ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಜಾಮೀನು ಅರ್ಜಿ ವಜಾ
ಬೆಂಗಳೂರು, ಫೆಬ್ರವರಿ 07: ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಜಾಮೀನು ಅರ್ಜಿಯನ್ನು ಸಿಟಿ ಸಿವಿಲ್ ನ್ಯಾಯಾಲಯವು ತಿರಸ್ಕರಿಸಿದೆ.
ಗೌರಿ ಹತ್ಯೆಯ ತನಿಖೆ ಮಾಡುತ್ತಿರುವ ಎಸ್ಐಟಿ ತಂಡವು ಚಾರ್ಜ್ ಶೀಟ್ ಅನ್ನು ತಡವಾಗಿ ಸಲ್ಲಿಸಿದೆ ಎಂಬ ಕಾರಣವನ್ನು ಮುಂದಿಟ್ಟು 16 ಮಂದಿ ಆರೋಪಿಗಳು ಜಾಮೀನಿಗೆ ಅರ್ಜಿ ಹಾಕಿದ್ದರು.
ಗೌರಿ ಹತ್ಯೆ ಆರೋಪಿಗಳು ಯಾರ್ಯಾರು? ಕೊಲೆಯಲ್ಲಿ ಅವರ ಪಾತ್ರ ಏನು?
ಆದರೆ ಎಸ್ಐಟಿಯು ತಾವು ಸರಿಯಾದ ಸಮಯಕ್ಕೆ ನಿಯಮಕ್ಕೆ ಅನುಸಾರವಾಗಿಯೇ ಜಾರ್ಜ್ ಶೀಟ್ ಸಲ್ಲಿಸಿದ್ದೇವೆ ಎಂದು ನ್ಯಾಯಾಲಕ್ಕೆ ತಿಳಿಸಿರುವ ಕಾರಣ ಅಷ್ಟೂ ಜನರ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ.
2017 ರ ಸೆಪ್ಟೆಂಬರ್ 05 ರಂದು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಅವರ ಮನೆಯ ಮುಂದೆಯೇ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಯು 16 ಜನರನ್ನು ಆರೋಪಿಗಳನ್ನಾಗಿಸಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಅಮೋಲ್ ಕಾಳೆ, ಪರಶುರಾಮ್ ವಾಘ್ಮೋರೆ, ಮನೋಹರ ಯಡವೆ, ಗಣೇಶ್ ವಿಸ್ಕಿನ್, ಅಮಿತ್ ಬುದ್ಧಿ, ಅಮಿತ್ ದಿಗ್ವೇಕರ್, ಭರತ್ ಕುರ್ಣೆ, ಸುರೇಶ್ ಎಚ್.ಎಲ್, ರಾಜೇಶ್ ಡಿ.ಬಂಗೇರಾ, ಸುಧನ್ವ ಗೋಂಧ್ವಾಳ್ಕರ್, ಮೋಹನ್ ನಾಯಕ್, ಶರದ್ ಬಾಹುಸಾಹೇಬ್, ಭಗವಾನ್ ಸೂರ್ಯವಂಶಿ, ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್, ಶ್ರೀಕಾಂತ್ ಪಂಗಾರ್ಕರ್, ವಿಕಾಸ್ ಪಾಟೀಲ್ ಅಲಿಯಾಸ್ ನಿಹಾಲ್ ಅವರುಗಳು ಗೌರಿ ಲಂಕೇಶ್ ಪ್ರಕರಣದ ಆರೋಪಿಗಳಾಗಿದ್ದಾರೆ. ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ಹೊಟ್ಟೆಮಂಜ ಭಗವಾನ್ ಹತ್ಯೆ ಸಂಚು ಪ್ರಕರಣದ ಆರೋಪಿಯಾಗಿದ್ದಾನೆ.