5 ವರ್ಷಗಳ ನಂತರ ಗಾಲಿ ರೆಡ್ಡಿ, ಬಂಧುಗಳೇ ಅಂದಾಗ!
ಬಂಧುಗಳೇ, ಏನು ಈ ಐದು ವರ್ಷ ನಡೆಯಿತು ಎನ್ನೋದನ್ನಾ ಮರೆತುಬಿಟ್ಟಿದ್ದೀನಿ. ನಾನು ಇವತ್ತು ಇಲ್ಲಿ ನಿಲ್ಲಲು 'ರೆಡ್ಡಿ' ಅನ್ನುವುದೇ ಕಾರಣ...ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭರ್ಜರಿ ಭಾಷಣ, ರೆಡ್ಡಿ ಜನ ಸಂಘದ ಸಮಾವೇಶ ಮುಖ್ಯ ಆಕರ್ಷಣೆಯಾಗಿತ್ತು
ಬೆಂಗಳೂರು, ಜನವರಿ 30: ರೆಡ್ಡಿ ಜನ ಸಂಘದ ಪ್ರಪ್ರಥಮ ಸಮಾವೇಶದಲ್ಲಿ ಹೇಗೆಲ್ಲ ಮಿಂಚಬೇಕು ಎಂದು ಯಾರೆಲ್ಲ ಯೋಜನೆ ಹಾಕಿಕೊಂಡಿದ್ರೋ ಗೊತ್ತಿಲ್ಲ. ಆದರೆ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಸರಿ ಸುಮಾರು ಐದು ವರ್ಷಗಳ ಬಳಿಕ ಬೃಹತ್ ಸಮಾವೇಶದಲ್ಲಿ ಕಾಣಿಸಿಕೊಂಡಿದ್ದಲ್ಲದೆ, ಮೈಕ್ ಹಿಡಿದು ಕ್ವಿಕ್ ಆಗಿ ಭಾಷಣ ಮಾಡಿ ಭಾರಿ ಚಪ್ಪಾಳೆ ಗಿಟ್ಟಿಸಿಕೊಂಡರು.
ಮಾಜಿ ಮುಖ್ಯಮಂತ್ರಿ ಹಾಲಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರನ್ನು ಸ್ವಾಗತಿಸಿ ವೇದಿಕೆಗೆ ಕರೆ ತಂದ ಸತೀಶ್ ರೆಡ್ಡಿ ಅವರ ಹಿಂಬದಿಯಲ್ಲೇ ಇದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಏನು ಹುಕ್ಕಿ ಬಂತೋ ಗೊತ್ತಿಲ್ಲ.[ರೆಡ್ಡಿ ಸಮುದಾಯಕ್ಕೆ ಆಶ್ವಾಸನೆ ಕೊಟ್ಟ ಸಿದ್ದರಾಮಯ್ಯ]
ಮೈಕ್ ಹತ್ತಿರಕ್ಕೆ ಬಂದು, ಬಂಧುಗಳೇ ಎನ್ನುತ್ತಿದ್ದಂತೆ, ಭಾರಿ ಚಪ್ಪಾಳೆಯ ಸ್ವಾಗತ ಸಿಕ್ಕಿತು. ಒಂದು ಕ್ಷಣ ಬಿಜೆಪಿಯ ಹಿರಿ-ಕಿರಿ ತಲೆಗಳತ್ತ ಅತ್ತ ತಿರುಗಿ ನೋಡುವಂತಾಯಿತು. ಭಾಷಣ ಮುಂದುವರೆಸಿದ ಗಾಲಿ ರೆಡ್ಡಿ, ಏನು ಈ ಐದು ವರ್ಷ ನಡೆಯಿತು ಎನ್ನೋದನ್ನಾ ಮರೆತುಬಿಟ್ಟಿದ್ದೀನಿ. ನಾನು ಇವತ್ತು ಇಲ್ಲಿ ನಿಲ್ಲಲು 'ರೆಡ್ಡಿ' ಅನ್ನುವುದೇ ಕಾರಣ, ನನ್ನನ್ನು ಈ ಮಟ್ಟಕ್ಕೆ ತಂದಿತ್ತು, ನನಗೆ ಗೌರವ ನೀಡುತ್ತಿರುವುದಕ್ಕೆ ರೆಡ್ಡಿ ಅನ್ನುವುದೇ ಕಾರಣ ಎಂದರು.
ನಾನೇನು ರಾಜಕೀಯವಾಗಿ ಬೆಳೆದು ಸಿಎಂ ಆಗಬೇಕಾಗಿಲ್ಲ. ರಾಜಕೀಯವಾಗಿ ಯಾವ ಆಶೆನೂ ಉಳಿದಿಲ್ಲ. ನಾನು ನನ್ನ ಸಮುದಾಯಕ್ಕೆ ಮುಂದಿನ ಅವಧಿಯನ್ನು ಮೀಸಲಿಡುತ್ತೇನೆ. ನನ್ನ ಸಮುದಾಯ ಚಿನ್ನಕ್ಕೆ ಸಮನಾಗಿದೆ ಎಂದರು.
ಸಮಾವೇಶದಲ್ಲಿ ರೆಡ್ಡಿ ಸಮುದಾಯವನ್ನು 2ಎಗೆ ಸೇರಿಸಬೇಕು, ಕೇಂದ್ರ ಮೀಸಲಾತಿ ನೀತಿಯಡಿ ಒಬಿಸಿ ಸೇರಿಸಬೇಕು, ಮಹಾಯೋಗಿ ವೇಮನ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಸರ್ಕಾರ ವತಿಯಿಂದ ಆಚರಿಸಬೇಕು ಎಂಬುದು ಬಹುಕಾಲದ ಬೇಡಿಕೆ ಎಂದು ಹೇಳಿ ಮೈಕ್ ಬಿಟ್ಟು ಸರಿದರು.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಸಚಿವ ಎಂಬಿ ಪಾಟೀಲ್, ಮಾಜಿ ಸಚಿವ ಜನಾರ್ದನ ರೆಡ್ಡಿ, ಪರಿಸರವಾದಿ ಯಲ್ಲಪ್ಪ ರೆಡ್ಡಿ ಸೇರಿದಂತೆ ಅನೇಕ ಗಣ್ಯರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.