ಹಂತಕರು 15 ದಿನದಿಂದ ಗೌರಿ ಲಂಕೇಶ್ ಹಿಂಬಾಲಿಸುತ್ತಿದ್ದರು
Recommended Video
ಬೆಂಗಳೂರು, ಸೆಪ್ಟೆಂಬರ್ 07 : ಗೌರಿ ಲಂಕೇಶ್ ಹತ್ಯೆ ಒಂದು ಪೂರ್ವನಿಯೋಜಿತ ಕೃತ್ಯ ಎಂಬುದು ಬಯಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಹಂತಕರು 15 ದಿನಗಳಿಂದ ಗೌರಿ ಲಂಕೇಶ್ ಅವರನ್ನು ಹಿಂಬಾಲಿಸುತ್ತಿದ್ದರು.
ಮೂರು ಗುಂಡುಗಳು ಗೌರಿ ಲಂಕೇಶ್ ದೇಹ ಹೊಕ್ಕಿವೆ
ಗೌರಿ ಲಂಕೇಶ್ ಹತ್ಯೆಯ ತನಿಖೆ ನಡೆಸುತ್ತಿರುವ ತಂಡದ ಅಧಿಕಾರಿಗಳು ಒನ್ ಇಂಡಿಯಾಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂಬುದು ಗೌರಿ ಲಂಕೇಶ್ ಅವರಿಗೂ ತಿಳಿದಿತ್ತು. ಆದ್ದರಿಂದ, ಅವರು ಮನೆಗೆ ಸಿಸಿಟಿವಿ ಅಳವಡಿಸಿದ್ದರು.
ಮಂಗಳವಾರ ರಾತ್ರಿ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಗೌರಿ ಲಂಕೇಶ್ ಹತ್ಯೆ ನಡೆದಿದೆ. ತಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂದು ಅವರು ತಾಯಿಯ ಬಳಿ ಹೇಳಿಕೊಂಡಿದ್ದರು. ಗಾಂಧಿ ಬಜಾರಿನ ಕಚೇರಿಯಿಂದ ಆರ್.ಆರ್.ನಗರದ ನಿವಾಸದ ತನಕ ದುಷ್ಕರ್ಮಿಗಳು ಅವರನ್ನು ಹಿಂಬಾಲಿಸಿದ್ದಾರೆ ಎಂಬುದು ಸದ್ಯದ ಮಾಹಿತಿ.
ಗೌರಿ ಹತ್ಯೆ ಪ್ರಕರಣ ಸಿಬಿಐಗೆ ನೀಡಿ, ರಾಜ್ಯ ಸರಕಾರದ ಮೇಲೆ ನಂಬಿಕೆ ಇಲ್ಲ : ಇಂದ್ರಜಿತ್
ಗೌರಿ ಲಂಕೇಶ್ ಅವರ ನಿವಾಸ, ಅಕ್ಕ-ಪಕ್ಕದ ರಸ್ತೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಎಸ್ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ತಮ್ಮನ್ನು ಅಪರಿಚಿತರು ಹಿಂಬಾಲಿಸುತ್ತಿರುವುದನ್ನು ತಿಳಿದಿದ್ದ ಗೌರಿ ಲಂಕೇಶ್ ಅವರು, ಪೊಲೀಸರಿಗೆ ಮಾತ್ರ ಈ ಕುರಿತು ಮಾಹಿತಿ ನೀಡಿರಲಿಲ್ಲ.
ಗೌರಿ ಲಂಕೇಶ್ ಅವರು ಸೋಮವಾರ ಗೃಹ ಸಚಿವರನ್ನು ಭೇಟಿಯಾಗುವ ಕಾರ್ಯಕ್ರಮವಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಗೃಹ ಸಚಿವರನ್ನು ಭೇಟಿ ಮಾಡಿದ್ದರೆ ಈ ಬಗ್ಗೆ ಮಾಹಿತಿ ನೀಡುತ್ತಿದ್ದರೆನೋ? ಎಂದು ಪೊಲೀಸರು ಹೇಳಿದ್ದಾರೆ.
ಹತ್ಯೆ ಮಾಡಲು ಮೊದಲೇ ಸಂಚು ರೂಪಿಸಿದ್ದ ತಂಡ ಸುಮಾರು ಒಂದು ತಿಂಗಳಿನಿಂದ ಅವರ ಚಲನ-ವಲನದ ಬಗ್ಗೆ ಮಾಹಿತಿ ಸಂಗ್ರಹಿಸಿರಬಹುದು. ಇಬ್ಬರು ವ್ಯಕ್ತಿಗಳು ಅವನ್ನು ಹಿಂಬಾಲಿಸಿರಬಹುದು ಎಂದು ತನಿಖೆಯ ವೇಳೆ ತಿಳಿದುಬಂದಿದೆ.