ಗಾರ್ಬೇಜ್ ಸಿಟಿ ಬೆಂಗಳೂರು; ನಿಜಕ್ಕೂ ಇದು ಯಾರ ಕೊಡುಗೆ?
ಬೆಂಗಳೂರು, ಫೆಬ್ರುವರಿ 5; ದೇಶದ ನಗರಗಳು ಎಷ್ಟು ಸ್ವಚ್ಛವಾಗಿದ್ದಾವೆ ಎಂಬುದನ್ನು ಅಳತೆ ಮಾಡಲು 2016 ರಿಂದ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ 'ಸ್ವಚ್ಛ ಸವೇಕ್ಷಣೆ' ಎಂಬ ವಾರ್ಷಿಕ ಅಭಿಯಾನವನ್ನು ಹಮ್ಮಿಕೊಂಡಿದೆ.
ಇಂತಹ ಮಹತ್ವಾಕಾಂಕ್ಷೆಯ ಅಭಿಯಾನದಲ್ಲಿ ಗುರುತಿಸಿಕೊಳ್ಳಲು ಸಿಲಿಕಾನ್ ಸಿಟಿ ಬೆಂಗಳೂರು ಕಳೆದ 4 ವರ್ಷಗಳಿಂದ ಹಿಂದೆ ಬಿದ್ದಿದೆ. ಈ ವರ್ಷವೂ ಕೂಡ ಅಭಿಯಾನ ಆರಂಭವಾಗಿದ್ದು, ಬೆಂಗಳೂರಿಗೆ ಈ ಸಾರಿ ಅತ್ಯುತ್ತಮ ಅಂಕಗಳನ್ನು ಪಡೆಯಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪಣ ತೊಟ್ಟಿದೆ.
ಕಸ ಸಮಸ್ಯೆ; ಬಿಬಿಎಂಪಿ ವಿಸರ್ಜಿಸುವುದಾಗಿ ಎಚ್ಚರಿಸಿದ ಹೈಕೋರ್ಟ್
ಕಸದ ಮಾಫಿಯಾದಿಂದಲೇ ಇಂದು ಗಾರ್ಡನ್ ಸಿಟಿ 'ಗಾರ್ಬೇಜ್ ಸಿಟಿ' ಎಂದು ಕುಖ್ಯಾತಿ ಪಡೆದಿದೆ. ಹೀಗಾಗಿ ಈ ಸಾರಿಯ ಸ್ವಚ್ಛ ಸರ್ವೇಕ್ಷಣೆಯಲ್ಲಿ ಬೆಂಗಳೂರಿಗೆ ಅತ್ಯುತ್ತಮ ಅಂಕಗಳನ್ನು ಪಡೆಯಬೇಕು ಎನ್ನುವುದು ಗಗನ ಕುಸುಮವೇ ಆಗಿದೆ. ಆದರೆ, ಬಿಬಿಎಂಪಿಯ ಮಹತ್ವಾಕಾಂಕ್ಷೆಗೆ ಕಸದ ಮಾಫಿಯಾ ಅಡ್ಡವಾಗಿದೆ.
ಕಸದ ಮಾಫಿಯಾ ಹಗರಣ ಎಸಿಬಿಗೆ
ಬೆಂಗಳೂರಿನಲ್ಲಿ ಬೃಹದಾಕಾರವಾಗಿ ಬೆಳೆದಿರುವ ಕಸದ ಮಾಫಿಯಾವನ್ನು ಮಟ್ಟ ಹಾಕಲೇಬೇಕು ಎಂದು ಬೆಂಗಳೂರಿನ ಹಲವು ಪ್ರಜ್ಞಾವಂತ ನಾಗರಿಕರು, ಸಂಘ ಸಂಸ್ಥೆಗಳು ಕಳೆದ ವರ್ಷ ಅಭಿಯಾನ ನಡೆಸಿದ್ದರು. ಇದಕ್ಕೆ ಬೆಂಗಳೂರು ಬಗ್ಗೆ ಕಾಳಜಿ ಇರುವ ಅನೇಕ ರಾಜಕಾರಣಿಗಳೂ ಕೂಡ ಕೈ ಜೋಡಿಸಿದ್ದರು. ಕಸದ ಮಾಫಿಯಾದ ತಲೆನೋವು ವಿಪರೀತವಾಗಿದ್ದರಿಂದ ಅನೇಕ ಹೋರಾಟಗಾರರು ಈ ಬಗ್ಗೆ ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಹಾಗಾಗಿ ಕಳೆದ ಡಿಸೆಂಬರ್ನಲ್ಲಿ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕಳೆದ ಹತ್ತು ವರ್ಷದ ಅವಧಿಯಲ್ಲಿ ಬಿಬಿಎಂಪಿಯಲ್ಲಿ ನಡೆದ ಕಸದ ಮಾಫಿಯಾದ ಅವ್ಯವಹಾರವನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ತನಿಖೆಗೆ ವಹಿಸಿದ್ದಾರೆ.
ಕಸದಲ್ಲಿ ನಡೆದ ಹಗರಣದ ಮೊತ್ತ ಎಷ್ಟು?
ಬಿಬಿಎಂಪಿ ಕಸದ ಮಾಫಿಯಾ ಪುಡಿಗಾಸಿನ ಹಗರಣ ನಡೆಸುವುದಿಲ್ಲ. ಇದರಲ್ಲಿ ಕೋಟಿ ಕೋಟಿ ಹಣವನ್ನು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಗುತ್ತಿಗೆದಾರರು, ಅಧಿಕಾರಿಗಳು ನಡೆಸಿದ್ದಾರೆ. ಎಸಿಬಿಗೆ ಸಲ್ಲಿಕೆಯಾದ ದೂರಿನ ಪ್ರಕಾರ 246 ಕೋಟಿ ರುಪಾಯಿಗೂ ಹೆಚ್ಚು ಹಗರಣ ನಡೆದಿದೆ. ಇದಕ್ಕೆ ಬಿಬಿಎಂಪಿಯಲ್ಲಿನ ಭ್ರಷ್ಟ ಅಧಿಕಾರಿಗಳೇ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಿಬಿಎಂಪಿಯನ್ನು ಭ್ರಷ್ಟರ ಸಂತೆಯಾಗಿಸಿದೆ ಬಿಜೆಪಿ ಸರ್ಕಾರ?
ಮೆತ್ತಗಾಯಿತಾ ಕಸದ ಮಾಫಿಯಾ?
ಈ ಹಿಂದಿನ ವರ್ಷಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದ ಕಸದ ಮಾಫಿಯಾಕ್ಕೆ ಎಸಿಬಿ ತನಿಖೆ ಇತ್ತೀಚೆಗೆ ಬಿಸಿ ಮುಟ್ಟಿಸಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ಗುತ್ತಿಗೆದಾರರು ತಮ್ಮ ಕಸದ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕು, ಕಾರ್ಮಿಕರಿಗೆ ಬಯೋ ಮೆಟ್ರಿಕ್ ಒದಗಿಸಬೇಕು ಹಾಗೂ ಕಸವನ್ನು ಕಡ್ಡಾಯವಾಗಿ ವೇ ಬ್ರೀಜ್ಗಳಲ್ಲಿ ತೂಕ ಮಾಡಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ''ಇದೆಲ್ಲವನ್ನು ನಿಭಾಯಿಸಲು ವಸಂತ ನಗರ ಬಳಿಯ ಅಂಬೇಡ್ಕರ್ ಭವನದ ಹತ್ತಿರ ಸುಮಾರು 25 ಕೋಟಿ ರುಪಾಯಿ ವೆಚ್ಚದಲ್ಲಿ ಕಂಟ್ರೋಲ್ ರೂಮ್ ಸಿದ್ದಗೊಂಡಿದೆ'' ಎಂದು ಪಾಲಿಕೆಯ ವಿಶೇಷ ಆಯುಕ್ತ ರಂದೀಪ್ ತಿಳಿಸುತ್ತಾರೆ. ಹೀಗಾಗಿ ಕಸದ ಮಾಫಿಯಾ ಪೂರ್ಣವಾಗಿ ಅಲ್ಲದಿದ್ದರೂ ಸ್ವಲ್ಪಮಟ್ಟಿಗೆ ಮೆತ್ತಗಾಗಿದೆ ಎಂದು ಹೇಳಲಾಗುತ್ತಿದೆ.
ಕಸದ ಮಾಫಿಯಾವನ್ನು ಮಟ್ಟ ಹಾಕಲಾಗುತ್ತಿದೆ
ಬಿಬಿಎಂಪಿಯ ಪ್ರಸ್ತುತ ಅವಧಿಯ ಕೊನೆಯ ಮೇಯರ್ ಆಗಿರುವ ಎಂ ಗೌತಮ್ ಕುಮಾರ್ ಅವರು, ಕಸದ ಮಾಫಿಯಾವನ್ನು ಮಟ್ಟ ಹಾಕಲು ಕೆಲ ಕ್ರಮಗಳನ್ನು ಕೈಗೊಂಡಿದ್ದಾರಂತೆ. ಈ ಸಲದ ಕಸ ವಿಲೇವಾರಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕಸವನ್ನು ಟಿಪ್ಪರ್ನಲ್ಲಿಯೇ ವಿಂಗಡಣೆ ಮಾಡಿ ಗಾರ್ಬೇಜ್ ಯಾರ್ಡ್ಗಳಿಗೆ ಸಾಗಿಸಬೇಕು ಎಂದು ಷರತ್ತು ವಿಧಿಸಿದ್ದಾರೆ. ''ಷರತ್ತು ಉಲ್ಲಂಘಿಸುವ ಗುತ್ತಿಗೆದಾರರ ಟೆಂಡರ್ ರದ್ದು ಮಾಡಲಾಗುವುದು ಹಾಗೂ ತ್ಯಾಜ್ಯ ವಿಲೇವಾರಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಕಂಟ್ರೋಲ್ ರೂಮ್ ದಕ್ಷತೆಯನ್ನು ಹೆಚ್ಚಿಸಲಾಗುವುದು. ಇಂದೋರ್ ಮಾದರಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು'' ಎಂದು ಗೌತಮ್ ಕುಮಾರ್ ಹೇಳುತ್ತಾರೆ.
'ಸ್ವಚ್ಛ ಸರ್ವೇಕ್ಷಣೆ 2020' ಆರಂಭ; ಈ ಬಾರಿಯ ವಿಶೇಷತೆ ಏನು?
ವರದಿ ಬರಲು ಇನ್ನೂ ಮೂರು ತಿಂಗಳಾಗಬಹುದು
''ಬಿಬಿಎಂಪಿಯಲ್ಲಿ ಕಸದ ಮಾಫಿಯಾ ಅತಿ ಹೆಚ್ಚು ದುಡ್ಡು ಹೊಡೆಯುವ ಒಂದು ಭ್ರಷ್ಟರ ಕೂಟವಾಗಿದೆ. ಕಸದ ಮಾಫಿಯಾದಿಂದಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗೆ ಗಾರ್ಬೆಜ್ ಸಿಟಿ ಎಂಬ ಹೆಸರು ಬಂದಿದೆ. ಕಳೆದ ಹತ್ತು ವರ್ಷದ ಅವಧಿಯಲ್ಲಿ 246 ಕೋಟಿ ರುಪಾಯಿಗೂ ಹೆಚ್ಚು ಹಣವನ್ನು ಗುತ್ತಿಗೆದಾರರು, ಅಧಿಕಾರಿಗಳು ನುಂಗಿದ್ದಾರೆ. ಇದಕ್ಕೆ ಕೆಲವು ಪ್ರಭಾವಿ ರಾಜಕಾರಣಿಗಳ ಶ್ರೀರಕ್ಷೆ ಇದೆ. ಇತ್ತೀಚೆಗೆ ಸ್ವಲ್ಪ ಇದರ ಹಾವಳಿ ಕಡಿಮೆಯಾಗಿದೆ. ಇದನ್ನು ಸಂಪೂರ್ಣವಾಗಿ ತೊಡೆದುಹಾಕಿ, ಕಸ ವಿಲೇವಾರಿಯಲ್ಲಿ ಪಾರದರ್ಶಕತೆ ತರಬೇಕು ಎಂದು ಹೋರಾಟ ಮಾಡುತ್ತಿದ್ದೇವೆ. ಎಸಿಬಿ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ವರದಿ ನೀಡಲು ಇನ್ನೂ ಮೂರು ತಿಂಗಳು ಆಗಬಹುದು. ವರದಿ ಬಂದರೆ ಗುತ್ತಿಗೆದಾರರಿಗೆ ಅಷ್ಟೇನೂ ಪರಿಣಾಮವಾಗುವುದಿಲ್ಲ. ಸಕಾ್ರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡರೆ ಹಲವು ಅಧಿಕಾರಿಗಳು ಮನೆಗೆ ಹೋಗಬೇಕಾಗುತ್ತದೆ'' ಎಂದು ಮಾಹಿತಿ ಹಕ್ಕು ಹೋರಾಟಗಾರ ಅಮರೇಶ ಅವರು ಒನ್ಇಂಡಿಯಾದೊಂದಿಗೆ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾರೆ.
ಬಿಬಿಎಂಪಿ ವಿಸರ್ಜಿಸುವುದಾಗಿ ಕೋರ್ಟ್ ಎಚ್ಚರಿಕೆ
ಬೆಂಗಳೂರಿನ ಕಸದ ಸಮಸ್ಯೆಯ ಬಗ್ಗೆ ಕರ್ನಾಟಕ ಹೈಕೋರ್ಟ್ ಕೂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇಲೆ ತೀವ್ರ ಕಿಡಿ ಕಾರಿದೆ. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ''ಘನತ್ಯಾಜ್ಯ ವಿಲೇವಾರಿಯಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ. ಈ ವಿಚಾರದಲ್ಲಿ ನಾವು ಕಠಿಣ ತೀರ್ಮಾನ ತೆಗೆದುಕೊಳ್ಳದೇ ಅನ್ಯ ಮಾರ್ಗವಿಲ್ಲ. ಇಲ್ಲದಿದ್ದರೆ, ವರ್ಷಗಳೇ ಗತಿಸಿದರೂ ಇದಕ್ಕೆ ಪರಿಹಾರ ಸಿಗುವುದಿಲ್ಲ'' ಎಂದು ಎಚ್ಚರಿಸಿದೆ. ''ತ್ಯಾಜ್ಯ ವಿಲೇವಾರಿಯಲ್ಲಿ ವಿಫಲವಾಗಿರುವ ಪಾಲಿಕೆಯನ್ನು ವಿಸರ್ಜಿಸಿ ಆಡಳಿತಾಧಿಕಾರಿ ನೇಮಿಸಬೇಕು. ಇಲ್ಲವೇ ನಗರದಲ್ಲಿ ನಿರ್ಮಾಣ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕು. ಈ ಬಗ್ಗೆ ಸರ್ಕಾರ ಒಂದು ತೀರ್ಮಾನಕ್ಕೆ ಬರಬೇಕು' ಎಂದು ಪೀಠ ಬಿಬಿಎಂಪಿಗೆ ಚಾಟಿ ಬೀಸಿದೆ.
ಏನಿದು ' ಸ್ವಚ್ಛ ಸರ್ವೇಕ್ಷಣೆ'?
' ಸ್ವಚ್ಛ ಭಾರತ್' ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿದೆ. ಇದಕ್ಕೆ ಪೂರಕವಾಗಿ 2016 ರಲ್ಲಿ ಕೇಂದ್ರದ ವಸತಿ ಮತ್ತು ನಗರಾಭಿವೃದ್ಧಿ ಯೋಜನಾ ಸಚಿವಾಲಯ ' ಸ್ವಚ್ಛ ಸರ್ವೇಕ್ಷಣೆ' ಆರಂಭಿಸಿತು. ಸಚಿವಾಲಯ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಯಾವ ನಗರ ಅತಿ ಹೆಚ್ಚು ಸ್ವಚ್ಛತೆ ಹಾಗೂ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸಿದೆ ಎಂಬುದನ್ನು ಸರ್ವೇಯಲ್ಲಿ ಕಂಡುಕೊಂಡು ಅಂಕಗಳನ್ನು ನೀಡುತ್ತದೆ. ಅತಿ ಹೆಚ್ಚು ಅಂಕಗಳನ್ನು ಪಡೆದ ಟಾಪ್ 20 ನಗರಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತದೆ.
2019 ರ ಸ್ವಚ್ಛ ಸರ್ವೇಕ್ಷಣೆ
2019 ರಲ್ಲೂ ಸ್ವಚ್ಛ ಸರ್ವೇಕ್ಷಣೆ ನಡೆದಿತ್ತು. ಆಗ ಇದರಲ್ಲಿ 600 ಕ್ಕೂ ಹೆಚ್ಚು ನಗರಗಳು ಪಾಲ್ಗೊಂಡಿದ್ದವು. ಅದರಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ 20 ನಗರಗಳನ್ನು ದೇಶದ ಸ್ವಚ್ಛ ನಗರಗಳು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಮಧ್ಯಪ್ರದೇಶದ ಇಂದೋರ್ 2019 ರ ದೇಶದ ನಂಬರ್ 1 ಸ್ವಚ್ಛ ನಗರವಾಗಿತ್ತು. ಅಂಬಿಕಾಪುರ ಎರಡನೇ ಸ್ಥಾನ ಪಡೆದಿದ್ದರೇ, ಕರ್ನಾಟಕದ ಮೈಸೂರು ಮೂರನೇ ಸ್ಥಾನ ಪಡೆದಿತ್ತು. ಬೆಂಗಳೂರಿಗೆ 194 ನೇ ಸ್ಥಾನ ಪಡೆದು ಸ್ವಚ್ಛತೆಯಲ್ಲಿ ಹಿಂದೆ ಬಿದ್ದಿದೆ ಎಂಬುದು ಬಹಿರಂಗವಾಗಿತ್ತು.