಹಾರ ಅತ್ಯಂತ ಜನಪ್ರಿಯತೆ ಗಳಿಸಿದೆ. ಪ್ರವಾಸ ಹಾಗೂ ಮಧುಚಂದ್ರಕ್ಕಾಗಿ ಇಲ್ಲಿಗೆ ಬರುವವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ಪ್ರವಾಸೋದ್ಯಮ ಇಲಾಖೆಗೆ ಸಾಕಷ್ಟು ಲಾಭ ಬರುತ್ತಿದೆ.
ಇದರಿಂದ ಪ್ರೇರೇಪಣೆಗೊಂಡಿರುವ ಕರ್ನಾಟಕ ಸರ್ಕಾರದ ಕೂಡ ಆಲಮಟ್ಟಿ ಜಲಾಶಯದಿಂದ ಹೊನ್ನಾವರದ ಮೂಲಕ ಕಾರವಾರದವರೆಗೆ ದೋಣಿ ವಿಹಾರ ನಡೆಸಲು ಮುಂದಾಗಿದೆ. ಅಲ್ಲದೆ, ಕೃಷ್ಣರಾಜಸಾಗರ (ಕೆಆರ್ಎಸ್) ಹಿನ್ನೀರಿನಲ್ಲಿ ದೋಣಿ ಹೋಟೆಲ್ ಆರಂಭಿಸಲು ಜಲ ಸಂಪನ್ಮೂಲ ಇಲಾಖೆ ಯೋಜನೆ ರೂಪಿಸಿದೆ. [ಬೇಸಿಗೆ ರಜೆ ಕಳೆಯಲು ಕೊಡಗಿನ ನಿಸರ್ಗಧಾಮ]
ಈ ಕುರಿತು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ನಾರಾಯಣಪುರ ಜಲಾಶಯದಿಂದ ಬಸವ ಕಲ್ಯಾಣದ ಮೂಲಕ ಆಲಮಟ್ಟಿವರೆಗೆ ದೋಣಿ ವಿಹಾರ ಆರಂಭಿಸುವ ಯೋಜನೆಯೂ ಇದೆ. ಆದ್ದರಿಂದ ಆಲಮಟ್ಟಿ ಪ್ರದೇಶವನ್ನು ಪ್ರವಾಸಿ ತಾಣವಾಗಿ ಪರಿವರ್ತಿಸಲು 94.71 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. [ಗಾಳಿ ಬೋರಿಗೆ ಹೋಗಿ ಮೀನು ಹಿಡಿದು ಜಾಲಿ ಮಾಡಿರಿ]
ಈ ಕುರಿತು ಕರ್ನಾಟಕದ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ ಎಂದು ಎಂ.ಬಿ. ಪಾಟೀಲ ವಿವರಣೆ ನೀಡಿದ್ದಾರೆ.