ಗೌರಿ ಹತ್ಯೆಯ ಸಂಚು ನಡೆದಿದ್ದು ಹೇಗೆ? 'ಈವೆಂಟ್'ನ ರೋಚಕ ಸತ್ಯ ಬಯಲು
ಬೆಂಗಳೂರು, ಜೂನ್ 28: ಪತ್ರಕರ್ತೆ, ಲೇಖಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಕೋಡ್ ನೇಮ್ 'ಈವೆಂಟ್' ಎಂದಾಗಿತ್ತು ಎಂದು ಹತ್ಯೆ ಪ್ರಕರಣದ ಆರೋಪಿ ಶರದ್ ಕಾಲಸ್ಕರ್ ಸತ್ಯ ಹೊರಹಾಕಿದ್ದಾನೆ.
ಕರ್ನಾಟಕ ಪೊಲೀಸ್ ವಶದಲ್ಲಿರುವ ಕಾಲಸ್ಕರ್ ವಿಚಾರವಾದಿ ನರೇಂದ್ರ ದಾಬೋಲ್ಕರ್ ಅವರನ್ನು ಹೇಗೆ ಹತ್ಯೆ ಮಾಡಿದೆವು ಎಂಬುದನ್ನೂ ಬಾಯ್ಬಿಟ್ಟಿದ್ದು, ಗೌರಿ ಲಂಕೇಶ್ ಅವರ ಹತ್ಯೆಯ ಪಿತೂರಿಯ ಬಗ್ಗೆಯೂ ವಿವರ ನೀಡಿದ್ದಾನೆ.
ಗೌರಿ ಲಂಕೇಶ್ ಹತ್ಯೆಯ ಹಿಂದೆ ಪ್ರಗ್ಯಾ ಕೈವಾಡವಿಲ್ಲ : ಎಸ್ಐಟಿ ಸ್ಪಷ್ಟನೆ
ಗೌರಿ ಲಂಕೇಶ್ ಹತ್ಯೆಯ ಸಂಚು ರೂಪಿಸುವ ಮತ್ತು ಆರೋಪಿ ಪರಶುರಾಮ್ ವಾಗ್ಮರೆ ಯು ಗೌರಿ ಹತ್ಯೆಗೆ ಬಳಸಿದ ಆಯುಧವನ್ನು ಮರೆಮಾಚುವ ಕೆಲಸವನ್ನು ತಾನು ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.
2017 ರ ಸೆಪ್ಟೆಂಬರ್ 05 ರ ರಾತ್ರಿ ಗೌರಿ ಲಂಕೇಶ್ ಅವರನ್ನು ಅವರ ನಿವಾಸದಲ್ಲೇ ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಕೃತ್ಯದ ವಿರುದ್ಧ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿತ್ತು. ನಂತರ ಈ ಪ್ರಕರಣದ ವಿಚಾರಣೆಗೆ ವಿಶೇಷ ತನಿಖಾ ತಂಡ(SIT)ವನ್ನು ನೇಮಿಸಲಾಗಿತ್ತು.
ದಾಬೋಲ್ಕರ್ ಹತ್ಯೆ : ತಪ್ಪೊಪ್ಪಿಕೊಂಡ ಆರೋಪಿ ಹೇಳಿದ್ದೇನು?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ವೇಳೆ ಆರೋಪಿ ಶರದ್ ಕಾಲಸ್ಕರ್ ಬಾಯ್ಬಿಟ್ಟ ಕೆಲವು ಮಹತ್ವದ ಸಂಗತಿಗಳು ಇಲ್ಲಿವೆ...
'ಈವೆಂಟ್' ಎಂಬ ಕೋಡ್ ನೇಮ್
ಗೌರಿ ಹತ್ಯೆಗೆ ಸಂಬಂಧಿಸಿದ ಸಂಪೂರ್ಣ ಕಾರ್ಯಾಚರಣೆಯ ಹೆಸರನ್ನು 'ಈವೆಂಟ್' ಎಂಬ ಕೋಡ್ ನೇಮ್ ನಲ್ಲಿ ಕೊರೆಯಲಾಗುತ್ತಿತ್ತು ಎಂದು ಕಾಲಸ್ಕರ್ ಹೇಳಿದ್ದಾನೆ. ಅಂದರೆ ಈ ಕುರಿತು ಫೋನಿನಲ್ಲಿ ಮಾತನಾಡುವಾಗ ಮತ್ತು ಇನ್ಯಾವುದೇ ಸಂದರ್ಭದಲ್ಲಿ ಆರೋಪಿಗಳು ಈವೆಂಟ್ ಎಂಬ ಪದವನ್ನು ಬಳಸುತ್ತಿದ್ದರು. ಇದರಿಂದಾಗಿ ಹತ್ಯೆಗೂ ಮೊದಲೇ ಈ ಬಗ್ಗೆ ಸುಳಿವು ಪತ್ತೆಯಾಗುವುದಕ್ಕೆ ಸಾಧ್ಯವಾಗಲಿಲ್ಲ.
2016 ರ ಆಗಸ್ಟ್ ನಲ್ಲಿಯೇ ಪಟ್ಟಿ ಸಿದ್ಧ!
2016 ರ ಆಗಸ್ಟ್ ಬೆಳಗಾವಿಯಲ್ಲಿ ನಡೆದ ಸಭೆಯೊಂದರಲ್ಲಿ ಹಿಂದು ವಿರೋಧಿ ವಿಚಾರವಾದಿಗಳ ಪಟ್ಟಿಯೊಂದನ್ನು ತಯಾರಿಸಲಾಗಿತ್ತು. ಆ ಸಭೆಯಲ್ಲಿಯೇ ಗೌರಿ ಲಂಕೇಶ್ ಅವರ ಹೆಸರನ್ನೂ ಉಲ್ಲೇಖಿಸಲಾಗಿತ್ತು. ಆಕೆಯೂ 'ಹಿಟ್ ಲಿಸ್ಟ್' ನಲ್ಲಿ ಅಂದೇ ಜಾಗ ಪಡೆದಿದ್ದರು ಎಂದು ಕಾಲಸ್ಕರ್ ಹೇಳಿದ್ದಾನೆ.
ಪಿತೂರಿ ನಡೆದ ಬಗೆ...
ಹತ್ಯೆಯ ಕುರಿತು ಇನ್ನೋರ್ವ ಆರೋಪಿ ಭರತ್ ಕುರ್ನೆ ಮನೆಯಲ್ಲಿ ಪಿತೂರಿ ನಡೆದಿತ್ತು. ಮೊದಲ ದಿನ ಪ್ರಮುಖ ಆರೋಪಿಗಳಲ್ಲೊಬ್ಬನಾದ ಅಮೋಲ್ ಕಾಳೆ ಅಲ್ಲಿಗೆ ಆಗಮಿಸಿದ್ದ ಎಲ್ಲ ಆರೋಪಿಗಳಿಗೂ ಒಂದೊಂದು ಜವಾಬ್ದಾರಿನೀಡಿದ್ದ. ಆಗಲೇ ಅದಕ್ಕೆ 'ಈವೆಂಟ್' ಎಂದು ನಾಮಕರಣವಾಗಿತ್ತು. ಇದಾಗಿ ಕೆಲ ದಿನಗಳ ನಂತರ ಶರದ್ ಕಲಾಸ್ಕರ್, ಪರಶುರಾಮ ವಾಗ್ಮರೆ, ಮಿಥುನ್ ಮೂವರೂ ಭರತ್ ಕುರ್ನೆ ಮನೆಯ ಬಳಿ ತೆರಳಿ ಅಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ಶೂಟಿಂಗ್ ಪ್ರಾಕ್ಟಿಸ್ ಮಾಡಿದರು. ಪ್ರತಿಯೊಬ್ಬರೂ 15-20 ಸುತ್ತು ಗುಂಡು ಹಾರಿಸಿದ್ದರು.
ಇನ್ನು ಈವೆಂಟ್ ದಿನವೇ ಭೇಟಿ!
ಶೂಟಿಂಗ್ ಪ್ರಾಕ್ಟಿಸ್ ನಂತರ ಅಮೋಲ್ ಕಾಳೆ ಎಲ್ಲರನ್ನೂ ವಾಪಸ್ ತಮ್ಮ ತಮ್ಮ ಹಳ್ಳಿಗೆ ತೆರಳುವಂತೆ ಹೇಳಿದ್ದ. ಇನ್ನು 'ಈವೆಂಟ್' ದಿನವೇ ಭೇಟಿ, ಅಲ್ಲಿಯವರೆಗೂ ಯಾರೂ ಭೇಟಿ ಮಾಡಬೇಡಿ ಎಂದಿದ್ದ. ಅಮೋಲ್ ಕಾಳೆಯನ್ನು ಈ ಪೂರ್ತಿ ಸಂಚಿನ ರೂವಾರಿ ಎಂದು ಬಂಧಿಸಲಾಗಿದೆ.
ಕೊಲೆಗೆ ಬಳಸಿದ್ದ ಆಯುಧ ನಾಶ
ಕೊಲೆಗೆ ಬಳಸಿದ್ದ ಆಯುಧವನ್ನು ಮೂರು ತುಂಡುಗಳಾಗಿ ಮಾಡಿ ಅದನ್ನು ಮುಂಬೈ-ನಾಸಿಕ್ ಹೆದ್ದಾರಿಯ ಬೇರೆ ಬೇರೆ ಪ್ರದೇಶಗಳಲ್ಲಿ ಎಸೆದಿದ್ದವನ್ನು ಕಲಾಸ್ಕರ್. ಈ ಆಯುಧಗಳ ಪತ್ತೆಗೆ ವಿದೇಶಿ ತಜ್ಞರನ್ನು ಸಿಬಿಐ ಕರೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಯಲಾಯ್ತು ಮತ್ತೆರಡು ಹತ್ಯೆಯ ಸತ್ಯ
ಶರದ್ ಕಲಾಸ್ಕರ್ ನನ್ನು ಕಳೆದ ಅಕ್ಟೋಬರ್ ನಲ್ಲಿ ಮಹಾರಾಷ್ಟ್ರ ನಲ್ಲಾಸೊಪರ ಎಂಬಲ್ಲಿ ಬಂಧಿಸಲಾಗಿತ್ತು. ಗೌರಿ ಹತ್ಯೆಯ ವಿಚಾರಣೆಗೆಂದು ಬಂಧಿಸಿದ್ದಾಗ ತನಿಖೆಯ ವೇಳೆ ಕಲಾಸ್ಕರ್, ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ್ ಪನ್ಸಾರೆ ಹತ್ಯೆಯ ಸುಳಿವನ್ನೂ ನೀಡಿದ್ದರು. ಇದರಿಂದಾಗಿ ಒಟ್ಟು ಮೂರು ಹತ್ಯೆಯ ಸ್ಫೋಟಕ ಸತ್ಯ ಹೊರಬಿದ್ದಿತ್ತು.