ಬೆಂಗಳೂರು ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂನಿಂದ ಮಾರ್ಗಸೂಚಿ ಬಿಡುಗಡೆ
ಬೆಂಗಳೂರು, ಆಗಸ್ಟ್ 29: ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡುವ ಕುರಿತಂತೆ ಬೆಸ್ಕಾಂ ಕಟ್ಟು ನಿಟ್ಟಿನ ನಿಯಮಾವಳಿಗಳನ್ನು ಜಾರಿಗೆ ತಂದಿದೆ.
ಬೆಂಗಳೂರು ನಗರ ಪೊಲೀಸ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಆಗಸ್ಟ್ 25 ಗುರುವಾರ ನಗರದಲ್ಲಿ ಜಂಟಿಯಾಗಿ ಆಯೋಜಿಸಿದ್ದ ಗಣೇಶೋತ್ಸವ ಸಾರ್ವಜನಿಕ ಶಾಂತಿ ಸೌಹಾರ್ದ ಸಭೆಯಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಮತ್ತು ನಿರ್ದೇಶಕ ತಾಂತ್ರಿಕ ಡಿ. ನಾಗಾರ್ಜುನ ಅವರು ಭಾಗವಹಿಸಿದ್ದರು, ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ನೀಡುವ ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ರೂಪಿಸಿರುವ ನಿಯಾಮವಳಿಗಳನ್ನು ಬೆಸ್ಕಾಂ ನಿರ್ದೇಶಕರು (ತಾಂತ್ರಿಕ) ಸಭೆಯ ಗಮನಕ್ಕೆ ತಂದಿದ್ದರು.
ಗಣೇಶೋತ್ಸವ ಸಮಾರಂಭದ ಆಯೋಜಕರು / ಸಂಘಟಕರು ಸಂಬಂಧಪಟ್ಟ ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಿಂದ ನಿರಾಕ್ಷೇಪಣಾಪತ್ರವನ್ನು ಪಡೆದು ಬೆಸ್ಕಾಂನ ಸಂಬಂಧಪಟ್ಟ ಉಪ ವಿಭಾಗದಲ್ಲಿ ಸಲ್ಲಿಸಲು ಸೂಚಿಸಲಾಗಿದೆ. ಸಂಬಂಧಪಟ್ಟ ಉಪವಿಭಾಗದಲ್ಲಿ ನೀಡಲಾದ ವಿದ್ಯುತ್ ಮಂಜೂರಾತಿ ಪತ್ರದ ಅನುಸಾರ ಅಗತ್ಯ ಶುಲ್ಕವನ್ನು ಬೆಸ್ಕಾಂಗೆ ಪಾವತಿಸಲು ಆಯೋಜಕರಿಗೆ ತಿಳಿಸಿದೆ.
ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯುವ ಮುನ್ನ ಬೆಸ್ಕಾಂ ಕ್ಷೇತ್ರಾಧಿಕಾರಿಗಳಿಗೆ ಸಮಾರಂಭದ ಸ್ಥಳ ಪರಿಶೀಲನೆ ಮತ್ತು ತಪಾಸಣೆ ಮಾಡಲು ವ್ಯವಸ್ಥೆ ಕಲ್ಪಿಸಬೇಕು. ಭೂಗತ ಕೇಬಲ್ ಅನ್ನು ಉಪಯೋಗಿಸಿಕೊಂಡು ಓವರ್ ಹೆಡ್ ಮಾರ್ಗದಲ್ಲಿ ಎಳೆದು ವಿದ್ಯುತ್ ಸಂಪರ್ಕ ಪಡೆಯಲು ಸಂಘಟಕರಿಗೆ ಸೂಚಿಸಲಾಗಿದೆ. ಅಲ್ಲದೆ ಒವರ್ ಹೆಡ್ ಮಾರ್ಗದ ಸುರಕ್ಷತೆಯ ಹಿತದೃಷ್ಟಿಯಿಂದ ಯಾವುದೇ ರೀತಿಯ ಜಾಯಿಂಟ್ ಇಲ್ಲದೆ, ವಿದ್ಯುತ್ ಸೊರಿಕೆಯಾಗದೇ ಇರುವುದನ್ನು ಸಂಘಟಕರು ಖಚಿತ ಪಡಿಸಿಕೊಳ್ಳ ಬೇಕು.
ವಿದ್ಯುತ್ ಪರಿವೀಕ್ಷಕರಿಂದ ಅನುಮತಿ ಪತ್ರ ಕಡ್ಡಾಯ
ವಿದ್ಯುತ್ ಸಂಪರ್ಕವನ್ನು ಪಡೆಯುವ ಸಂದರ್ಭದಲ್ಲಿ ನೊಂದಾಯಿತ ವಿದ್ಯುತ್ ಗುತ್ತಿಗೆದಾರರಿಂದ ವೈರಿಂಗ್ ಮತ್ತು ಎಲ್.ಸಿ.ಬಿ / ಇ.ಎಲ್.ಸಿ.ಬಿ ಸಾಧನವನ್ನು ಅಳವಡಿಸಿಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ. ಗಣಪತಿ ಪ್ರತಿಷ್ಠಾಪನೆ ಮಾಡುವ ಸ್ಥಳದ ಸುತ್ತ-ಮುತ್ತ ಯಾವುದೇ ಇ.ಹೆಚ್.ಟಿ / ಹೆಚ್.ಟಿ / ಎಲ್.ಟಿ ವಿದ್ಯುತ್ ಮಾರ್ಗಗಳಿಲ್ಲದಿರುವುದನ್ನು ಖಚಿತಪಡಿಸಿಕೊಳ್ಳುವುದು, ಉತ್ಸವಗಳು ನಡೆಯುವ ಸಂದರ್ಭದಲ್ಲಿ 100 ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಜನಸಾಂದ್ರತೆ ಸೇರುವ ಸಾಧ್ಯತೆ ಇದ್ದಲ್ಲಿ ಕಡ್ಡಾಯವಾಗಿ ಸಂಬಂಧಪಟ್ಟ ಕರ್ನಾಟಕ ಸರ್ಕಾರದ ವಿದ್ಯುತ್ ಪರಿವೀಕ್ಷಕರಿಂದ ಅನುಮತಿ ಪತ್ರವನ್ನು ಪಡೆದು ಕೊಳ್ಳಬೇಕು ಮತ್ತು ಅಗ್ನಿ ಶಾಮಕ ಸಾಧನವನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ.
ಅನಾಹುತಗಳಿಗೆ ಆಯೋಜಕರೇ ನೇರ ಹೊಣೆ
ಗಣೇಶ ಪ್ರತಿಷ್ಟಾಪಿಸುವ ಸ್ಥಳದಲ್ಲಿ 100 ಕ್ಕಿಂತ ಕಡಿಮೆ ಜನ ಸಾಂದ್ರತೆ ಇದ್ದಲ್ಲಿ ಹೆಚ್ಚು ಜನ ಸಾಂದ್ರತೆ ಸೇರಲು ಸ್ಥಳಾವಕಾಶವಿಲ್ಲ ಎಂದು ಆಯೋಜಕರು ಬೆಸ್ಕಾಂಗೆ ಮುಚ್ಚಳಿಕೆ ಪತ್ರ ಬರೆದುಕೊಡಬೇಕು. ಹಾಗೆಯೇ ವಿದ್ಯುತ್ ಸಂಬಂಧಿಸಿದ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಕಾರ್ಯಕ್ರಮ ಆಯೋಜಕರೇ ಜವಾಬ್ದಾರರೆಂದು ನಿಯಮಾವಳಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಯಾವುದೇ ರೀತಿಯ ಅನಧೀಕೃತ ಅಥವಾ ಅಕ್ರಮ ಮಂಜೂರಾದ ವಿದ್ಯುತ್ ಬಾರಕ್ಕಿಂತ ಹೆಚ್ಚವರಿಯಾಗಿ ವಿದ್ಯುತ್ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ.
ಬೆಸ್ಕಾಂ ಸಹಾಯವಾಣಿ 1912ಗೆ ಕರೆಮಾಡಿ
ಗಣೇಶ ವಿಗ್ರಹವನ್ನು ಬೀದಿಗಳಲ್ಲಿ ಮೆರವಣೆಗೆ ಮಾಡುವ ರಸ್ತೆಯ ನಕ್ಷೆ ಮತ್ತು ದಿನಾಂಕವನ್ನು ಮೊದಲೇ ಕಾರ್ಯಕ್ರಮದ ಆಯೋಜಕರು ನಿಗದಿಪಡಿಸಿಕೊಂಡು, ಸಂಬಂಧಪಟ್ಟ ಬೆಸ್ಕಾಂ ಉಪ-ವಿಭಾಗದ ಅಧಿಕಾರಿಗಳಿಗೆ ನೀಡಲು ಸೂಚಿಸಲಾಗಿದೆ.
ಸುರಕ್ಷತಾ ಮುನ್ನೆಚ್ಚರಿಕೆ ನಿಯಾವಳಿಗಳು: ಸಾರ್ವಜನಿಕರು ಗಣೇಶೋತ್ಸವದ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಂದರ್ಭಗಳಲ್ಲಿ ವಿದ್ಯುತ್ ಉಪಕರಣಗಳು ಹಾಗೂ ವಿದ್ಯುತ್ ತಂತಿಗಳಿಂದ ದೂರವಿರಬೇಕು. ಯಾವುದಾದರು ವಿದ್ಯುತ್ ಮಾರ್ಗವು ತುಂಡಾಗಿದ್ದರೆ ಅಥವಾ ಹಾನಿಗೀಡಾಗಿದ್ದರೆ ತಕ್ಷಣ ಬೆಸ್ಕಾಂ ಸಹಾಯವಾಣಿ 1912ಗೆ ಕರೆಮಾಡಿ ತಿಳಿಸಲು ಸಂಘಟಕರಿಗೆ ತಿಳಿಸಲಾಗಿದೆ.
ಯಾವುದೇ ವಿದ್ಯುತ್ ಉಪಕರಣಗಳನ್ನು ಒದ್ದೆ ಇರುವ ಕೈಗಳಲ್ಲಿ ಮುಟ್ಟಬಾರದು ಹಾಗೂ ಮಕ್ಕಳನ್ನು ವಿದ್ಯುತ್ ಉಪಕರಣಗಳು ಇರುವ ಜಾಗದಿಂದ ದೂರವಿರಿಸಬೇಕು ಎಂದು ಸುರಕ್ಷತಾ ನಿಯಾಮಾವಳಿಗಳಲ್ಲಿ ಸೂಚಿಸಲಾಗಿದೆ.
ಸಂಘಟಕರಿಗೆ ಕಠಿಣ ನಿಬಂಧನೆಯ ಹೊಣೆ
ವಿದ್ಯುತ್ ಕಂಬಗಳಿಗೆ, ಪರಿವರ್ತಕ ಕೇಂದ್ರಗಳಿಗೆ ಸಾರ್ವಜನಿಕ ಪ್ರಕಟಣೆಯ ಬ್ಯಾನರ್ ಮತ್ತು ಫಲಕಗಳನ್ನು ಕಟ್ಟಬಾರದು ಎಂದು ಗಣೇಶೋತ್ಸವ ಅಯೋಜಕರಿಗೆ ಸೂಚಿಸಲಾಗಿದೆ. ಗಣೇಶ ಪ್ರತಿಷ್ಠಾಪನೆ ಮಾಡುವ ಸ್ಥಳದಲ್ಲಿ ವಿದ್ಯುತ್ ತಂತಿಗಳ ಮೇಲಿರುವ ಮರಗಳು ಮತ್ತು ಕೊಂಬೆಗಳನ್ನು ತೆಗೆಯಬಾರದು ಎಂದು ಸಂಘಟಕರಿಗೆ ತಿಳಿಸಲಾಗಿದೆ. ವಿದ್ಯುತ್ ಸ್ವಿಚ್ ಗಳು ಮತ್ತು ಅಲಂಕಾರಿಕಾ ವಿದ್ಯುತ್ ಬಲ್ಬ್ಗಳು ಮತ್ತು ಲೈಟ್ಗಳು ದುರಸ್ಥಿಯಾದ ಸಂದರ್ಭದಲ್ಲಿ ಸಾರ್ವಜನಿಕರು ಅದನ್ನು ದುರಸ್ಥಿಮಾಡದೇ ಪರಿಣಿತ ಇಲೆಕ್ಟ್ರಿಷಿಯನ್ ಮುಖಾಂತರ ಸರಿಪಡಿಸಿಕೊಳ್ಳಲು ಗಣೇಶೋತ್ಸವ ಸಂಘಟಕರಿಗೆ ಸೂಚಿಸಲಾಗಿದೆ.