ಬೆಂಗಳೂರಿನಲ್ಲಿ ಗ್ಯಾಂಗ್ ವಾರ್ ಜಸ್ಟ್ ಮಿಸ್ !
ಬೆಂಗಳೂರು, ಫೆಬ್ರವರಿ 24: ರೌಡಿಗಳ ನಡುವಿನ ಗ್ಯಾಂಗ್ ವಾರ್ ನಡೆಯುವ ಮುನ್ನ ಸಿಸಿಬಿ ಪೊಲೀಸರು ಎಚ್ಚೆತ್ತುಕೊಂಡು ಮಾರಕಾಸ್ತ್ರಗಳ ಸಮೇತ ಹನ್ನೊಂದು ಪಾತಕಿಗಳನ್ನು ಬಂಧಿಸಿದ್ದಾರೆ. ಬೆಂಗಳೂರಿನ ಲೋಕಲ್ ರೌಡಿಗಳಿಬ್ಬರ ನಡುವಿನ ವಾರ್ ಗೆ ಮಂಗಳೂರಿನಿಂದ ಇಬ್ಬರು ರೌಡಿಗಳನ್ನು ಕರೆಸಿರುವ ಸಂಗತಿ ಹೊರ ಬಿದ್ದಿದೆ.
ಮಾರಕಾಸ್ತ್ರಗಳನ್ನು ಹಿಡಿದು ಕಳೆದ ಇಪ್ಪತ್ತು ದಿನಗಳಿಂದ ಹೊಂಚು ಹಾಕಿದ್ದ ಹನ್ನೊಂದು ಪಾತಕಿಗಳು ಮಾರತಹಳ್ಳಿ ಸಮೀಪ ಸಾರ್ವಜನಿಕರಿಗೆ ಹೆದರಿಸಿ ಸುಲಿಗೆಗೆ ಮುಂದಾಗಿದ್ದರು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಸಂಘಟಿತ ಅಪರಾಧ ದಳದ ಪೊಲೀಸರು ಕಾರ್ಯಾಚರಣೆ ನಡೆಸಿ ಮಂಗಳೂರು ಮೂಲದ ಕಿರಣ್ ಗೌಡ, ಉಲ್ಲಾಳ ರೌಡಿ ಶೀಟರ್ ವಿಶ್ವನಾಥ್ ಭಂಡಾರಿ, ಆನೇಕಲ್ ರೌಡಿ ಹರೀಶ್, ಸರ್ಜಾಪುರ ರೌಡಿ ವೆಂಕಟೇಶ್ ಸೇರಿದಂತೆ ಹನ್ನೊಂದು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಹದಿನೆಂಟು ಮಚ್ಚು, ಲಾಂಗು ಹಾಗೂ ಕಾರು ವಶಪಡಿಸಿಕೊಳ್ಳಲಾಗಿದೆ.
ಕಾಡುಬಿಸನಹಳ್ಳಿಯ ಸೋಮ ಮತ್ತು ರೋಹಿತ್ ಗ್ಯಾಂಗ್ ನಡುವೆ ಹಳೇ ವೈಷಮ್ಯ ಇತ್ತು. ಸೋಮ ಮತ್ತು ಸೋಮನ ಸಹಚರರನ್ನು ಮುಗಿಸಲು ಸಂಚು ರೂಪಿಸಿರುವ ರೋಹಿತ್, ಗ್ಯಾಂಗ್ ವಾರ್ ಮಾಸ್ಟರ್ ಪ್ಲಾನ್ ರೂಪಿಸಿದ್ದ. ಸೋಮ ಮತ್ತು ಆತನ ಸಹಚರರನ್ನು ಮುಗಿಸಲು ಮಂಗಳೂರು ಮೂಲದ ಕಿರಣ್ ಗೌಡ ಮತ್ತು ವಿಶ್ವನಾಥ್ ಭಂಡಾರಿಯನ್ನು ಕರೆಸಿದ್ದ. ಮಾರತಹಳ್ಳಿ ಸಮೀಪ ಮನೆ ಮಾಡಿಕೊಟ್ಟಿದ್ದ.
Recommended Video
ಮಚ್ಚು, ಲಾಂಗು ಹಿಡಿದು ಕಾಡುಬಿಸನಹಳ್ಳಿಯ ಸೋಮನಗಾಗಿ ಕಾಯುತ್ತಿದ್ದರು. ಇನ್ನು ಮಂಗಳೂರು ರೌಡಿಗಳ ಜತೆಗೆ ಸ್ಥಳೀಯರ ರೌಡಿ ಶೀಟರ್ ಗಳನ್ನು ಒಟ್ಟು ಗೂಡಿಸಿದ್ದ ರೋಹಿತ್ ಕರಿಯಮ್ಮನ ಅಗ್ರಹಾರದಲ್ಲಿ ಮನೆ ಮಾಡಿಕೊಟ್ಟಿದ್ದ. ಹತ್ಯೆಗೆ ಸಂಚು ರೂಪಿಸಿ ಗ್ಯಾಂಗ್ ವಾರ್ ತಯಾರಿಯಲ್ಲಿದ್ದ ಹನ್ನೊಂದು ಮಂದಿ ಜೈಲು ಸೇರಿದ್ದಾರೆ. ಈ ಸಂಬಂಧ ಮಾರತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.