ಸಾವಿನ ನಂತರವೂ ಮಾನವೀಯತೆ: ಗೌರಿ ಲಂಕೇಶ್ ನೇತ್ರದಾನ
Recommended Video
ಬೆಂಗಳೂರು, ಸೆಪ್ಟೆಂಬರ್ 6: ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ (55) ಅವರ ಇಚ್ಛೆಯಂತೇ ಅವರ ಕಣ್ಣುಗಳನ್ನು ದಾನ ಮಾಡುವುದಾಗಿ ಅವರ ತಮ್ಮ ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ.
ಅಪರೂಪದ ಪತ್ರಕರ್ತೆ ಗೌರಿ ಲಂಕೇಶ್ ವ್ಯಕ್ತಿ ಪರಿಚಯ
ತಾನು ಸತ್ತ ನಂತರ ತಮ್ಮ ಕಣ್ಣುಗಳು ಇನ್ನೊಬ್ಬರ ಕತ್ತಲೆಯ ಬದುಕಿಗೆ ಬೆಳಕಾಗಬೇಕು ಎಂಬುದು ಅಕ್ಕ ಗೌರಿ ಅವರ ಆಸೆಯಾಗಿತ್ತು. ಅದಕ್ಕೆಂದೇ ಅವರ ಕಣ್ಣುಗಳನ್ನು ಚಾಮರಾಜಪೇಟೆಯಲ್ಲಿರುವ ಮಿಂಟೋ ಕಣ್ಣಿನ ಆಸ್ಪತ್ರೆಗೆ ದಾನ ಮಾಡುತ್ತಿರುವುದಾಗಿ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಸೆಪ್ಟೆಂಬರ್ 5ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಮನೆಯಲ್ಲಿ ಗೌರಿ ಲಂಕೇಶ್ ಅವರ ಹತ್ಯೆಯಾಗಿತ್ತು. ಅಪರಿಚಿತ ದುಷ್ಕರ್ಮಿಗಳು ಹಾರಿಸಿದ ಏಳು ಗುಂಡುಗಳಲ್ಲಿ ಮೂರು ಗುಂಡುಗಳು ಗೌರಿ ಅವರ ಎದೆ ಮತ್ತು ತಲು ಭಾಗಕ್ಕೆ ತಾಕಿ, ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಅಪರಾಧಿಗಳ ಪತ್ತೆಗೆ ಶೀಘ್ರ ಕ್ರಮಕೈಗೊಳ್ಳುವುದಾಗಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದು, ಈಗಾಗಲೇ ತನಿಖೆ ಚುರುಕುಗೊಂದಿದೆ.
ಗೌರಿ, ದಾಬೋಲ್ಕರ್, ಕಲಬುರ್ಗಿ ಹತ್ಯೆ : 7.65 ಎಂಎಂ ಪಿಸ್ತೂಲ್ ಬಳಕೆ?
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಸಂಸ ಬಯಲು ರಂಗಮಂದಿರದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇಂದು ಅಪರಾಹ್ನ 4 ಗಂಟೆಗೆ ಗೌರಿ ಲಂಕೇಶ್ ಅವರ ಅಂತ್ಯ ಸಂಸ್ಕಾರ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ನಡೆಯಲಿದೆ.