ಪಿಎಫ್ ಗಲಭೆ : ಲಾಭ ಎಲ್ಲರಿಗೆ, ನಷ್ಟ ಮಾತ್ರ ನೌಕರರಿಗೆ!
ಬೆಂಗಳೂರು, ಏಪ್ರಿಲ್ 21 : ಕೇಂದ್ರ ಸರ್ಕಾರದ ಪಿಎಫ್ ನೀತಿಯ ವಿರುದ್ಧ ಗಾರ್ಮೆಂಟ್ಸ್ ನೌಕರರು ಪ್ರತಿಭಟನೆ ನಡೆಸಿದರು. ಸರ್ಕಾರ ನೀತಿಯನ್ನು ವಾಪಸ್ ಪಡೆಯಿತು. ಈಗ ಎಲ್ಲರೂ ಅದರ ಲಾಭ ಪಡೆದುಕೊಳ್ಳಲು ಮುಂದಾಗುತ್ತಿದ್ದು, ಪ್ರತಿಭಟನೆ ವೇಳೆ ನಡೆದ ಗಲಭೆಗೆ ಮಾತ್ರ ನೌಕರರು ಕಾರಣ ಎಂದು ದೂರುತ್ತಿದ್ದಾರೆ.
ಪಿಎಫ್ ನೀತಿಯ ವಿರುದ್ಧ ಮೊದಲು ಪ್ರತಿಭಟನೆ ನಡೆಸಿದ್ದು ಸುಮಾರು 1.25 ಲಕ್ಷ ದಷ್ಟಿರುವ ಗಾರ್ಮೆಂಟ್ಸ್ ನೌಕರರು. ಈಗ ಅವರನ್ನು ಬಿಟ್ಟು ಉಳಿದವರೆಲ್ಲ ಇದು ನಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ತಲೆಕೆಡಿಸಿಕೊಳ್ಳದ ನೌಕರರು ಕೆಲಸಕ್ಕೆ ಹಾಜರಾಗಿದ್ದಾರೆ. [ಪಿಎಫ್ ವಿಚಾರದಲ್ಲಿ ನೌಕರರು ಬೀದಿಗಿಳಿದಿದ್ದು ಇದೇ ಮೊದಲಲ್ಲ]
ಮಂಗಳವಾರ ಬೆಂಗಳೂರು ನಗರದಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಗಲಭೆಗೆ ಕಾರಣವಾಯಿತು. ಇದರ ಹಿಂದೆ ನೌಕರರು ಇಲ್ಲ, ಸಮಾಜಘಾತುಕ ಶಕ್ತಿಗಳ ಕೈವಾಡವಿದೆ ಎಂದು ಗಾರ್ಮೆಂಟ್ಸ್ ನೌಕರರು ಹೇಳುತ್ತಿದ್ದಾರೆ. [ಪಿಎಫ್ ವಿಥ್ ಡ್ರಾ ನಿಯಮಕ್ಕೆ ಜುಲೈ 31ರ ತನಕ ಬ್ರೇಕ್]
ಆದರೆ, ಈಗ ಪಿಎಫ್ ನಿಯಮ ವಾಪಸ್ ಪಡೆದ ಸರ್ಕಾರದ ಕ್ರಮದ ಲಾಭವನ್ನು ಎಲ್ಲರೂ ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಗಲಭೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಉಂಟಾದ ನಷ್ಟಕ್ಕೆ ನೌಕರರು ಕಾರಣ ಎಂದು ಆರೋಪಿಸುತ್ತಿದ್ದಾರೆ. [ಬೆಂಗಳೂರು : ಪ್ರತಿಭಟನೆ ಗಲಭೆ ಆಗಿದ್ದು ಹೇಗೆ?]
ಗಾರ್ಮೆಂಟ್ಸ್ ನೌಕರರ ಸಮಸ್ಯೆ ಬಗೆಹರಿಸಿದ ನಾಯಕರಿಗೆ ಧನ್ಯವಾದ ಸಲ್ಲಿಸುವ ಫೆಕ್ಸ್ಗಳು ಅಲ್ಲಲ್ಲಿ ಕಾಣಸಿಗುತ್ತಿವೆ. ಕೇಂದ್ರ ಸಚಿವ ಅನಂತ್ ಕುಮಾರ್, ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಭಾವಚಿತ್ರವಿರುವ ಫೆಕ್ಸ್ಗಳನ್ನು ಹಾಕಲಾಗಿದೆ.
ಬೆಂಗಳೂರಿನಲ್ಲಿ ಗಲಭೆ ನಡೆದಾಗ ಪತ್ರಿಕಾಗೋಷ್ಠಿ ನಡೆಸಿದ್ದ ಅನಂತ್ ಕುಮಾರ್ ಅವರು, ಪಿಎಫ್ ನಿಯಮವನ್ನು ವಾಪಸ್ ಪಡೆಯಲಾಗುತ್ತದೆ ಎಂದು ಹೇಳಿಕೆ ನೀಡಿದ್ದರು. ಇತರ ಪಕ್ಷದ ಕೆಲವು ನಾಯಕರು ನೌಕರರನ್ನು ಭೇಟಿ ಮಾಡಿ ಪ್ರತಿಭಟನೆಯ ಲಾಭ ಪಡೆಯಲು ಮುಂದಾಗಿದ್ದರು. ಆದರೆ, ನೌಕರರು ಆ ಬಗ್ಗೆ ಗಮನಹರಿಸಲಿಲ್ಲ.
ಗಾರ್ಮೆಂಟ್ಸ್ಗಳು ಸಹಜ ಸ್ಥಿತಿಯತ್ತ : ಸೋಮವಾರ ಮತ್ತು ಮಂಗಳವಾರದ ಪ್ರತಿಭಟನೆ ನಂತರ ಗಾರ್ಮೆಂಟ್ಸ್ಗಳು ಸಹಜ ಸ್ಥಿತಿಗೆ ಮರಳಿವೆ. ಬುಧವಾರ ಹಲವು ಗಾರ್ಮೆಂಟ್ಸ್ಗಳು ಎಂದಿನಂತೆ ಕಾರ್ಯ ನಿರ್ವಹಣೆ ಮಾಡಿವೆ.
ಮಂಗಳವಾರ ನಡೆದ ಗಲಭೆಯ ತನಿಖೆ ನಡೆಸುತ್ತಿರುವ ಪೊಲೀಸರು ಗಾರ್ಮೆಂಟ್ಸ್ ನೌಕರರು ಪ್ರತಿಭಟನೆ ನಿಲ್ಲಿಸಿ ಸ್ಥಳದಿಂದ ತೆರಳಿದ ಬಳಿಕ ಗಲಭೆ ನಡೆದಿದೆ. ನೌಕರರು ಇದರಲ್ಲಿ ಪಾಲ್ಗೊಂಡಿಲ್ಲ ಎಂದು ಹೇಳುತ್ತಿದ್ದಾರೆ. ಬೊಮ್ಮನಹಳ್ಳಿಯಲ್ಲಿ ಗಲಭೆ ಮಾಡಿದ 15 ಜನರನ್ನು ಪೊಲೀಸರು ಗುರುತಿಸಿದ್ದಾರೆ. ತನಿಖೆಯ ಬಳಿಕ ಮಾತ್ರ ಗಲಭೆಗೆ ಯಾರು ಹೊಣೆ ಎಂಬುದು ತಿಳಿದುಬರಲಿದೆ.