ಕಸದ ವಾಸನೆಯಲ್ಲಿ ದಕ್ಷಿಣ ಬೆಂಗಳೂರಿಗರಿಗೆ ಗಣೇಶ ಹಬ್ಬ!
ಬೆಂಗಳೂರು, ಸೆಪ್ಟೆಂಬರ್. 15: ಬಿಬಿಎಂಪಿಗೆ ಹೊಸ ಆಡಳಿತ ಬಂದಿದೆ. ಆದರೆ ಬೆಂಗಳೂರಿನ ಕಸದ ಸಮಸ್ಯೆ ಹಾಗೇ ಇದೆ. ಬೆಂಗಳೂರು ದಕ್ಷಿಣದಲ್ಲಿ ಬಿಗಡಾಯಿಸಿದೆ.
ಕಳೆದ ನಾಲ್ಕೈದು ದಿನಗಳಿಂದ ಬೆಂಗಳೂರು ದಕ್ಷಿಣ ಭಾಗದಲ್ಲಿ ಕಸ ವಿಲೇವಾರಿ ಸಮಸ್ಯೆಯಾಗಿ ಮಾರ್ಪಟ್ಟಿದೆ. ಪೌರ ಕಾರ್ಮಿಕರು ಎಂದಿನಂತೆ ಕಸವನ್ನು ಸಂಗ್ರಹಣೆ ಮಾಡುತ್ತಿದ್ದಾರೆ. ಆದರೆ ವಿಲೇವಾರಿ ಆಗದೇ ಅಲ್ಲಿಯೇ ಉಳಿಯುತ್ತಿವೆ.
ಜೂನ್ ತಿಂಗಳಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಗುಂಡ್ಲಹಳ್ಳಿ ಬಳಿಯ ಟೆರ್ರಾ ಫಾರ್ಮ ಕಸ ವಿಲೇವಾರಿ ಘಟಕಕ್ಕೆ ಬೆಂಗಳೂರಿನಿಂದ ತೆರಳುತ್ತಿದ್ದ ಕಸದ ಲಾರಿಗಳನ್ನು ಗ್ರಾಮಸ್ಥರು ತಡೆದು ಪ್ರತಿಭಟನೆ ಆರಂಭಿಸಿದ್ದರು. ನಂತರ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗಿತ್ತು. ಆದರೆ ಬೆಂಗಳೂರು ದಕ್ಷಿಣ ವ್ಯಾಪ್ತಿಯ ಜನರಿಗೆ ಆಗ ಕಸದ ಸಮಸ್ಯೆ ತಲೆದೊರಿರಲಿಲ್ಲ. ಸುತ್ತಮುತ್ತಲ ಪ್ರದೇಶದ ಕಸವನ್ನು ಬನ್ನೇರುಘಟ್ಟ ಸಮೀಪದ ಬಿಂಗೀಪುರಕ್ಕೆ ಕೊಂಡೊಯ್ಯಲಾಗುತ್ತಿದ್ದು ಸಮಸ್ಯೆ ಎದುರಾಗಿರಲಿಲ್ಲ.[ಕಸದ ಲಾರಿ ಬಿಂಗೀಪುರಕ್ಕೆ ಬರೋಲ್ಲ ಮೇಯರ್ ಭರವಸೆ]
ಆದರೆ ಈಗ ಬಿಂಗಿಪುರದ ಗ್ರಾಮಸ್ಥರು ಕಸದ ಲಾರಿಗಳನ್ನು ತಡೆದಿದ್ದು ಬೆಂಗಳೂರು ದಕ್ಷಿಣ ಮತ್ತು ಬೊಮ್ಮನಹಳ್ಳಿ ಭಾಗದದಲ್ಲಿ ಕಸ ಸಂಗ್ರಹಣೆ ಹಾಗೇ ಇದೆ. ಬನಶಂಕರಿ, ಲಕ್ಕಸಂದ್ರ, ಸುಂಕದಕಟ್ಟೆ, ಅತ್ತಿ ಗುಪ್ಪೆ, ವಿಜಯನಗರ ಮತ್ತಿತರ ಪ್ರದೇಶ ಗಳಲ್ಲೂ ಕಸ ವಿಲೇವಾರಿ ಆಗಿಲ್ಲ. ಆರ್.ವಿ. ರಸ್ತೆ, ಜೆ.ಸಿ. ರಸ್ತೆಯಲ್ಲೂ ಕಸದ ರಾಶಿ ಬಿದ್ದಿದೆ.
ಲಾರಿಗಳದ್ದೇ ಸಮಸ್ಯೆ
ಮೊದಲಾಗಿದ್ದರೆ ನೇರವಾಗಿ ಬೆಂಕಿಪುರಕ್ಕೆ ತೆರಳಿ ಕಸ ಡಂಪ್ ಮಾಡಿ ಲಾರಿಗಳು ಹಿಂದಿರುಗುತ್ತಿದ್ದವು. ಆದರೆ ಈಗ ಅಲ್ಲಿಯ ಜನರು ಕಸ ಹಾಕಲು ಬಿಡದ ಕಾರಣ ಲಾರಿಗಳು ಬೇರೆಡೆಗೆ ತೆರಳಿ ಕಸ ಡಂಪ್ ಮಾಡಿ ಹಿಂದಿರುಗುತ್ತಿವೆ. ಇದರಿಂದ ಕಸ ವಿಲೇವಾರಿ ನಿಧಾನವಾಗಿದ್ದು ನಮಗೂ ಗೊಂದಲ ಏರ್ಪಟ್ಟಿದೆ ಎನ್ನುತ್ತಾರೆ ಕತ್ರಿಗುಪ್ಪೆ ಸಮೀಪ ಕಸ ಸಂಗ್ರಹಣೆ ಮಾಡುತ್ತಿದ್ದ ಸುಂದರೇಶ್.
ಬಿಂಗೀಪುರದ ಗ್ರಾಮಸ್ಥರದ್ದೇನು ಬೇಡಿಕೆ?
'ರಸ್ತೆ ದುರಸ್ತಿ, ಒಳಚರಂಡಿ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕ ಯಾವುದು ನಮ್ಮ ಭಾಗದಲ್ಲಿಲ್ಲ. ಮಹಾನಗರ ಪಾಲಿಕೆಗೆ ಸೇರಿದ್ದರೂ ಹಿಂದುಳಿದ ಗ್ರಾಮಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಕಲ್ಲು ಕ್ವಾರಿಗಳ ಜಾಗದಲ್ಲಿ ಕಸ ಹಾಕಿದ ಮೇಲೆ ಮಣ್ಣಿನ ಹೊದಿಕೆ ಹಾಕುತ್ತೇವೆ ಎಂದು ನೀಡಿದ್ದ ಭರವಸೆ ಮರೆಯಲಾಗಿದೆ ಎಂದು ಬಿಂಗಿಪುರದ ಗ್ರಾಮಸ್ಥರು ಆರೋಪಿಸುತ್ತಾರೆ.
ನೂತನ ಮೇಯರ್ ಭರವಸೆ
ಬಿಂಗೀಪುರಕ್ಕೆ ಭೇಟಿ ನೀಡಿದ ಬಿಬಿಎಂಪಿ ನೂತನ ಮೇಯರ್ ಮಂಜುನಾಥ ರೆಡ್ಡಿ ಅವರು ಬಿಂಗೀಪುರ ಕೇಂದ್ರಕ್ಕೆ ಕಸ ವಿಲೇವಾರಿಯನ್ನು ಒಂದು ವಾರದಲ್ಲಿ ಸ್ಥಗಿತಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಪರ್ಯಾಯ ವ್ಯವಸ್ಥೆ ಏನು ಎಂಬುದರ ಬಗ್ಗೆ ಹೇಳಿಕೆ ನೀಡಿಲ್ಲ.
ಸದ್ಯ ಪರಿಸ್ಥಿತಿ ಹೇಗಿದೆ?
ಪೌರ ಕಾರ್ಮಿಕರು ಗುತ್ತಿಗೆದಾರರ ಆದೇಶದಂತೆ ಕಸ ಸಂಗ್ರಹಣೆ ಮಾಡುತ್ತಿದ್ದಾರೆ. ಆದರೆ ಸಂಗ್ರಹಿಸಿದ ಕಸ ಲಾರಿಗಳಲ್ಲಿ ಲೋಡ್ ಆಗಿ ನಗರದಿಂದ ಹೊರಕ್ಕೆ ಹೋಗುತ್ತಿಲ್ಲ. ರಸ್ತೆಯ ಅಲ್ಲಲ್ಲಿ ಕಸ ತುಂಬಿದ ಆಟೋಗಳು ನಿಂತಿರುವುದು ಸಾಮಾನ್ಯ ದೃಶ್ಯವಾಗಿದೆ.
ಕಸದ ವಾಸನೆ ನಡುವೆ ಗಣೇಶ ಹಬ್ಬ?
ಗಣೇಶ ಹಬ್ಬ ಸಮೀಪಿಸಿದ್ದು ಬೆಂಗಳೂರು ದಕ್ಷಿಣದ ನಾಗರಿಕರಿಗೆ ಕಸದ ವಾಸನೆಯ ನೆರಳಲ್ಲಿ ಹಬ್ಬ ಮಾಡುವಂಥ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಬಿಬಿಎಂಪಿ ಶೀಘ್ರ ಪರಿಹಾರ ಕಂಡುಕೊಂಡರೆ ಮಾತ್ರ ಸಮಸ್ಯೆ ನಿವಾರಣೆ ಸಾಧ್ಯ.
ರಸ್ತೆ ಇಕ್ಕೆಲಗಳಲ್ಲಿ ತುಂಬಿದ ಕಸ
ಕೆಲವೊಂದು ಏರಿಯಾಗಳಲ್ಲಿ ಕಸ ಸಂಗ್ರಹಣೆಯನ್ನು ನಿಲ್ಲಿಸಲಾಗಿದೆ. ಒಂದು ವೇಳೆ ಕಸ ಸಂಗ್ರಹಿಸಿದರೂ ಅದನ್ನು ತುಂಬಲು ವಾಹನಗಳಿಲ್ಲ. ಶ್ರೀನಿವಾಸ ನಗರದ ರಸ್ತೆಯಲ್ಲಿ ಕಂಡು ಬಂದ ದೃಶ್ಯ ನೀವೇ ನೊಡಿ..
ಜಯನಗರದಲ್ಲೂ ಕಸದ ವಾಸನೆ
ಜಯನಗರದಲ್ಲಿಯೂ ಕಸ ಸಂಗ್ರಹಣೆ ನಿಂತು ಹೋಗಿದೆ. ಕಸ ಲೋಡ್ ಆಗಿರುವ ಲಾರಿಗಳು ಅಲ್ಲಲ್ಲಿಯೇ ಇದ್ದು ಇನ್ನೆರಡು ದಿನ ಹೀಗೆ ಕಳೆದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.