ರಮೇಶ್ ಜಾರಕಿಹೊಳಿ ಪರ ಡಿಕೆ.ಶಿವಕುಮಾರ್ ಬಳಿ ಪರಮೇಶ್ವರ್ ಮಾತುಕತೆ
ಬೆಂಗಳೂರು, ಏಪ್ರಿಲ್ 25: ರಮೇಶ್ ಜಾರಕಿಹೊಳಿ ಅವರನ್ನು ಭಿನ್ನಾಭಿಪ್ರಾಯ ಬಗೆಹರಿಸುತ್ತೇನೆ ಎಂದು ನಿನ್ನೆ ತಾನೆ ಹೇಳಿಕೆ ನೀಡಿದ್ದ ಉಪಮುಖ್ಯಮಂತ್ರಿ ಪರಮೇಶ್ವರ್ ಇಂದಾಗಲೇ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ರಮೇಶ್ ಜಾರಕಿಹೊಳಿ ಅವರ ವಿರೋಧಿಯಾಗಿರುವ ಡಿ.ಕೆ.ಶಿವಕುಮಾರ್ ಅವರ ಮನೆಗೆ ಇಂದು ಬೆಳಿಗ್ಗೆ ಜಿ.ಪರಮೇಶ್ವರ್ ಅವರು ಭೇಟಿ ನೀಡಿದ್ದು, ರಮೇಶ್ ಜಾರಕಿಹೊಳಿ ಪರವಾಗಿ ಸಂಧಾನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಡಿಕೆ.ಶಿವಕುಮಾರ್ ಅವರು ಬೆಳಗಾವಿಯ ಉಸ್ತುವಾರಿ ಸಚಿವರಾಗಿ ನೇಮಕವಾಗಿ ಪಿಎಲ್ಡಿ ಬ್ಯಾಂಕ್ ವಿಚಾರದಲ್ಲಿ ಅವರು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬೆಂಬಲ ನೀಡಿದಾಗಲೇ ಮೊದಲ ಬಾರಿಗೆ ರಮೇಶ್ ಜಾರಕಿಹೊಳಿ ಅವರಿಗೆ ಪಕ್ಷದ ಮೇಲೆ ಅಸಮಾಧಾನ ಪ್ರಾರಂಭವಾಗಿದ್ದು, ಅಂದಿನ ವರೆಗೆ ಚೆನ್ನಾಗಿದ್ದ ರಮೇಶ್ ಜಾರಕಿಹೊಳಿ, ಡಿಕೆ.ಶಿವಕುಮಾರ್ ಸಂಬಂಧ ಆ ನಂತರ ಹಳಸಿತ್ತು.
ಹಾಗಾಗಿಯೇ ಇಂದು ಪರಮೇಶ್ವರ್ ಅವರು ರಮೇಶ್ ಜಾರಕಿಹೊಳಿ ಅವರ ಪರ ವಕಾಲತ್ತು ವಹಿಸಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಸಂಧಾನದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಮೈತ್ರಿ ನಾಯಕರಲ್ಲಿ ಆತಂಕ ಮೂಡಿಸಿದ ರಮೇಶ್
ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಬೆದರಿಕೆ ಹಾಕಿರುವ ಕಾರಣ ಸಹಜವಾಗಿಯೇ ಮೈತ್ರಿ ನಾಯಕರಲ್ಲಿ ಆತಂಕ ಮೂಡಿದ್ದು, ಪರಮೇಶ್ವರ್ ಅವರು ಜವಾಬ್ದಾರಿ ಹೊತ್ತು ರಮೇಶ್ ಅವರ ಅಸಮಾಧಾನವನ್ನು ಮಾತುಕತೆಯ ಮೂಲಕ ಬಗೆಹರಿಸುವ ಯತ್ನವನ್ನು ಮಾಡುತ್ತಿದ್ದಾರೆ.
ಡಿಕೆಶಿ ನನ್ನ ಲೆವೆಲ್ ನಾಯಕರಲ್ಲ:ರಮೇಶ್
ಡಿ.ಕೆ.ಶಿವಕುಮಾರ್ ಅವರ ಕುರಿತು ತೀವ್ರ ಅಸಮಾಧಾನವನ್ನು ನಿನ್ನೆಯಷ್ಟೆ ಹೊರಹಾಕಿದ್ದ ರಮೇಶ್ ಜಾರಕಿಹೊಳಿ, 'ಡಿಕೆ ಶಿವಕುಮಾರ್ ನನ್ನ ಲೆವೆಲ್ನ ನಾಯಕನಲ್ಲ, ನನ್ನ ನಾಯಕರೇನಿದ್ದರು ರಾಹುಲ್ ಗಾಂಧಿ' ಎಂದು ಹೇಳಿದ್ದರು.
ರಮೇಶ್ ಜಾರಕಿಹೊಳಿ ಬಗ್ಗೆ ವ್ಯಂಗ್ಯದ ಡಿಕೆಶಿ ಹೇಳಿಕೆ
ಆದರೆ ಡಿ.ಕೆ.ಶಿವಕುಮಾರ್ ಅವರು ರಮೇಶ್ ಜಾರಕಿಹೊಳಿ ಅವರ ಕುರಿತಾದ ಯಾವುದೇ ಆಕ್ರೋಶ ಭರಿತ ಹೇಳಿಕೆಗಳನ್ನು ನೀಡುತ್ತಿಲ್ಲ, ಬದಲಿಗೆ ವ್ಯಂಗ್ಯದಿಂದ ಕೂಡಿದ ಸೌಮ್ಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂದು ಮಾಧ್ಯಮಗಳೊಟ್ಟಿಗೆ ಮಾತನಾಡಿದ ಡಿಕೆಶಿ, 'ರಮೇಶ್ ಜಾರಕಿಹೊಳಿ ಅವರು ಎರಡು ಏಟು ನನ್ನನ್ನು ಹೊಡೆದು ಬಿಡಲಿ ಪರವಾಗಿಲ್ಲ' ಎಂದು ಹೇಳಿದ್ದಾರೆ.
ಬದಲಾಗುತ್ತಿರುವ ಬೆಳಗಾವಿ ರಾಜಕೀಯ
ಬೆಳಗಾವಿಯ ರಾಜಕೀಯ ಪ್ರತಿದಿನ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಕೆಲವು ದಿನಗಳ ಹಿಂದೆ ರಾಜೀನಾಮೆ ಬಗ್ಗೆ ಗಟ್ಟಿ ಮಾತಾಡಿದ್ದ ರಮೇಶ್ ಜಾರಕಿಹೊಳಿ, ಈಗ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದು, ರಾಜೀನಾಮೆ ನೀಡುತ್ತೇನೆ ಆದರೆ ಈಗಲೇ ಅಲ್ಲ ಎಂದು ಹೇಳಿಕೆ ಬದಲಾಯಿಸಿದ್ದಾರೆ.