ಗೇರ್ ರಸ್ತೆಯ ಧೂಳು ನಿಯಂತ್ರಣಕ್ಕೆ ಸ್ಥಳೀಯರ ವಿನೂತನ ಪ್ರಯತ್ನ
ಬೆಂಗಳೂರು, ಫೆಬ್ರವರಿ 12: ನಗರದ ಬಹುತೇಕ ರಸ್ತೆಗಳಲ್ಲಿ ಧೂಳಿನ ಸಮಸ್ಯೆ ಹೇಳತೀರದಂತಾಗಿದೆ.
ರಸ್ತೆ ಕಾಮಗಾರಿಗಳ ವಿಳಂಬದಿಂದ ಪ್ರಯಾಣಿಕರು ಹಾಗೂ ಸ್ಥಳೀಯ ನಿವಾಸಿಗಳು ಧೂಳಿನಿಂದ ಕಂಗೆಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಗೇರ್ ರಸ್ತೆಯ ನಿವಾಸಿಗಳು ಒಂದು ವಿನೂತನ ಪ್ರಯೋಗವೊಂದನ್ನು ಮಾಡಿದ್ದಾರೆ.
ಶುದ್ಧೀಕರಿಸಿದ ನೀರನ್ನು ದಿನಕ್ಕೆ ಮೂರು ಬಾರಿ ರಸ್ತೆಗಳಿಗೆ ಸಿಂಪಡಿಸಿ ಧೂಳನ್ನು ಕಡಿಮೆ ಮಾಡುವ ಮೂಲಕ ಅಲ್ಲಿ ಸಂಚರಿಸುವ ವಿದ್ಯಾರ್ಥಿಗಳು ಹಾಗೂ ಉಳಿದ ಸಾರ್ವಜನಿಕರಿಗೆ ಅನಾರೋಗ್ಯದ ಸಮಸ್ಯೆಗಳಿಂದ ಕಾಪಾಡಲು ಸ್ಥಳೀಯರು ಮುಂದಾಗಿದ್ದಾರೆ.
ಪ್ರತಿನಿತ್ಯ ಮೂರು ಬಾರಿ ನೀರನ್ನು ಸಿಂಪಡನೆ ಮಾಡಲು ಪ್ರತಿ ವಾರಕ್ಕೆ 7,500 ರೂ. ಖರ್ಚಾಗುತ್ತಿದೆ. ಕನಿಷ್ಠ ಏಪ್ರಿಲ್ 15ರವರೆಗಾದರೂ ಈ ಕಾರ್ಯವನ್ನು ಮುಂದುವರೆಸಬೇಕಿದೆ. ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಕೇರ್ ಇನೋವೇಟಿವ್ ಶಾಲೆಯ ಪ್ರಾಂಶುಪಾಲರು ಮನವಿ ಮಾಡಿದ್ದಾರೆ.
ನಗರದಲ್ಲಿ ಬಿಬಿಎಂಪಿ ಒಂದೆಡೆ ಜಲಮಂಡಳಿ ಒಂದು ಕಡೆ ರಸ್ತೆಯನ್ನು ಅಗೆಯುತ್ತಲೇ ಇರುತ್ತದೆ. ಕಾಮಗಾರಿ ಮುಗಿದರೂ ಕೂಡ ಹೊಸ ರಸ್ತೆ ನಿರ್ಮಾಣ ಮಾಡಲು ವರ್ಷಗಟ್ಟಲೆ ಕಾಲಾವಕಾಶವನ್ನು ಪಡೆದುಕೊಳ್ಳುತ್ತಾರೆ. ಇದರಿಂದ ಅಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ವಾಸಮಾಡುವವರಿಗೆ ನಿಜವಾಗಲೂ ನರಕದ ದರ್ಶನವಾದಂತಾಗಿದೆ.