ಹಣೆಗೆ ಪಿಸ್ತೂಲು ಇಟ್ಟು ರಾಬರಿ ಮಾಡುತ್ತಿದ್ದ ಬಾಂಬೆ ಸಲೀಮನ ತಮ್ಮ ಬಂಧನ
ಬೆಂಗಳೂರು, ಅ. 21: ಅಣ್ಣ ಜೈಲಿನಲ್ಲಿ ಇದ್ದುಕೊಂಡೇ ಬ್ಲಾಕ್ ಮೇಲ್ ಮಾಡುವ ಕಿರಾತಕ. ತಮ್ಮ ಸಿಕ್ಕವರ ಹಣೆ ಮೇಲೆ ಪಿಸ್ತೂಲು ಇಟ್ಟು ರಾಬರಿ ಮಾಡುವವ! ಬೆಂಗಳೂರಿನ ನಟೋರಿಯಸ್ ಗ್ಯಾಂಗ್ಸ್ಟರ್ ಬಾಂಬೆ ಸಲೀಮನ ಕಥೆಯಿದು. ಅಂದ ಹಾಗೆ ಪಿಸ್ತೂಲು ತೋರಿಸಿ ಜನರನ್ನು ಸುಲಿಗೆ ಮಾಡುತ್ತಿದ್ದ ಬಾಂಬೆ ಸಲೀಮನ ತಮ್ಮನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ಬಶೀರ್ ಅಲಿಯಾಸ್ ಸಮ್ಮು ಮತ್ತು ಅತನ ಸಹಚರ ಆಸೀಫ್ ಬಂಧಿತ ಅರೋಪಿಗಳು. ನಟೋರಿಯಸ್ ಮನೆಗಳ್ಳ, ಬ್ಲಾಕ್ ಮೇಲರ್, ಜೈಲಿನಲ್ಲಿದ್ದುಕೊಂಡೇ ಬೆಂಗಳೂರಿನಲ್ಲಿ ಪಾತಕ ಕೃತ್ಯಗಳನ್ನು ಎಸಗುವ ಬಾಂಬೆ ಸಲೀಮನ ಸಹೋದರ ಕೂಡ ಇದೀಗ ದರೋಡೆಕೋರನಾಗಿ ಸಿಕ್ಕಿಬಿದ್ದಿದ್ದಾನೆ. ಬಾಂಬೆ ಸಲೀಮನ ಸಹೋದರ ಬಂಧನದಿಂದ ಹದಿನೆಂಟು ಮನೆ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಬಾಣಸವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ ಎರಡು ಕೆ.ಜಿ ಚಿನ್ನಾಭರಣ, ಐದು ಕೆ.ಜಿ. ಬೆಳ್ಳಿ ಸೇರಿದಂತೆ ಒಂದು ಕೋಟಿ ರೂ. ಮೌಲ್ಯದ ಚಿನ್ನಾಭರಣ, ಒಂದು ಪಿಸ್ತೂಲು, ಐದು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಬಾಂಬೆ ಸಲೀಮನ ತಮ್ಮ ಬಶೀರ್ ಅಲಿಯಾಸ್ ಸಮ್ಮು, ಆತನ ಸ್ನೇಹಿತ ಆಸೀಪ್ ಬಂಧನದಿಂದ ಮಹತ್ವದ ಕಳವು ಪ್ರಕರಣಗಳು ಪತ್ತೆಯಾಗಿವೆ.
ಬೆಂಗಳೂರಿನ ಪಾತಕ ಲೋಕದಲ್ಲಿ ಬಾಂಬೆ ಸಲೀಮ್ನ ರಕ್ತ ಸಿಕ್ತ ಪುಟಗಳೂ ಇನ್ನೂ ಮಾಸಿಲ್ಲ. ಜೈಲಿನಲ್ಲಿದ್ದುಕೊಂಡೇ ಬಾಂಬೆ ಸಲೀಮ್ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬರ ಪತ್ನಿ ಜತೆ ಚಾಟ್ ಮಾಡುತ್ತಿದ್ದ. ಇದನ್ನು ಪ್ರಶ್ನೆ ಮಾಡಿದ ಕೂಡಲೇ ಮಹಿಳೆಯ ಪತಿಯನ್ನು ಕೊಲೆ ಮಾಡಲಾಗಿತ್ತು. ಪೀಣ್ಯಾದ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಪೃಥ್ವಿರಾಜ್ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಜೈಲಿನಲ್ಲಿದ್ದುಕೋಂಡೇ ಬ್ಲಾಕ್ ಮೇಲ್ ಮಾಡುವ ಬಾಂಬೆ ಸಲೀಮನ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿದ್ದು ಸದ್ಯ ಜೈಲಿನಲ್ಲಿದ್ದಾನೆ. ದರೋಡೆ, ಸುಲಿಗೆ, ಮನೆ ಕಳ್ಳತನಕ್ಕೆ ಕುಖ್ಯಾತಿ ಹೊಂದಿರುವ ಬಾಂಬೆ ಸಲೀಮನ ಸಹಚರ ಸಮ್ಮು ಕೂಡ ಇದೀಗ ಹೈವೇ ರಾಬರಿಕೋರನಾಗಿ ಹೊರ ಹೊಮ್ಮಿದ್ದಾನೆ.
ಹದಿನೆಂಟು ಪ್ರಕರಣ ಪತ್ತೆ: ಕಾರಿನಲ್ಲಿ ಯಾರೂ ಇಲ್ಲದ ಮನೆಗಳನ್ನು ಪತ್ತೆ ಮಾಡುವ ಸಮ್ಮು, ತನ್ನ ಸಹಚರನೊಂದಿಗೆ ನುಗ್ಗಿ ಹಣ ಮತ್ತು ಚಿನ್ನಾಭರಣ ದೋಚುತ್ತಿದ್ದ. ಯಾರಾದರೂ ಅಡ್ಡ ಬಂದರೆ ಪಿಸ್ತೂಲು ಹಣೆಗೆ ಇಟ್ಟು ಹೆದರಿಸುತ್ತಿದ್ದ. ಈತ ರಾಮಮೂರ್ತಿನಗರ, ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ದರೋಡೆ ಮಾಡುತ್ತಿದ್ದರು. ಕಳೆದ ಒಂದೂವರೆ ವರ್ಷದಲ್ಲಿ ಹದಿನೆಂಟು ಕಡೆ ಮನೆಗಳನ್ನು ದೋಚಿದ್ದ ಬಾಂಬೆ ಸಲೀಮನ ಸಹೋದರ ಒಂದೂವರೆ ವರ್ಷದಿಂದ ಪೊಲೀಸರ ಕೈಗೆ ಸಿಗದೇ ಓಡಾಡುತ್ತಿದ್ದ.
ಮನೆಯೊಂದರಲ್ಲಿ ದರೋಡೆ ಮಾಡಲು ಯತ್ನಿಸಿದ ಖಚಿತ ಮಾಹಿತಿ ಆಧರಿಸಿ ಬಾಣಸವಾಡಿ ಠಾಣೆ ಪೊಲೀಸರು ಬಶೀರ್ ಅಲಿಯಾಸ್ ಸಮ್ಮು ಹಾಗೂ ಆಸೀಫ್ ನನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ಹದಿನೆಂಟು ಮನೆಕಳ್ಳತನ ಪ್ರಕರಣ ಪತ್ತೆಯಾಗಿವೆ. ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹನ್ನೊಂದು ಕಳ್ಳತನ ಪ್ರಕರಣ, ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಆರು ಪ್ರಕರಣ ಸೇರಿದಂತೆ ಒಟ್ಟು ಹದಿನೆಂಟು ದರೋಡೆ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ.
ಹೈವೇ ಬಳಿ ಕೂಡ ಜನರನ್ನು ಅಡ್ಡಗಟ್ಟಿ ದರೋಡೆ ಮಾಡುವ ಪ್ರವೃತ್ತಿ ಹೊಂದಿರುವ ಬಶೀರ್ ತನ್ನ ಅಣ್ಣನಂತೆ ಪಾತಕ ಲೋಕದಲ್ಲಿ ಅಪರಾಧ ಕೃತ್ಯಗಳನ್ನು ಎಸಗಿದ್ದಾನೆ. ಕೃತ್ಯಕ್ಕೆ ಬಳಸುತ್ತಿದ್ದ ಅಕ್ರಮ ಪಿಸ್ತೂಲು ಐದು ಜೀವಂತ ಗುಂಡುಗಳನ್ನು ಸಹ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಾಣಸವಾಡಿ ಪೊಲೀಸರ ಕಾರ್ಯಶೈಲಿಯನ್ನು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವರು ಪ್ರಶಂಸೆ ಮಾಡಿದ್ದಾರೆ. ಪ್ರತ್ಯೇಕ ನಾಲ್ಕು ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿ ಒಟ್ಟು ಒಂದು ಕೋಟಿ ರೂ. ಮೌಲ್ಯದ ಎರಡು ಕೆ.ಜಿ. ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಪತ್ತೆ ಮಾಡುವಲ್ಲಿ ಬಾಣಸವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
Recommended Video
ಎಸ್ ಅರ್ ವಿಶ್ವನಾಥ್ ನೇಮಕ ಪ್ರಶ್ನೆ: ಬಿಡಿಎ ಅಧ್ಯಕ್ಷರನ್ನಾಗಿ ಶಾಸಕ ಎಸ್. ಆರ್. ವಿಶ್ವನಾಥ್ ಅವರನ್ನು ನಿಯಮಬಾಹಿರವಾಗಿ ನೇಮಿಸಲಾಗಿದೆ ಎಂದು ಪ್ರಶ್ನಿಸಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ವಕೀಲರೊಬ್ಬರು ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು. ವಿಶ್ವನಾಥ್ ಅವರನ್ನು ನಿಯಮ ಬಾಹಿರವಾಗಿ ಬಿಡಿಎ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹೀಗಾಗಿ ಅಧ್ಯಕ್ಷಸ್ಥಾನದಿಂದ ವಿಶ್ವನಾಥ್ ಅವರನ್ನು ಅನೂರ್ಜಿತಗೊಳಿಸುವಂತೆ ಸೂಚಿಸಲಾಗಿದೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ , ರಾಜ್ಯ ಸರ್ಕಾರ, ಬಿಡಿಎ ಹಾಗೂ ಎಸ್.ಆರ್. ವಿಶ್ವನಾಥ್ ಅವರಿಗೆ ನೋಟಿಸ್ ನೀಡಿದೆ.