ಬಾಂಗ್ಲಾ ಯುವತಿ ಗ್ಯಾಂಗ್ ರೇಪ್: ಜಡ್ಜ್ ಮುಂದೆ ಸಂತ್ರಸ್ತೆ ಹೇಳಿಕೆ
ಬೆಂಗಳೂರು, ಮೇ 29: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿರುವ ಬಾಂಗ್ಲಾದೇಶಿ ಯುವತಿಯನ್ನು ನ್ಯಾಯಧೀಶರ ಮುಂದೆ ಹಾಜರು ಪಡಿಸಿ ಹೇಳಿಕೆ ದಾಖಲಿಸಲು ರಾಮಮೂರ್ತಿನಗರ ಪೊಲೀಸರು ತಯಾರಿ ನಡೆಸಿದ್ದಾರೆ. ಕೇರಳದಲ್ಲಿದ್ದ ಸಂತ್ರಸ್ತ ಯುವತಿಯನ್ನು ಶುಕ್ರವಾರ ಸಂಜೆ ಕರೆತರಲಾಗಿದೆ. ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ಸಂತ್ರಸ್ತ ಯುವತಿಯನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದಾರೆ. ಇದೀಗ ಅಜ್ಞಾತ ಸ್ಥಳದಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ವಸಂತನಗರದಲ್ಲಿರುವ ವಿಶೇಷ ಕೋರ್ಟ್ ಮುಂದೆ ಹಾಜರು ಪಡಿಸಲು ಪೊಲೀಸರು ಮುಂದಾಗಿದ್ದಾರೆ.
ವೈದ್ಯಕೀಯ ಪರೀಕ್ಷೆ : ಕೇರಳದಲ್ಲಿದ್ದ ಸಂತ್ರಸ್ತ ಯುವತಿಯನ್ನು ಬೆಂಗಳೂರಿನ ಪೊಲೀಸರು ಪತ್ತೆ ಮಾಡಿ ಬೆಂಗಳೂರಿಗೆ ಕರೆತಂದಿದ್ದಾರೆ. ಆ ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಸಂತ್ರಸ್ತ ಯುವತಿಗೆ ಐವರು ಯುವಕರು ಹಾಗೂ ಒಬ್ಬ ಮಹಿಳೆ ವಿಕೃತ ರೀತಿಯಲ್ಲಿ ಕಿರುಕುಳ ನೀಡಿದ್ದರು. ಈ ಕುರಿತ ವಿಡಿಯೋ ವೈರಲ್ ಆದ ಕೂಡಲೇ ರಾಷ್ಟ್ರ ಮಟ್ಟದಲ್ಲಿ ಪ್ರಕರಣ ಸದ್ದು ಮಾಡಿತ್ತು.
ಬಾಂಗ್ಲಾ ಯುವತಿ ಕೇರಳಗೆ ಹೋಗುವ ಮೊದಲೇ ಪೊಲೀಸರಿಗೆ "ಲಾಕ್" ಆಗಿದ್ದಳು!
ಕೂಡಲೇ ಎಚ್ಚೆತ್ತ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದರು. ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರ ಮೇಲೆ ಗುಂಡು ಹಾರಿಸಿ ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದರು. ಇದೀಗ ಸಂತ್ರಸ್ತ ಯುವತಿ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಧೀಶರ ಸಮ್ಮುಖದಲ್ಲಿ ಹೇಳಿಕೆ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.
ಒಬ್ಬ ಆರೋಪಿಗೆ ಕೋವಿಡ್ ಪಾಸಿಟಿವ್ : ಬಾಂಗ್ಲಾ ಯುವತಿ ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಐವರು ಆರೋಪಿಗಳಿಗೆ ಕೊರೊನಾ ಸೋಂಕು ದೃಢಪಡಿಸಲು ಪರೀಕ್ಷೆಗೆ ಒಳಪಡಿಸಲಾಗಿದೆ. ಒರ್ವ ಆರೋಪಿಗೆ ಕೊರೊನಾ ಸೋಂಕು ಪಾಸಿಟೀವ್ ಇರುವುದು ಬೆಳಕಿಗೆ ಬಂದಿದ್ದು, ಆತನನ್ನು ಪ್ರತ್ಯೇಕ ಸೆಲ್ ನಲ್ಲಿ ಇಡಲಾಗಿದೆ. ಉಳಿದಂತೆ ಈ ಪ್ರಕರಣದಲ್ಲಿ ಶಾಮೀಲಾಗಿರುವ ಇತರೆ ಇಬ್ಬರು ಮಹಿಳೆಯರನ್ನು ಕೂಡ ಪೊಲೀಸರು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.
Recommended Video
ಪೊಲೀಸರ ನಿರ್ಲಕ್ಷ್ಯತೆ : ಇನ್ನು ಈ ಪ್ರಕರಣ ಮೊದಲೇ ಪೊಲೀಸರಿಗೆ ಗೊತ್ತಿದ್ದರೂ ರಾಮಮೂರ್ತಿನಗರ ಪೊಲೀಸರು ಹಾಗೂ ಕೆ.ಆರ್. ಪುರಂ ಪೊಲೀಸರು ಕರ್ತವ್ಯ ಲೋಪ ಎಸಗಿರುವ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ಪಂತ್ ವರದಿ ತರಿಸಿಕೊಂಡಿದ್ದಾರೆ. ಘಟನೆ ಕುರಿತು ಮಾಹಿತಿ ಇದ್ದರೂ ಯಾವುದೇ ಕ್ರಮ ಜರುಗಿಸದೇ ಇರುವ ಪೊಲೀಸರ ಕರ್ತವ್ಯ ಲೋಪ ಕುರಿತು ವರದಿ ಕೇಳಿದ್ದಾರೆ. ವರದಿ ಹಿನ್ನೆಲೆಯಲ್ಲಿ ಪೊಲೀಸರ ವಿರುದ್ಧ ವಿಚಾರಣೆ ಆರಂಭವಾಗಿದೆ.