ಗಣೇಶನಿಗೂ ತಟ್ಟಲಿದೆಯೇ ಪ್ರವಾಹದ ಬಿಸಿ? ಗಣಪನ ವಿಗ್ರಹ ಈ ಬಾರಿ ದುಬಾರಿ!
ಬೆಂಗಳೂರು, ಆಗಸ್ಟ್ 23: ಇನ್ನೇನು ಕೆಲ ದಿನಗಳಲ್ಲೇ ಗಣೇಶ ಚತುರ್ಥಿ ಬರಲಿದೆ. ಗಣಪನನ್ನು ಸ್ವಾಗತಿಸಲು ಜನರೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಬಾರಿ ಹಬ್ಬ ಮಾಮೂಲಿಗಿಂತ ಹೆಚ್ಚೇ ದುಬಾರಿಯಾಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಗಣಪನ ವಿಗ್ರಹದ ಬೆಲೆ ಹೆಚ್ಚುವ ಸಾಧ್ಯತೆಯೂ ಇದೆ.
ರಾಜ್ಯದಲ್ಲಿ ಸಂಭವಿಸಿದ ಮಳೆ, ಪ್ರವಾಹ ಗಣೇಶನ ವಿಗ್ರಹಗಳ ಬೆಲೆಯಲ್ಲೂ ಏರಿಕೆ ಕಾಣಿಸುವ ಸಾಧ್ಯತೆಯಿದೆ. ಈ ವರ್ಷ ಗಣೇಶನ ಹಬ್ಬಕ್ಕೆಂದು ತಯಾರಿಸಿಟ್ಟಿದ್ದ ಹಾಗೂ ತಯಾರಿಯಲ್ಲಿದ್ದ ಎಷ್ಟೋ ವಿಗ್ರಹಗಳು ಹಲವೆಡೆ ಪ್ರವಾಹದ ಪಾಲಾಗಿವೆ. ಹೀಗಾಗಿ ಬೆಲೆ ಸಹಜವಾಗಿಯೇ ಹೆಚ್ಚಿರಲಿದೆ. ಈಗ ಮತ್ತೆ ತಯಾರಿ ನಡೆಯುತ್ತಿದ್ದು, ಇದು ವಿಗ್ರಹಗಳ ಬೆಲೆ ಹೆಚ್ಚಲು ಕಾರಣವಾಗಲಿದೆ.
ಪಿಓಪಿ ವಿಗ್ರಹ ತ್ಯಜಿಸೋಣ; ಪರಿಸರ ಸ್ನೇಹಿ ಗಣೇಶೋತ್ಸವ ಮಾಡೋಣ
ಹದಿನೈದು ದಿನ ನಿರಂತರವಾಗಿ ಮಳೆಯಾಗಿದ್ದು, ಗಣೇಶನ ವಿಗ್ರಹ ತಯಾರಿ ಮೊಟಕುಗೊಂಡಿತ್ತು. ಅನಿರೀಕ್ಷಿತವಾಗಿ ಈ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ವಿಗ್ರಹ ತಯಾರಿಯ ಎಲ್ಲಾ ಸಿದ್ಧತೆಗಳೂ ಕೈಕೊಟ್ಟವು.
ಅಷ್ಟೇ ಅಲ್ಲ, ಭಾರೀ ಮಳೆ ಸುರಿದ ನಂತರ ಗಣೇಶನ ವಿಗ್ರಹಗಳನ್ನು ತಯಾರು ಮಾಡಿರುವ ಕಲಾವಿದರಿಗೆ ಅವುಗಳನ್ನು ರಕ್ಷಿಸಿಟ್ಟುಕೊಳ್ಳುವುದೂ ಸಮಸ್ಯೆಯೇ ಆಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅವುಗಳನ್ನು ಕಾಪಾಡಿಕೊಳ್ಳುವುದೇ ಸವಾಲಾಗಿದೆ.
ಗಣೇಶನ ಹಬ್ಬಕ್ಕೂ ಸುಬ್ಬನಿಗೂ ಏನ್ ನಂಟು ಅಂತೀರಿ!
ಗಣಪನ ವಿಗ್ರಹದ ತಯಾರಿ ನಂತರ ಅವುಗಳಿಗೆ ಬಣ್ಣ ಬಳಿಯಬೇಕು. ಬಣ್ಣ ಬಳಿಯಲು ವಿಗ್ರಹ ಪೂರ್ತಿ ಒಣಗಬೇಕು. ನಿರಂತರ ಸುರಿಯುತ್ತಿರುವ ಮಳೆ ಒಣಗಲು ಅವಕಾಶ ನೀಡುತ್ತಿಲ್ಲ. ಸದ್ಯಕ್ಕೆ ಬೇರೆ ದಾರಿಯಿಲ್ಲದೇ ವಿಗ್ರಹಗಳನ್ನು ಒಣಗಿಸಲು ಡ್ರೈಯರ್ ಬಳಸಲಾಗುತ್ತಿದೆ. ಇವುಗಳನ್ನು ಇಡಲು ಗೋಡೌನ್ ಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಹೀಗಾಗಿ ಈ ವೆಚ್ಚವೆಲ್ಲವೂ ಗ್ರಾಹಕರ ಮೇಲೆ ಬೀಳಲಿದೆ.