ಆರ್ಥಿಕ ಸಂಕಷ್ಟ: ಕೆ.ಆರ್. ಪುರಂ- ಸಿಲ್ಕ್ ಜಂಕ್ಷನ್ ಮತ್ತಷ್ಟು ವಿಳಂಬ
ಕೆ.ಆರ್. ಪುರಂ ಹಾಗೂ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗಿನ ಮೆಟ್ರೋ ರೈಲು ಯೋಜನೆ ವಿಳಂಬ. ಹಣಕಾಸಿನ ಕೊರತೆ ಹಾಗೂ ಭೂ ಸ್ವಾಧೀನ ಪ್ರಕ್ರಿಯೆಗಳಲ್ಲಿ ಆಗಿರುವ ಕೆಲ ತೊಡಕುಗಳಿಂದಾಗಿ ವಿಳಂಬ.
ಬೆಂಗಳೂರು, ಆಗಸ್ಟ್ 10: ಬಹು ನಿರೀಕ್ಷಿತ ಯೋಜನೆಯಾದ ಸಿಲ್ಕ್ ಬೋರ್ಡ್ ನಿಂದ ಕೆ.ಆರ್.ಪುರಂವರೆಗಿನ ನಮ್ಮ ಮೆಟ್ರೋ ರೈಲು ಮಾರ್ಗದ ಕಾಮಗಾರಿ, ಹಣಕಾಸು ಕೊರತೆ ಹಾಗೂ ಭೂ ಸ್ವಾಧೀನ ಸಮಸ್ಯೆಗಳಿಂದಾಗಿ ವಿಳಂಬವಾಗುತ್ತಿದೆ. ಹಾಗಾಗಿ, ಇಷ್ಟರಲ್ಲೇ ಶುರುವಾಗಬೇಕಿದ್ದ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಎಂದು ಹೇಳಲಾಗಿದೆ.
85 ವರ್ಷದ ವೃದ್ಧೆ ಕೆಐಎಡಿಬಿಗೆ ಕೋಟಿಗಟ್ಟಲೆ ನಾಮ ಹಾಕಿದ ಕುತೂಹಲದ ಕತೆ!
ಅಸಲಿಗೆ ಈ ಯೋಜನೆಯು ಡಬ್ಬಲ್ ಡೆಕ್ಕರ್ ಮಾದರಿಯ ಯೋಜನೆ. ಅಂದರೆ, ಮೆಟ್ರೋ ರೈಲು ಮಾರ್ಗ ಹಾಗೂ ಸಾಮಾನ್ಯ ರಸ್ತೆ - ಈ ಎರಡನ್ನೂ ಒಂದರ ಮೇಲೊಂದು ನಿರ್ಮಾಣ ಮಾಡುವ ವಿಶಿಷ್ಠ ಯೋಜನೆ ಇದು. ಇದರ ಯೋಜನಾ ವೆಚ್ಛ 4,202 ಕೋಟಿ ರು.
50 ದಿನ, 1.5 ಕೋಟಿ ಜನ: ಇದು 'ನಮ್ಮ ಮೆಟ್ರೋ' ಮೈಲಿಗಲ್ಲು!
ಈಗಾಗಲೇ, ಈ ಯೋಜನೆಗೆ ತನ್ನ ಕಡೆಯಿಂದ 1,100 ಕೋಟಿ ರು. ನೀಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಇನ್ನುಳಿದ ಹಣವನ್ನು ಕೆಲ ಕಂಪನಿಗಳೊಂದಿಗಿನ 'ಇನ್ನೋವೇಟಿವ್ ಫೈನಾನ್ಸಿಂಗ್' ಹಾಗೂ ಸಾರ್ವಜನಿಕ ಸಂಸ್ಥೆಗಳ ಸಹಭಾಗಿತ್ವ (ಪಿಪಿಪಿ) ಮೂಲಕ ಪಡೆಯಲು ನಿರ್ಧರಿಸಲಾಗಿದೆ.
ಇನ್ನೂ ಮೂರು ವರ್ಷ ಬೇಕಾ?
ಸಮಸ್ಯೆಯಾಗಿರುವುದು ಇಲ್ಲೇ. ಇನ್ನೋವೇಟಿವ್ ಫೈನಾನ್ಸಿಂಗ್ ಹಾಗೂ ಸಾರ್ವಜನಿಕ ಸಂಸ್ಥೆಗಳ ಸಹಭಾಗಿತ್ವದ ಮೂಲಕ ಯೋಜನೆಗೆ ಬೇಕಾದ ಹಣ ಹರಿದುಬರಲು ಇನ್ನೂ ಮೂರು ವರ್ಷವಾದರೂ ಕಾಯಬೇಕಾದ ಪ್ರಮೇಯ ಬಂದೊದಗಿದೆ. ಈ ಹಿನ್ನೆಲೆಯಲ್ಲಿ, ಕಾಮಗಾರಿ ವಿಳಂಬವಾಗಿದೆ ಎಂದು ಹೇಳಲಾಗಿದೆ.
ಕಾಮಗಾರಿ ವಿಳಂಬ
ಈ ರೈಲು ಮಾರ್ಗದ ಯೋಜನೆಗಾಗಿ ಕೈಗೊಳ್ಳಲಾಗಿರುವ ಭೂ ಸ್ವಾಧೀನ ಪ್ರಕ್ರಿಯೆಯಲ್ಲೂ ಹಲವಾರು ವಿಘ್ನಗಳು ತಲೆದೋರಿರುವುದರಿಂದ ಕಾಮಗಾರಿ ವಿಳಂಬವಾಗಲು ಮತ್ತೊಂದು ಕಾರಣವಾಗಿದೆ ಎಂದು ಹೇಳಲಾಗಿದೆ.
ಒಪ್ಪಂದಗಳಿಗೆ ಸಹಿ
ಹಣದ ಕೊರತೆಯ ಬಗ್ಗೆ ವಿವರಣೆ ನೀಡಿರುವ ಮೆಟ್ರೋ ರೈಲು ಸಂಸ್ಥೆಯ (ಬಿಎಂಆರ್ ಸಿಎಲ್) ಹಣಕಾಸು ಮತ್ತು ಸಾರ್ವಜನಿಕ ಸಂಪರ್ಕ ವಿಭಾಗದ ಪ್ರಧಾನ ವ್ಯವಸ್ಥಾಪಕ ವಸಂತ್ ರಾವ್, ಸದ್ಯದ ಮಟ್ಟಿಗೆ ಕೇವಲ ಎಂಬಸಿ ಗ್ರೂಪ್ ಮಾತ್ರ ಯೋಜನೆಗೆ 100 ಕೋಟಿ ರು. ನೀಡಲು ಮುಂದೆ ಬಂದಿದೆ. ಇನ್ನೂ ಹಲವಾರು ಕಂಪನಿಗಳೊಂದಿಗೆ ಈಗಾಗಲೇ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಹಾಗಾಗಿ, ಯೋಜನೆ ಆರಂಭಿಸಲು ಕನಿಷ್ಠ 250 ಕೋಟಿ ರು. ಗಳಾದರೂ ಬೇಕಾಗುತ್ತದೆ. ಆದರೆ, ಆ ಹಣ ಬರುವವರೆಗೂ ನಾವು ಸುಮ್ಮನೇ ಕೂಡಬೇಕಾಗಿದೆ ಎಂದಿದ್ದಾರೆ.
ಕೆ.ಆರ್. ಪುರಂ ನಿಲ್ದಾಣಕ್ಕೆ ಭೂಮಿ ಸಿದ್ಧ!
ಭೂ ಸ್ವಾಧೀನದ ಸಮಸ್ಯೆಗಳನ್ನು ಬಿಡಿಸಿಟ್ಟ ಈ ವಿಭಾಗದ ಅಧಿಕಾರಿ ಚನ್ನಪ್ಪ ಗೌಡ, ''ಮೆಟ್ರೋ ರೈಲು ಮಾರ್ಗದ ನಿಲ್ದಾಣಗಳ ನಿರ್ಮಾಣಕ್ಕಾಗಿ ನಾವು ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈಗಾಗಲೇ ಕೆ.ಆರ್. ಪುರಂ ನಿಲ್ದಾಣಕ್ಕೆ ಬೇಕಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ, ಮಾರ್ಗದ ಇನ್ನುಳಿದ ನಿಲ್ದಾಣಗಳಿಗಾಗಿ ಭೂ ಸ್ವಾಧೀನ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಇದರಲ್ಲಿ ಕೆಲ ತಕರಾರುಗಳು ಎದ್ದಿವೆ. ಇವೆಲ್ಲವನ್ನೂ ಕೂಲಂಕಷವಾಗಿ ನಿವಾರಿಸಿಕೊಂಡು ಹೆಜ್ಜೆ ಇಡಲು ಕೊಂಚ ತಡವಾಗುತ್ತದೆ'' ಎಂದಿದ್ದಾರೆ.