2 ಸಾವಿರ ಪೆಟ್ರೋಲ್ ಪೂರೈಕೆ ಲಾರಿಗಳ ಸಂಚಾರ ಸ್ಥಗಿತ
ಬೆಂಗಳೂರು, ಜನವರಿ, 27 : ಬೆಂಗಳೂರು ಸೇರಿದಂತೆ ಬೆಂಗಳೂರಿನ ಸುತ್ತಮುತ್ತಲ ನಗರದಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಮಿತಿಮೀರಿದೆ. ವಾಹನ ದಟ್ಟಣೆಗಿಂತಲೂ ರಸ್ತೆ ಗುಂಡಿಗಳಿಂದ ತಪ್ಪಿಸಿಕೊಂಡು ವಾಹನಗಳನ್ನು ಓಡಿಸಿಕೊಂಡು ಹೋಗುವುದು ದೊಡ್ಡ ಸಾಹಸವೇ ಸರಿ.
ಬೆಂಗಳೂರು ಹೊರವಲಯದಲ್ಲಿರುವ ಹೊಸಕೋಟೆ ಬಳಿ ರಸ್ತೆ ಗುಂಡಿಗಳಿಂದ ಬೇಸತ್ತಿರುವ ಪೆಟ್ರೋಲ್ ಪೂರೈಕೆ ಚಾಲಕರು ಸುಮಾರು 2 ಸಾವಿರ ಪೆಟ್ರೋಲ್ ಲಾರಿಗಳ ಸಂಚಾರವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಶನಿವಾರ ನಡೆಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸ ಕೋಟೆಯ ದೇವನಗುಂ ಐಓಸಿ ಕೇಂದ್ರದ ಬಳಿ ಲಾರಿಗಳನ್ನು ನಿಲ್ಲಿಸಿ ಪ್ರತಿಭಟಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ವ್ಯತ್ಯಯ ಸಾಧ್ಯತೆ ಇದೆ.
ಲಾರಿಗಳಲ್ಲಿ ಪೆಟ್ರೋಲ್ ಗಳನ್ನು ತುಂಬಿಸಿಕೊಂಡು ಈ ರಸ್ತೆಗಳಲ್ಲಿ ಹೋಗಲು ಸಾಧ್ಯವಾಗುತ್ತಿಲ್ಲ, 10 ಕಿ.ಮೀ ವ್ಯಾಪ್ತಿಯಲ್ಲಿ ಪ್ರತಿ ಹೆಜ್ಜೆ ಹೆಜ್ಜೆಗೂ ಗುಂಡಿಗಳಿವೆ. ಮಾಲೂರು ಕ್ರಾಸ್-ದೇವನಗುಂಡಿ ಐಓಸಿ ಟರ್ಮಿನಲ್ ವರೆಗೂ ರಸ್ತೆ ಗುಂಡಿಗಳಿಂದಾಗಿ ತಿಂಗಳಿನಿಂದ ಪದೇ ಪದೇ ಲಾರಿ ಅಪಘಾತಗಳು ಹೆಚ್ಚಾಗುತ್ತಿದೆ ಇದರಿಂದ ಬೇಸತ್ತ ಪೆಟ್ರೋಲ್ ಸಾಗಾಣಿಕೆ ವಾಹನಗಳ ಚಾಲಕರ ಸಂಘ ಪ್ರತಿಭಟನೆ ನಡೆಸುತ್ತಿದೆ.