'ಬಾಡಿಗೆ ಗಣಪತಿ' ಹೀಗೊಂದು ಹೊಸ ಮಾದರಿ ವ್ಯಾಪಾರ
ಬೆಂಗಳೂರು, ಸೆಪ್ಟೆಂಬರ್ 10: ಗಣೇಶನ ಮೂರ್ತಿಯನ್ನು ನೀರಲ್ಲಿ ಮುಳುಗಿಸಿ 'ವಿಘ್ನೇಶನಿಗೆ ಜೈ' ಎಂಬಲ್ಲಿಗೆ ಗಣೇಶೋತ್ಸವ ಮುಗಿಯುತ್ತದೆ. ಇದು ಸಾಮಾನ್ಯ, ಆದರೆ ಗಣೇಶನನ್ನು ಕೂರಿಸಿ ಪೂಜೆ, ಪುನಸ್ಕಾರಗಳ ನಂತರ ಮೂರ್ತಿಯನ್ನು ತಂದಿದ್ದ ಅಂಗಡಿಗೆ ವಾಪಸ್ ಹೋಗಿ ಇಟ್ಟರೆ!
Recommended Video
ಹೀಗೊಂದು ಹೊಸ ಟ್ರೆಂಡ್ ಬೆಂಗಳೂರಿನಲ್ಲಿ ಪ್ರಾರಂಭವಾಗಿದೆ. ಗಣಪತಿ ಮೂರ್ತಿಗಳನ್ನು ಮಾರುವುದು ಸಾಮಾನ್ಯ, ಆದರೆ ಮೂರ್ತಿಗಳನ್ನು ಬಾಡಿಗೆಗೆ ಸಹ ನೀಡಲಾಗುತ್ತಿದೆ. ಮೂರ್ತಿಯನ್ನು ತೆಗೆದುಕೊಂಡು ಹೋದವರು ಅದನ್ನು ನೀರಲ್ಲಿ ಮುಳುಗಿಸುವ ಬದಲಿಗೆ ವಾಪಸ್ ತಂದು ಕೊಡುತ್ತಿದ್ದಾರೆ.
ಲಾಲ್ ಬಾಗ್ ಪಶ್ಚಿಮ ಗೇಟ್ ಸಮೀಪ ಜೆ.ಸಿ ರಸ್ತೆಗೆ ಕಡೆಗೆ ಹೋಗುವ ರಸ್ತೆಯಲ್ಲಿನ ವಿನಾಯಕ ಆಂಡ್ ಕಂಪೆನಿ ಎಂಬ ಗಣೇಶ ಮೂರ್ತಿ ಮಾರುವ ಮಳಿಗೆಯಲ್ಲಿ ಈ ಬಾಡಿಗೆ ವ್ಯವಸ್ಥೆ ಲಭ್ಯವಿದೆ. 18 ಅಡಿಗಿಂತಲೂ ದೊಡ್ಡ ಗಾತ್ರದ ಗಣೇಶ ಮೂರ್ತಿಗಳನ್ನು ದಿನದ ಲೆಕ್ಕದಲ್ಲಿ ಬಾಡಿಗೆಗೆ ನೀಡಲಾಗುತ್ತದೆ. ಸಣ್ಣ ಆಕಾರದ ಗಣೇಶ ಮೂರ್ತಿಗಳು ಬಾಡಿಗೆಗೆ ಲಭ್ಯವಿಲ್ಲ.
ದಿನವೊಂದಕ್ಕೆ 5000 ಸಾವಿರ ಬಾಡಿಗೆಗೆ ದೊಡ್ಡ-ದೊಡ್ಡ ಗಾತ್ರದ ಗಣೇಶ ಮೂರ್ತಿಗಳನ್ನು ಬಾಡಿಗೆಗೆ ನೀಡಲಾಗುತ್ತಿದೆ. ಗಾತ್ರ ದೊಡ್ಡದಾಷ್ಟು ಬಾಡಿಗೆ ಮೊತ್ತ ಹೆಚ್ಚಾಗುತ್ತದೆ. ಲಕ್ಷಾಂತರ ಹಣ ಕೊಟ್ಟು ದೊಡ್ಡ ಗಾತ್ರದ ಗಣೇಶನ ಮೂರ್ತಿ ಕೊಳ್ಳುವ ಬದಲಿಗೆ ಬಾಡಿಗೆಗೆ ತಂದು ಆಸೆ ತೀರಿಸಿಕೊಳ್ಳಬಹುದು.
'ದೊಡ್ಡ ಗಾತ್ರದ ಗಣೇಶನ ಮೂರ್ತಿ ಇಟ್ಟು ಉತ್ಸವ ಮಾಡುವುದು ಟ್ರೆಂಡ್, ದೊಡ್ಡ ಗಾತ್ರದ ಗಣೇಶ ಇಡುವುದು ಪ್ರತಿಷ್ಟೆಯಾಗಿಯೂ ಕೆಲವರು ಭಾವಿಸುತ್ತಾರೆ. ಆದರೆ ದೊಡ್ಡ ಗಾತ್ರದ ಗಣೇಶನ ಮೂರ್ತಿ ಕೊಳ್ಳಲು ದೊಡ್ಡ ಮೊತ್ತದ ಹಣ ವ್ಯಯಿಸಬೇಕು, ಅದರ ಬದಲಾಗಿ ಈ ರೀತಿ ಬಾಡಿಗೆಗೆ ಗಣೇಶ ಮೂರ್ತಿಗಳನ್ನು ಕೊಂಡೊಯ್ಯುತ್ತಾರೆ' ಎನ್ನುತ್ತಾರೆ ವಿನಾಯಕ ಆಂಡ್ ಕಂಪೆನಿಯ ನಂದಕಿಶೋರ್.
ಒಟ್ಟು ಹಣ ಅಡ್ವಾನ್ಸ್ ಆಗಿ ಪಡೆಯುತ್ತೇವೆ: ನಂದ ಕಿಶೋರ್
'ಗಣೇಶನ ಮೂರ್ತಿಯ ಒಟ್ಟು ಹಣವನ್ನು ಅಡ್ವಾನ್ಸ್ ಆಗಿ ಮೊದಲೇ ಪಡೆದುಕೊಂಡು ರಶೀದಿ ಕೊಟ್ಟಿರುತ್ತೇವೆ, ಗ್ರಾಹಕರು ಎಷ್ಟು ದಿನ ಬೇಕಾದರು ಗಣೇಶನನ್ನು ಇಟ್ಟುಕೊಂಡು ವಾಪಸ್ ಕೊಡಬಹುದು, ಕೊಡಬೇಕಾದರೆ ಬಾಡಿಗೆ ಹಣವನ್ನು ಜಮಾ ಹಾಕಿಕೊಂಡು ಉಳಿದ ಹಣ ವಾಪಸ್ ನೀಡುತ್ತೇವೆ' ಎಂದು ಹೇಳಿದರು ಅವರು.
ಬಾಡಿಗೆ ಗಣಪನನ್ನು ಪಿಒಪಿ ಅಥವಾ ಮಣ್ಣಿನಲ್ಲಿ ನಿರ್ಮಿಸುವುದಿಲ್ಲ
ಬಾಡಿಗೆಗೆ ನೀಡುವ ಗಣೇಶ ಮೂರ್ತಿಯನ್ನು ಮಣ್ಣು ಅಥವಾ ಪಿಓಪಿಯಲ್ಲಿ ನಿರ್ಮಿಸಿರುವುದಿಲ್ಲ ಬದಲಿಗೆ ಅದನ್ನು ಫೈಬರ್ ಬಳಸಿ ತಯಾರು ಮಾಡಲಾಗಿರುತ್ತದೆ. ಬಿಸಿಲು, ಮಳೆ, ಗಾಳಿ ಯಾವುದಕ್ಕೂ ಬಗ್ಗದೆ ಹೊಳಪನ್ನು ಹಾಗೆಯೇ ಉಳಿಸಿಕೊಂಡಿರುತ್ತದೆ.
ಗೋಧಾಮು ಲಾಕ್ ಮಾಡಿದೆ ಬಿಬಿಎಂಪಿ
ವಿನಾಯಕ ಆಂಡ್ ಕಂಪೆನಿ ಸದ್ಯಕ್ಕೆ ಕೆಲವಷ್ಟೆ ಗಣೇಶ ಮೂರ್ತಿಗಳನ್ನು ಬಾಡಿಗೆಗೆ ಕೊಡುತ್ತಿದ್ದಾರೆ. ಕುಂಬಳಗೋಡುವಿನಲ್ಲಿ ಅವರ ದೊಡ್ಡ ಗೊಧಾಮೊಂದಿದೆ. ಪಿಓಪಿ ಗಣೇಶ ಮಾರುತ್ತಿದ್ದೀರೆಂದು ಬಿಬಿಎಂಪಿ ಯವರು ಗೋಧಾಮು ಬೀಗ ಹಾಕಿಕೊಂಡು ಹೋಗಿದ್ದಾರಂತೆ ಅದರಲ್ಲಿ ಬಾಡಿಗೆಗೆ ನೀಡಲೆಂದು ತಯಾರಿಸಲಾಗಿದ್ದ ಫೈಬರ್ ಗಣೇಶ ಸಹ ಸೇರಿಕೊಂಡುಬಿಟ್ಟಿದೆ. ಕೆಲವು ಮಣ್ಣಿನ ಗಣಪತಿಗಳೂ ಸೇರಿಕೊಂಡು ಬಿಟ್ಟಿವೆ ಎಂದು ಬೇಸರದಿಂದ ಹೇಳುತ್ತಾರೆ ನಂದ ಕಿಶೋರ್.
ಬಾಡಿಗೆ ಗಣೇಶನಿಗೆ ಒಳ್ಳೆಯ ಡಿಮ್ಯಾಂಡ ಸಹ ಇದೆಯಂತೆ
ದೊಡ್ಡ ಸಂಘ ಸಂಸ್ಥೆಗಳು, ಏರಿಯಾದಲ್ಲಿ ಗಣೇಶ ಕೂರಿಸುವ ಉತ್ಸಾಹಿ ಯುವಕರ ಗುಂಪುಗಳು, ಗಣೇಶ ಬಾಡಿಗೆಗೆ ತೆಗೆದುಕೊಂಡು ಹೋಗುತ್ತಾರೆ, ಸಾಮಾನ್ಯವಾಗಿ ಐದು- ಆರು ದಿನ ಇಟ್ಟುಕೊಂಡು ವಾಪಸ್ ತಂದುಕೊಡುತ್ತಾರೆ ಎಂದು ಅವರು ಮಾಹಿತಿ ನೀಡುತ್ತಾರೆ. ಬಾಡಿಗೆ ಗಣೇಶನಿಗೆ ಒಳ್ಳೆಯ ಡಿಮ್ಯಾಂಡ ಸಹ ಇದೆಯಂತೆ.
'ಒಂದು ಸಣ್ಣ ಗಣೇಶನನ್ನೂ ತೆಗೆದುಕೊಂಡು ಹೋಗುತ್ತಾರೆ'
'ಹೀಗೆ ಬಾಡಿಗೆಗೆ ಗಣೇಶ ತೆಗೆದುಕೊಂಡು ಹೋಗುವಾಗ ಜೊತೆಗೆ ಒಂದು ಸಣ್ಣ ಗಣೇಶನ ಮೂರ್ತಿಯನ್ನೂ ಕಡ್ಡಾಯವಾಗಿ ತೆಗೆದುಕೊಂಡು ಹೋಗುತ್ತಾರೆ. ದೊಡ್ಡ ಗಣೇಶನನ್ನು ವಾಪಸ್ ತಂದು ಕೊಟ್ಟರೆ ಸಣ್ಣ ಗಣೇಶನನ್ನು ನೀರಿಗೆ ಬಿಟ್ಟು ಸಂಪ್ರದಾಯ ಪಾಲಿಸುತ್ತಾರೆ' ಎನ್ನುತ್ತಾರೆ ನಂದ ಕಿಶೋರ್.
ಇದಕ್ಕೂ ವಿಘ್ನ ಎದುರಾಗುತ್ತದೆಯಾ?
ಭಾರಿ ಗಾತ್ರದ ಗಣೇಶನ ಮುಳುಗಿಸಲು ನೀರಿನ ಮೂಲಗಳೇ ಇಲ್ಲವಾಗಿರುವ ಹೊತ್ತಿನಲ್ಲಿ ಆ ದೃಷ್ಟಿಯಿಂದಾದರೂ 'ಬಾಡಿಗೆ ಗಣೇಶ' ಹಲವರಿಗೆ ಸಹಕಾರಿ. ಏರಿಯಾದಲ್ಲಿ ದೊಡ್ಡ ಗಣೇಶ ಇಡುವ ಆಸೆಯ ಹುಡುಗರಿಗೂ ಇದು ಉಪಕಾರಿ. ಮುಂದಿನ ದಿನಗಳಲ್ಲಿ 'ಬಾಡಿಗೆ ಗಣೇಶ' ಮಾದರಿ ಯಶಸ್ವಿಯಾಗುತ್ತದೆಯೋ ಅಥವಾ ಅದಕ್ಕೂ ಯಾವುದಾರೂ ವಿಘ್ನ ಎದುರಾಗುತ್ತದೆಯೋ ನೋಡಬೇಕು.