ಹೊಸೂರು ರಸ್ತೆಯಲ್ಲಿ ಭಜರಂಗಿ ದೇಗುಲ ನೆಲಸಮ, ಯಾರು ಹೊಣೆ?
Recommended Video
ಬೆಂಗಳೂರು, ಜನವರಿ 27: ಸುಮಾರು 180 ವರ್ಷದ ಇತಿಹಾಸ ಪ್ರಸಿದ್ಧ ಆಂಜನೇಯ ಸ್ವಾಮಿ ದೇಗುಲ ಒಡೆಯಲು ಸಂಚು.. ಭಜರಂಗಿಗೇ ರಕ್ಷಣೆ ಇಲ್ವಾ ? ಎಲ್ಲರೂ ಹಿಂದುತ್ವ ಹಿಂದೂ ಹಿಂದೂ ಅಂತ ಹೇಳ್ಕೊಳ್ತಿರಾ ಅಲ್ವಾ, ಹಿಂದು ದೇಗುಲ ರಕ್ಷಣೆಗೆ ಯಾರು ಬರಲಿಲ್ಲವೇಕೆ? ಎಂದು ದೇಗುಲ ಒಡೆಯುವ ಸುದ್ದಿ ಕೇಳಿ ಗರ್ಭಗುಡಿಯಲ್ಲೇ ಕಣ್ಣೀರಿಟ್ಟ ಅರ್ಚಕರು ನೊಂದು ನುಡಿದ ವಿಡಿಯೋ ಫೇಸ್ಬುಕ್ ನಲ್ಲಿದೆ.
ಬಿಎಂಆರ್ ಸಿಎಲ್ ನಮ್ಮ ಮೆಟ್ರೋ ಕಾಮಗಾರಿಗಾಗಿ ಆಂಜನೇಯ ದೇಗುಲ ಇಂದು ನೆಲಸಮವಾಗಿದೆ. ಆರ್ . ವಿ ರಸ್ತೆಯಿಂದ ಬೊಮ್ಮಸಂದ್ರದ ಮೆಟ್ರೋ ಕಾಮಗಾರಿಗಾಗಿ ಗಾರ್ವೆಭಾವಿಪಾಳ್ಯಯದ ಹನುಮಾನ್ ದೇಗುಲವನ್ನು ಒಡೆಯುವ ಕಾರ್ಯ ತಡೆಯಲು ವರ್ಷದಿಂದ ಪ್ರಧಾನ ಆರ್ಚಕರಾದ ಚೆನ್ನಕೇಶವ ಸ್ವಾಮಿ ಹಾಗೂ ಭಕ್ತ ವೃಂದ ಸತತ ಹೋರಾಟ ಮಾಡಿ ಸೋತಿದೆ.
ಬೆಂಗಳೂರಲ್ಲಿರುವ 150 ವರ್ಷದ ಆಂಜನೇಯ ದೇವಾಲಯ ನೆಲಸಮ
ಗಾರ್ವೆಭಾವೀಪಾಳ್ಯದ ಗ್ರಾಮಸ್ಥರು ಹಾಗೂ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕರು ಸತೀಶ್ ರೆಡ್ಡಿ ಮತ್ತು ಗ್ರಾಮದ ಹಿರಿಯ ಮುಖಂಡರು ಎಲ್ಲರು ಸೇರಿ ರಾಮನಗರ ಡಿ ಸಿ ಕಛೇರಿಗೆ ತೆರಳಿ ದೇವಸ್ಥಾನವು ತೆರವು ಮಾಡದೆ ಸರ್ವೀಸ್ ರಸ್ತೆ ಮಾರ್ಗ ಬದಲಾವಣೆ ಮಾಡಬೇಕಾಗಿ ಮನವಿ ಮಾಡಿಕೊಂಡು ತಿಂಗಳುಗಳು ಕಳೆದಿತ್ತು. ಸರ್ವೀಸ್ ರಸ್ತೆ ಬದಲಿ ಮಾರ್ಗ ರೂಟ್ ಮ್ಯಾಪ್ ಕೂಡಾ ಕೈ ಸೇರಿತ್ತು. ಆದರೆ, ರಾತ್ರೋರಾತ್ರಿ ಯಾರು ತೆಗೆದುಕೊಂಡ ನಿರ್ಧಾರವೋ ಇಂದು ದೇಗುಲ ಧ್ವಂಸಕ್ಕೆ ಕಣ್ಣೀರಿಡುತ್ತಾ ಭಕ್ತರು ಸಾಕ್ಷಿಯಾಗಿ ರಸ್ತೆ ಬದಿ ನಿಲ್ಲುವಂತಾಗಿದೆ.
ದೇಗುಲದ ಅರ್ಚಕರ ಕಣ್ಣೀರು
180 ವರ್ಷ ಇತಿಹಾಸ ಇರೋ ದೇವಸ್ಥಾನ, ನಮ್ಮ ಮೆಟ್ರೋದವರು ಒಡೆದು ಹಾಕುತ್ತಿದ್ದಾರೆ. ನ್ಯಾಷನಲ್ ಹೈವೆ(NHAI) ದವ್ರು ಒಪ್ಪುತ್ತಾ ಇಲ್ಲಾ ಅಂದ್ರು, ಎಂಎಲ್ ಎ ಸತೀಶ್ ರೆಡ್ಡಿ ಅವರನ್ನು ಕರೆಸಿಕೊಂಡು ರಾಮನಗರಕ್ಕೆ ಹೋಗಿ ಶ್ರೀಧರ್ ಅನ್ನೋರನ್ನು ಭೇಟಿ ಮಾಡಿದೆವು. ಆಯ್ತು ಮಾಡಿಕೊಡೋಣ ಹೋಗಿ, ಈಗ ಇರೋ ಜಾಗದ ಹಿಂದೆ ಕಟ್ಟಿ ಕೊಳ್ಳಿ ಎಂದರು. ಈ ಬಗ್ಗೆ ಹಲವು ಬಾರಿ ಮಾತುಕತೆ ಆಗಿ ಟ್ರಸ್ಟ್ ನವರು ಇದಕ್ಕೆ ಒಪ್ಪಿರಲಿಲ್ಲ
ಧರ್ಮ ಉಳಿಸುವ ಕೆಲಸ ಮಾಡುವುದು ಹೇಗೆ?
ನಂತರ ನಮ್ಮ ಮೆಟ್ರೋದವರು ದೇವಸ್ಥಾನ ಉಳಿಸಕ್ಕೆ ಆಗಲ್ಲ ಅಂದ್ರು, ರೂಟ್ ಮ್ಯಾಪ್ ಮಾಡಿಕೊಟ್ರು, 10 ಲಕ್ಷ ರು ಕೊಟ್ಟರು. 1 ಕೋಟಿ 65 ಲಕ್ಷ ರು ಕೊಟ್ಟು, ಟ್ರಸ್ಟ್ ನವರು ಸೇರಿಕೊಂಡು, ದೇವಸ್ಥಾನ ಒಡೆಸುತ್ತಿದ್ದಾರೆ.
ಟ್ರಸ್ಟ್ ನವರು ಸೈನ್ ಹಾಕಿದ್ರು, ದೇವಸ್ಥಾನ ದುಡ್ಡು, ಜಾಗನೂ ಕೊಡ್ತೀವಿ ಒಪ್ಕೊಳ್ಳಿ ಅಂದ್ರು, ಆದರೆ ಯಾವ್ದೇ ಕಾರಣಕ್ಕೂ ಈಗ ಇರುವ ಜಾಗ ಹಿಂದೆ ಸರಿಯೋಕೆ ಆಗಲ್ಲ, ವಾಯುವ್ಯ ಹೋದರೆ ವಾಸ್ತು ಸರಿ ಇರಲ್ಲ ಅಂದೆ, ಅವರ ಆಫರ್ ಗೆ ಒಪ್ಪಲಿಲ್ಲ. ಈಗ ಪರಿಸ್ಥಿತಿ ನಮ್ಮ ಕೈ ಮೀರಿದೆ.
ಎಲ್ಲರೂ ಹಿಂದು ಹಿಂದು ಅಂತ ಹೇಳ್ಕೊಂಡು ಬರೀ ಹೆಸರಿಗೆ ಮಾತ್ರ ನಮ್ಮ ಧರ್ಮನ ಹಾಗಾದ್ರೆ ಇದೆ ರೀತಿ ಆದರೆ ಮುಂದಿನ ದಿನಗಳಲ್ಲಿ ನಮ್ಮ ಹಿಂದು ಧರ್ಮ ನಶಿಸಿಹೋಗುತ್ತದೆ
ಒಂದು ಚರ್ಚ್ ಮೂರು ದೇಗುಲ
ಈ ಮಾರ್ಗದ ಮೆಟ್ರೋ ಕಾಮಗಾರಿಯ ಹೊಸ ಸುರಂಗ ಮಾರ್ಗಕ್ಕೆ ಆಲ್ಸೇಂಟ್ ಚರ್ಚ್ ಅಡ್ಡಿಯಾಗುತ್ತಿದ್ದು, ಚರ್ಚ್ ತೆರವಿಗೆ ಕ್ರೈಸ್ತರಿಂದ ವಿರೋಧ ವ್ಯಕ್ತವಾಗಿದೆ. 18.82 ಕಿ.ಮೀ. ಉದ್ದದ ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವೆ ಮೆಟ್ರೋ ಮಾರ್ಗದಲ್ಲಿ ಒಟ್ಟಾರೆ ಮೂರು ಆಂಜನೇಯ ಸ್ವಾಮಿ ದೇಗುಲಗಳು ತೆರವಿಗಾಗಿ ಸೂಚನೆ ನೀಡಲಾಗಿತ್ತು. ಈ ಪೈಕಿ ಬೊಮ್ಮನಹಳ್ಳಿಯ ಕಂಬದ ಆಂಜನೇಯ ದೇವಸ್ಥಾನ ತೆರವುಗೊಳಿಸುವಲ್ಲಿ ಬಿಎಂಆರ್ಸಿಎಲ್ ಯಶಸ್ವಿಯಾಗಿದೆ. ಗಾರ್ವೆಭಾವಿ ಪಾಳ್ಯದ ದೇಗುಲ ನೆಲಕಚ್ಚವಾಗಿದೆ. ರೂಪೇನ ಅಗ್ರಹಾರದ ದೇಗುಲ ಮಾತುಕತೆ ಹಂತದಲ್ಲಿದೆ.
ಬಿಎಂಆರ್ಸಿಎಲ್ ಎಂಡಿ ಅಜಯ್ ಸೇಠ್
ಸರ್ವಿಸ್ ರಸ್ತೆಗಾಗಿ ಆಂಜನೇಯಸ್ವಾಮಿ ದೇವಸ್ಥಾನ ತೆರವು ಅನಿವಾರ್ಯವಾಗಿದ್ದು, ಈ ಸಂಬಂಧ ಸ್ಥಳೀಯ ಮುಖಂಡರು ಮತ್ತು ಶಾಸಕರೊಂದಿಗೆ ಮಾತುಕತೆ ನಡೆಸಲಾಗಿದೆ. ಮನವೊಲಿಸಿದ ನಂತರವೇ ತೆರವುಗೊಳಿಸಲಾಗುವುದು. ಇದಕ್ಕೆ ಪ್ರತಿಯಾಗಿ ಜಾಗ ಹಾಗೂ ನಿರ್ಮಾಣ ವೆಚ್ಚ ಭರಿಸಲಾಗುವುದು. ಸುಮಾರು 160 ಚದರ ಮೀಟರ್ ಜಾಗವನ್ನು ವಶಪಡಿಸಿಕೊಳ್ಳುತ್ತಿದ್ದು, ಇದಕ್ಕೆ ಬದಲಾಗಿ ಪಕ್ಕದಲ್ಲೇ 175 ಚದರ ಮೀಟರ್ ಜಾಗವನ್ನು ನೀಡಲಾಗುತ್ತಿದೆ. ಜತೆಗೆ ಕಟ್ಟಡ ನಿರ್ಮಾಣಕ್ಕೆ ತಗಲುವ ವೆಚ್ಚವನ್ನೂ ಭರಿಸಿಕೊಡಲಾಗುವುದು ಎಂದು ಬಿಎಂಆರ್ಸಿಎಲ್ ಎಂಡಿ ಅಜಯ್ ಸೇಠ್ ಹೇಳಿದ್ದಾರೆ.