ಸಬ್ಅರ್ಬನ್ ರೈಲು ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುದಾನ ಅನುಮಾನ
ಬೆಂಗಳೂರು, ಫೆಬ್ರವರಿ 5: ಸಬ್ಅರ್ಬನ್ ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುದಾನ ಬರುವುದು ಅನುಮಾನವಾಗಿದೆ.
ರಾಜಧಾನಿಯ ಉಪನಗರ ರೈಲು ಯೋಜನೆಯಲ್ಲಿ ಕೇಂದ್ರ ತನ್ನ ಪಾಲಿನ ಶೇ.20ರಷ್ಟು ಅನುದಾನವನ್ನು ಯೋಜನೆಗೆ ನೀಡುವ ರೈಲ್ವೆ ಭೂಮಿಗೆ ಸರಿದೂಗಿಸಲು ಮುಂದಾಗಿದೆ ಎನ್ನಲಾಗುತ್ತಿದ್ದು, ಇದರಿಂದ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೊರೆ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ.
ಉಪನಗರ ರೈಲು ಯೋಜನೆ ಈಗಾಗಲೇ ವಿಳಂಬವಾಗಿರುವುದರಿಂದ ಮತ್ತಷ್ಟು ಸಮಯ ವ್ಯಯಿಸದೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಚರ್ಚಿಸಿ ಯೋಜನಾ ವೆಚ್ಚ ಹಂಚಿಕೆಯ ಗೊಂದಲ ಬಗೆಹರಿಸಿಕೊಳ್ಳಬೇಕು.
ಸಬರ್ಬನ್ ರೈಲು ಯೋಜನೆ: ಬರಲಿವೆ ಕೇವಲ 57 ನಿಲ್ದಾಣಗಳು
ಹಾಗೆಯೇ ಕೇಂದ್ರ ಸರ್ಕಾರ ಕೂಡಲೇ ಯೋಜನೆಗೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ಕೊಡಿಸಬೇಕು ಎಂದು ರೈಲ್ವೆ ಹೋರಾಟಗಾರರು ಒತ್ತಾಯಿಸಿದ್ದಾರೆ.
ರೈಲ್ವೆ ಮಂಡಳಿಯ ಅನುಮೋದನೆ
ಕೇಂದ್ರ ಬಜೆಟ್ನಲ್ಲಿ ಮೂರು ಬಾರಿ ಘೋಷಿಸಿರುವ ಉಪನಗರ ರೈಲು ಯೋಜನೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸನುಮೋದನೆ ಬಾಕಿ ಇದ್ದು, ಶೀಘ್ರದಲ್ಲೇ ಅನುಮೋದನೆ ಸಿಗುವ ನಿರೀಕ್ಷೆ ಇದೆ.
ಯೋಜನೆಗೆ ತಗುಲುವ ವೆಚ್ಚ ಹಂಚಿಕೆ
ಈ ಯೋಜನೆಗೆ ಅನುಷ್ಠಾನಕ್ಕೆ ತಗುಲುವ ವೆಚ್ಚ ಹಂಚಿಕೆಯಲ್ಲಿ ಗೊಂದಲ ಶುರುವಾಗಿದೆ. ಏಕೆಂದರೆ , ಈ ಹಿಂದೆ ಯೋಜನೆ ವ್ಯಾಪ್ತಿಗೆ ಬರುವ ರೈಲ್ವೆ ಭೂಮಿಯನ್ನು ಒಂದು ರೂ.ಗೆ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು.
ರೈಲ್ವೆ ಯೋಜನೆಗೆ ಭೂಮಿ ನೀಡಲಿರುವ ಕೇಂದ್ರ ಸರ್ಕಾರ
ಇದೀಗ ಕೇಂದ್ರ ಸರ್ಕಾರ ಯೋಜನೆಗೆ ರೈಲ್ವೆ ಭೂಮಿ ನೀಡುವುದರಿಂದ ಯೋಜನಾ ವೆಚ್ಚ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ತಿಳಿಸಿದೆ ಎನ್ನಲಾಗಿದೆ.
ಶೇ.60ರಷ್ಟು ಹಣಕಾಸು ಸಂಸ್ಥೆಯಿಂದ ಸಾಲ
ಉಪನಗರ ರೈಲು ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಅನುದಾನದ ಪೈಕಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ ಶೇ.20ರಷ್ಟು ಭರಿಸುವುದು, ಉಳಿದ ಶೇ.60ರಷ್ಟನ್ನು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಒಪ್ಪಿಗೆ ಸೂಚಿಸಲಾಗಿದೆ. ಇದೀಗ ಕೇಂದ್ರ ಸರ್ಕಾರ ತನ್ನ ಪಾಲಿನ ಶೇ.20ರಷ್ಟು ಅನುದಾನವನ್ನು ರೈಲ್ವೆ ಭೂಮಿಗೆ ಸರಿದೂಗಿಸಿದರೆ , ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆಯಾಗಲಿದೆ.